ಮಂಗಳೂರು : ವಿಶ್ವ ಮೀನುಗಾರರ ದಿನದ ಅಂಗವಾಗಿ ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ವತಿಯಿಂದ ಮಾರ್ಚ್ ನಲ್ಲಿ ಜರಗುವ ಡೆಲ್ಲಿ ಚಲೋ ಜನಜಾಗೃತಿ ಕಾರ್ಯಕ್ರಮ ಮತ್ತು ಮಂಗಳೂರಿನಿಂದ ತಿರುವನಂತಪುರದ ವರೆಗೆ ಹಮ್ಮಿಕೊಳ್ಳಲಾದ ಬೋಟ್ ರ್ಯಾಲಿಗೆ ಶುಕ್ರವಾರ ಮಹಾರಾಷ್ಟ್ರದ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತೀಯ ಸಾಂಪ್ರದಾಯಿಕ ಮೀನುಗಾರಿಕೆ ಮತ್ತು ಮೀನುಗಾರರ ಹಿತದೃಷ್ಟಿಯಿಂದ ಮುರಾರಿ ಸಮಿತಿ ನೀಡಿರುವ ವರದಿಯನ್ನು ಸರಕಾರ ಜಾರಿಗೊಳಿಸಬೇಕು. ಮೀನಾಕುಮಾರಿ ಸಮಿತಿ ನೀಡಿರುವ ವರದಿಯನ್ನು ಅನುಷ್ಠಾನಕ್ಕೆ ತರಲು ಸರಕಾರ ತುದಿಗಾಲಲ್ಲಿ ನಿಂತಿದೆ. ಆದರೆ ಮೀನಾಕುಮಾರಿ ವರದಿಯಲ್ಲಿ ವಿದೇಶಿ ಬೋಟುಗಳಿಗೆ ಭಾರತದ ಸಮುದ್ರದಲ್ಲಿ ಮೀನುಗಾರಿಕೆ ನಡೆಸಲು ಪರವಾನಿಗೆ ನೀಡುವ ಕುರಿತು ಉಲ್ಲೇಖಿಸಲಾಗಿದೆ. ಇದರಿಂದ ಭಾರತೀಯ ಮೀನುಗಾರರ ಜೀವನ ನಿರ್ವಹಣೆಗೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ ಎಂದು ಹೇಳಿದರು.
ಕೇಂದ್ರ ಸರಕಾರ ಕಾರ್ಪೋರೇಟ್ ವಲಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದೆ. ಪ್ರಧಾನಿ ಮೋದಿ ವಿದೇಶಿ ಪ್ರವಾಸ ಕೈಗೊಂಡು ಅಲ್ಲಿನ ಕೈಗಾರಿಕೋದ್ಯಮಿಗಳನ್ನು ಭಾರತದತ್ತ ಆಹ್ವಾನಿಸುತ್ತಿದ್ದಾರೆ. ವಿದೇಶಿ ಕಾರ್ಪೋರೇಟ್ ಭಾರತಕ್ಕೆ ಲಗ್ಗೆ ಇಟ್ಟರೆ ಇಲ್ಲಿನ ಮೀನುಗಾರರು , ಕೃಷಿಕರ ಮೇಲೆ ಪರಿಣಾಮ ಬೀರಲಿದೆ ಎಂದು ಮೇಧಾ ಹೇಳಿದರು.
ಕಾರ್ಯಕ್ರಮದಲ್ಲಿ ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್, ಉಪ ಮೇಯರ್ ಕವಿತಾ ವಾಸು, ಸಮಿತಿ ಗೌರವಾಧ್ಯಕ್ಷ ಪಿ.ಎಂ.ತಾಂಡೇಲ್, ಅಧ್ಯಕ್ಷ ವಾಸುದೇವ್ ಬೋಳಾರ, ಕಾರ್ಯಾಧ್ಯಕ್ಷ ಲೋಕನಾಥ್ ಬೋಳಾರ್, ಉಪಾಧ್ಯಕ್ಷ ನಿತಿನ್ ಕುಮಾರ್ ಮತ್ತಿತರರ ಮುಖಂಡರು ಉಪಸ್ಥಿತರಿದ್ದರು