ಕುಂದಾಪುರ: ಜಿಲ್ಲೆಯ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಕುಂದಾಪುರದಲ್ಲಿ ನಡೆಸಲಾದ ಉಚಿತ ಉದ್ಯೋಗ ಮೇಳಕ್ಕೆ ನಿರೀಕ್ಷೆಗೂ ಮೀರಿ ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ಮೂಲಕ ಮೇಳ ಯಶಸ್ವಿಯಾಯಿತು. ನವೆಂಬರ್ ೨೩ರಂದು ಭಾನುವಾರ ಶೇಫಿನ್ಸ್ ವತಿಯಿಂದ ಕುಂದಾಪುರದ ’ಶೆಫಿನ್ಸ್ ಇಂಗ್ಲಿಷ್ ಅಕಾಡೆಮಿ’ ಶಾಂತಿನಿಕೇತನ ರಸ್ತೆ, ನೆಹರೂ ಮೈದಾನದ ಎದುರು ಈ ಉಚಿತ ಉದ್ಯೋಗ ಮೇಳ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಚಿನ್ಮಯೀ ಆಸ್ಪತ್ರೆಯ ಆಡಳಿತ ವ್ಯವಸ್ಥಾಪಕ ಡಾ. ಉಮೇಶ್ ಪುತ್ರನ್ ಉದ್ಯೋಗಾಕಾಂಕ್ಷಿಗಳಿಂದ ಅರ್ಜಿ ನಮೂನೆ ಸ್ವೀಕರಿಸುವ ಮೂಲಕ ಉದ್ಘಾಟಿಸಿ, ಒಂದು ಕಡೆಯಿಂದ ಸೂಕ್ತ ಉದ್ಯೋಗಗಳಿಗೆ ಮಾನವ ಸಂಪನ್ಮೂಲ ಕೊರತೆಯಿದೆ ಎನ್ನುವ ಅಭಿಪ್ರಾಯಗಳಿದ್ದರೆ, ವಿದ್ಯಾವಂತ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗವೇ ಸಿಗುತ್ತಿಲ್ಲ ಎನ್ನುವ ದೂರು ಕೇಳಿ ಬರುತ್ತಿದೆ. ಇದಕ್ಕೆ ಉದ್ಯೋಗಾರ್ಥಿಗಳ ಮತ್ತು ಸಂಸ್ಥೆಗಳ ನಡುವಿನೆ ಸಂಯೋಜನೆಯ ಸಮಸ್ಯೆಯೇ ಕಾರಣವಾಗಿದ್ದು, ಇದಕ್ಕೆ ಪರಿಹಾರ ನೀಡುವಲ್ಲಿ ಶೆಫಿನ್ಸ್ ಎನ್ನುವ ಸಂಸ್ಥೆಯ ಉಚಿತವಾಗಿ ಉದ್ಯೋಗ ಮೇಳ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶೆಫಿನ್ಸ್ ಮುಖ್ಯಸ್ಥ ಮನೋಜ್ ಕಡಬ, ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಕೇಂದ್ರ ಕಛೇರಿ ಹೊಂದಿದ್ದು, ಉಡುಪಿ ಮತ್ತು ಕುಂದಾಪುರಗಳಲ್ಲಿ ಯಶಸ್ವಿಯಾಗಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಸಾಮಾಜಿಕ ಕಳಕಳಿಯಿಂದಷ್ಟೇ ಈ ಕೆಲಸ ಮಾಡುತ್ತಿದ್ದು, ನಿರೀಕ್ಷೆಗೂ ಮೀರಿ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿರುವುದು ನಮ್ಮ ಪ್ರಯತ್ನಕ್ಕೆ ಹುಮ್ಮಸ್ಸು ನೀಡಿದೆ. ನವೆಂಬರ್ ೩೦ರಂದು ಸಂಸ್ಥೆಯು ಹಮ್ಮಿಕೊಳ್ಳುತ್ತಿರುವ “ಸಂದರ್ಶನ ಎದುರಿಸುವ ತರಬೇತಿ” ಶಿಬಿರಕ್ಕೂ ನೊಂದಣಿ ಮಾಡಿಕೊಳ್ಳಬಹುದಾಗಿದೆ ಎಂದರು.
ಮೇಳವು ಪೂರ್ವಾಹ್ನ ೯.೩೦ರಿಂದ ಸಾಯಂಕಾಲ ೫.೦೦ ರವರೆಗೂ ನಡೆಯಿತು. ಉಡುಪಿ ಜಿಲ್ಲೆಯ ಹಲವು ಉದ್ಯೋಗದಾತರು ಆಗಮಿಸಿದ್ದರು. ಈ ಸಂದರ್ಭ ಉದ್ಯೋಗಾರ್ಥಿಗಳ ನೇರ ಸಂದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.