ಚಿಕ್ಕಬಳ್ಳಾಪುರ, ನ. 24 : ಕೆಲಸಕ್ಕೆಂದು ತೆರಳುತ್ತಿದ್ದ ಮಹಿಳೆಯ ಮೇಲೆ ಇಬ್ಬರು ಬುರ್ಖಾಧಾರಿಗಳು ಆಸಿಡ್ ಹಾಕಿರುವ ಘಟನೆ ಮಂಚೇನಹಳ್ಳಿಯಲ್ಲಿ ನಡೆದಿದೆ. ಕಣ್ಣು ಮತ್ತು ಬಲಗೈಗೆ ಗಾಯವಾಗಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗೌರಿಬಿದನೂರಿನ ಮಂಚೇನಹಳ್ಳಿ ಹೋಬಳಿಯ ಹಳೇ ಬುದ್ಧಿವಂತನಹಳ್ಳಿ ಗ್ರಾಮದ ವಾಸಿ ಲಕ್ಷ್ಮಮ್ಮ (41) ಎಂಬುವವರ ಮೇಲೆ ಆಸಿಡ್ ದಾಳಿ ನಡೆಸಲಾಗಿದೆ. ಚಿಕ್ಕಬಳ್ಳಾಪುರದ ಕೊಯಿಲ್ ಕಾರ್ನರ್ ಶಾಲೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು.
ಪ್ರತಿದಿನ ಬೆಳಗ್ಗೆ 6ಗಂಟೆಗೆ ಮಂಚೇನಹಳ್ಳಿಗೆ ಬಂದು ಅಲ್ಲಿಂದ ಬಸ್ ಮೂಲಕ ಲಕ್ಷ್ಮಮ್ಮ ಚಿಕ್ಕಬಳ್ಳಾಪುರಕ್ಕೆ ಹೋಗುತ್ತಿದ್ದರು. ಇಂದು ಬೆಳಗ್ಗೆ ಮಂಚೇನಹಳ್ಳಿಗೆ ಬಂದಾಗ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಅವರ ಮೇಲೆ ಆಸಿಡ್ ದಾಳಿ ನಡೆಸಿದ್ದಾರೆ.
ಆಸಿಡ್ ದಾಳಿಯಿಂದಾಗಿ ಲಕ್ಷ್ಮಮ್ಮ ಅವರ ಬಲಗೈ ಮತ್ತು ಕಣ್ಣಿನ ಭಾಗದಲ್ಲಿ ಸುಟ್ಟಗಾಯಗಳಾಗಿದ್ದು, ಗೌರಿಬಿದನೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎಎಸ್ಪಿ ಕೆ.ರಾಧಿಕಾ, ಮಂಚೇನಹಳ್ಳಿ ಠಾಣೆ ಎಸ್ಐ ಸುಂದರ್ ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಯಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಲಕ್ಷ್ಮಮ್ಮ ಅವರ ಪತಿ ಗಂಗರಾಜು ಕೃಷಿಕರಾಗಿದ್ದು, ಮಗಳು ಪಿಯುಸಿ ಹಾಗೂ ಮಗ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆಸಿಡ್ ದಾಳಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.