ಬಂಟ್ವಾಳ,ನ.24: ರಾಷ್ಟ್ರೀಯ ಹೆದ್ದಾರಿ ಸನಿಹ ಬ್ರಹ್ಮನ ಸನ್ನಿಧಿ ಇರುವ ಕಾರಣದಿಂದಾಗಿ ಇಲ್ಲಿಗೆ ಬ್ರಹ್ಮರೆಗುಡಿ ಎನ್ನುತ್ತಿದ್ದರು. ಈಗ ಬ್ರಹ್ಮರಕೂಟ್ಲು ಎಂದು ಹೆಸರು. ವಾಹನ ಚಾಲಕರು, ಪ್ರಯಾಣಿಕರು, ಸ್ಥಳೀಯ ಗ್ರಾಮಸ್ಥರು, ರೈತರು ಈ ಸನ್ನಿಧಿಗೆ ನಿತ್ಯವೂ ಹರಕೆ ಹಾಕುವ ಸಂಪ್ರದಾಯ ಇಂದಿಗೂ ನಡೆದುಕೊಂಡುಬಂದಿದೆ. ಇತ್ತೀಚಿನ ಕೆಲವೊಂದು ದಿನಗಳಿಂದ ಸನ್ನಿಧಿ ಕಾಲ ವಶಕ್ಕೆ ಸೇರುವ ಅಪಾಯವೂ ಇದೆ. ಭಾನುವಾರ ನಡೆದ ಕೃಷಿ ಕ್ರಾಂತಿ ಬ್ರಹ್ಮರ ಸನ್ನಿಧಿಗೆ ಪುನರ್ ಕಾಯಕಲ್ಪಕ್ಕೆ ವಿಶೇಷ ಸ್ಪರ್ಶ ನೀಡಿದೆ.
ಉಪಹಾರಕ್ಕೆ ತುಳುನಾಡಿನ ಸಾಂಪ್ರದಾಯಿಕ ತಿಂಡಿ-ತಿನಸುಗಳು, ಕೆಸರಿನ ಗದ್ದೆಯಲ್ಲಿ ಮಕ್ಕಳ, ಮಹಿಳೆಯರ ಜಾನಪದ ಆಟೋಟ, ಕೃಷಿ ಮಾಹಿತಿಯುಳ್ಳ ಪುಸ್ತಕ ಮಳಿಗೆ, ವೇದಿಕೆಯಲ್ಲಿ ಬೇಸಾಯ ಪರಿಕರಗಳು, ಅಪರೂಪದ ತುಳು ಪದಗಳು ‘ಕೃಷಿ ಕ್ರಾಂತಿ’ ಕಾರ್ಯಕ್ರಮದಲ್ಲಿ ವಿಶೇಷ ಗಮನ ಸೆಳೆದವು.
ಬ್ರಹ್ಮರಕೂಟ್ಲು, ಜುಮಾದಿಗುಡ್ಡೆ ಹಿಂದೂ ಸೇವಾ ಸಂಘ ಮತ್ತು ಸ್ಥಳೀಯ ಗ್ರಾಮಸ್ಥರ ಸಹಯೋಗದಲ್ಲಿ ಬ್ರಹ್ಮರಕೂಟ್ಲುವಿನಲ್ಲಿ ನಡೆದ ಕೃಷಿ ಕ್ರಾಂತಿ ವಿಭಿನ್ನ ಕಾರ್ಯಕ್ರಮ ಸಾರ್ವಜನಿಕರ ಮೆಚ್ಚುಗೆ ಗಳಿಸುವ ಜತೆಗೆ ಮಾದರಿಯಾಗಿದೆ. ಗದ್ದೆಯಲ್ಲಿ ಹಾಡುತ್ತಾ ನೇಜಿ ನಾಟಿ ಮಾಡುವ ಪರಿಕಲ್ಪನೆಯನ್ನು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರಶಂಸಿಸಿದರು.
ಮಹಿಳೆಯರು, ಹೆಣ್ಮಕ್ಕಳು, ಹುಡುಗರು, ಪುರುಷರು ಗದ್ದೆಗಿಳಿದು ನಾಮೂಹಿಕ ಭತ್ತ ನಾಟಿಗೆ ಕೈ ಜೋಡಿಸಿದವರು. ನಾಟಿ ಮಾಡಲು ಮಹಿಳೆಯರೊಂದಿಗೆ ಪುರುಷರೂ ಸಾಥ್ ನೀಡಿ ಗಮನ ಸೆಳೆದರು. ಕೆಸರಿನಲ್ಲಿ ಮಹಿಳೆಯರ ಓಟ, ಹೆಣ್ಮಕ್ಕಳ ಓಟ, ಮಕ್ಕಳ ಓಟ, ನಿಧಿ ಶೋದ, ಹುಡುಗರು ಕಬ್ಬಡಿ ನಡೆಯಿತು. ನಿಧಿ ಶೋಧ ಸ್ಪರ್ಧೆಯಲ್ಲಿ ತುಂಬೆ ಬಿಎ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಮನೀಶ್ ವಿಜೇತರಾದರು.
ಕೈಕಂಬ, ಗಂಜಿ ಮಠದ ಮುತ್ತ ಬಳಗದವರು ಡೋಲು ಬಾರಿಸಿದರು. ಕೃಷಿಕ ರಮಾನಾಥ ಶೆಟ್ಟಿ ದೀಪಾವಳಿ ಹಿನ್ನೆಲೆಯನ್ನು ಸಾರುವ ತುಳುವಿನಲ್ಲಿ ಬಲೀಂದ್ರ ಕರೆದರು. ಹಬ್ಬ ಹರಿದಿನ ವಿಶೇಷಗಳನ್ನು ತಿಳಿಸಲಾಯಿತು.
ಕೃಷಿ ಪುಸ್ತಕ ಮಳಿಗೆ: ಲೇಖಕರಾದ ಉಗ್ಗಪ್ಪ ಪೂಜಾರಿ, ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್, ನಾರಾಯಣ ಭಟ್ ರಾಮಕುಂಜ, ಬನ್ನಂಜೆ ಬಾಬು ಅಮೀನ್, ಶೈಲೇಜ್ ಹೊಳ್ಳ ಅವರ ಕೃಷಿ ಸಂಬಂಧ ಕೃತಿಗಳ ಮಳಿಗೆ ಏರ್ಪಡಿಸಲಾಗಿದ್ದು, ಅವುಗಳಿಗೆ ಭಾರಿ ಬೇಡಿಕೆ ಇತ್ತು. ವಿವಿಧ ತಳಿಯ ಭತ್ತ ಬೀಜಗಳಿಗೆ ಬೇಡಿಕೆ ಇತ್ತು. ಅವುಗಳ ಬಗ್ಗೆ ಸಾರ್ವಜನಿಕರು ರೈತರಿಂದ ಮತ್ತು ಸಂಘಟಕರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದರು.
ಗಣ್ಯರು ಹಿಂಗಾರ ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಕಲಸೆ, ಭತ್ತದ ಬೀಜ, ಪಡಿ, ನೇಗಿಲು, ಹಗ್ಗ ಮತ್ತಿತರ ಬೇಸಾಯ ಪರಿಕರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಕೋಣಗಳನ್ನು ಗದ್ದೆಗೆ ಇಳಿಸುವ ಮೂಲಕ ಭತ್ತ ನಾಟಿಗೆ ಚಾಲನೆ ನೀಡಿದರು. ಗದ್ದೆಗಳಿಗೆ ಗುರಿಕಂಡ, ಪೋಂಕೆಕಂಡ, ಕಾಯರ್ದಡಿ ಕಂಡ, ನರ್ತೆಕಂಡ ಎನ್ನುವ ಹಳೆಯ ಹೆಸರಿಡಲಾಯಿತು. ದಯಾನಂದ ಕತ್ತಲ್ಸಾರ್, ನಾಗೇಶ್ ಕುಲಾಲ್ ಮತ್ತು ರಾಜೇಂದ್ರ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು