ದುಬೈ: ಕರ್ನಾಟಕ ಸಂಘ ದುಬಾಯಿಯ ಕರ್ನಾಟಕ ರಾಜ್ಯೋತ್ಸವ-2025 ಕಾರ್ಯಕ್ರಮ ನ.9 ರಂದು ನಗರದ ನ್ಯೂ ಡಾನ್ ಪ್ರೈವೇಟ್ ಸ್ಕೂಲ್ ನಲ್ಲಿ ಸಾವಿರಾರು ಕನ್ನಡಿಗರ ಸಮಕ್ಷಮದಲ್ಲಿ ಅದ್ದೂರಿಯಾಗಿ ನಡೆಯಿತು.ಬೆಳಿಗ್ಗೆ ಹನ್ನೊಂದು ಗಂಟೆಗೆ ಆರಂಭಗೊಂಡು ರಾತ್ರಿ ಎಂಟರವರೆಗೆ ನಡೆದ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಯುಎಇಯ ಮೂಲೆ ಮೂಲೆಗಳಿಂದ ಸಾವಿರಾರು ಕನ್ನಡಿಗರು ಭಾಗವಹಿಸಿ 70ನೇ ವರ್ಷದ ಕರ್ನಾಟಕ ರಾಜ್ಯೋತ್ಸವದ ಸವಿಯನ್ನು ಸವಿದರು.

ಬೆಳಿಗ್ಗೆ ನಡೆದ ಜಾಗತಿಕ ವ್ಯಾಪಾರ ವೇದಿಕೆಯ ಅನಾವರಣವನ್ನು ಕರ್ನಾಟಕದ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಕೆ.ವೆಂಕಟೇಶ್ ರವರು ಉದ್ಘಾಟಿಸಿ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಶುಭಹಾರೈಸಿದರು.ನಂತರ ಯುಎಇಯ ನೃತ್ಯ ತಂಡದವರಿಂದ ನೃತ್ಯ ಕಾರ್ಯಕ್ರಮ,ಯುಎಇಯ ಗಾಯಕ ಗಾಯಕಿಯರಿಂದ ಸಂಗೀತ ಕಾರ್ಯಕ್ರಮ, ಸು ಫ್ರಮ್ ಸೋ ಚಿತ್ರ ತಂಡದವರಿಂದ ಹಾಸ್ಯ ಕಾರ್ಯಕ್ರಮ ಮತ್ತು ಕರುನಾಡಿನಿಂದ ಆಗಮಿಸಿದ ಎಸ್ಪಿಬಿ ಮತ್ತು ನಿಶಾಂತ್ ತಂಡದವರಿಂದ ಲೈವ್ ಮ್ಯೂಸಿಕ್ ಕಾರ್ಯಕ್ರಮಗಳು ನಡೆದವು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮ: ಸಂಜೆ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕರ್ನಾಟಕ ಸರಕಾರದ ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್ ಮಾತನಾಡಿ, ಎಲ್ಲಾ ಕನ್ನಡಿಗರೂ ನವೆಂಬರ್ ತಿಂಗಳಲ್ಲಿ ಒಗ್ಗಟ್ಟಾಗಿ ಸಾಮರಸ್ಯದಿಂದ ಆಚರಿಸುವ ಕಾರ್ಯಕ್ರಮ ರಾಜ್ಯೋತ್ಸವ ಕಾರ್ಯಕ್ರಮ. ದುಬೈನಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾರೂ ಒಗ್ಗಟ್ಟಾಗಿ ರಾಜ್ಯೋತ್ಸವ ಆಚರಿಸುವಂತಗಲಿ ಎಂದು ಕರೆನೀಡುತ್ತಾ ಯುಎಇಯಲ್ಲಿ ಇರುವ ಎಲ್ಲಾ ಕನ್ನಡಿಗರಿಗೆ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು. ಕಾರ್ಯಕ್ರಮದ ಮುಂಚೆ ಅತಿಥಿ-ಗಣ್ಯರನ್ನು ಮೆರವಣಿಗೆಯ ಮೂಲಕ ವೇದಿಕೆಗೆ ಕರೆ ತರಲಾಯಿತು.
ಅನಿವಾಸಿ ಕನ್ನಡಿಗರ ಸಮಾಜ ಸೇವೆಯನ್ನು ಗುರುತಿಸಿ ಕೊಡಮಾಡುವ ದುಬೈ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಉದ್ಯಮಿ ಸಮದ್ ಬಿರಾಲಿ ಉಚ್ಚಿಲರವರಿಗೆ ನೀಡಿ ಗೌರವಿಸಲಾಯಿತು. ಕಲಾ ಸೇವೆಯನ್ನು ಗುರುತಿಸಿ ಅಲ್ವೀನ್ ಪಿಂಟೋ, ಸಾಹಿತ್ಯ-ಪತ್ರಿಕಾ ರಂಗಕ್ಕೆ ನೀಡಿದ ಸೇವೆಯನ್ನು ಗುರುತಿಸಿ ಇರ್ಷಾದ್ ಮೂಡುಬಿದಿರೆ,ಯಕ್ಷಗಾನ-ನಾಟಕ ರಂಗದ ಸೇವೆಯನ್ನು ಗುರುತಿಸಿ ಚಿದಾನಂದ ಪೂಜಾರಿಯವರಿಗೆ ಸಾಧಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅನಿವಾಸಿ ಉದ್ಯಮಿ ಬಿ.ಝಕರಿಯ ಜೋಕಟ್ಟೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಜೊಸೆಫ್ ಮಥಾಯಿಸ್, ರಚನಾ ಪ್ರಶಸ್ತಿ ಪುರಸ್ಕೃತರಾದ ಪ್ರತಾಪ್ ಮಂಡೋನ್ಸ, ಶೋಭಾ ಮಂಡೋನ್ಸ, ಸಾಧಕಿಯರಾದ ಆಮಿಷ ಆನಂದ್, ವಿಜೀತ ಪೂಜಾರಿ, ಹಿರೀಷ ಚಿತ್ರಳರವರನ್ನು ಗೌರವಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಎಂ.ಎಲ್.ಸಿ.ಶ್ರೀಮತಿ ಆರತಿ ಕೃಷ್ಣ, ಬೆಂಗಳೂರಿನ ಖ್ಯಾತ ಉದ್ಯಮಿ ಕುಶಾಲ್ ಗೌಡ, ಉದ್ಯಮಿಗಳಾದ ನೀಲೆಶ್ ಎಚ್.ಪಿ, ಡಾ.ಬಿ ಆರ್ ಶೆಟ್ಟಿ, ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಇಬ್ರಾಹಿಂ ಗಡಿಯಾರ, ಸಂಜಯ್ ಗೌಡ, ಜಲೀಲ್, ಕನ್ನಡ ಚಿತ್ರರಂಗದ ಶ್ರೀಮತಿ ಜಯಮಾಲಾ, ಸಪ್ತಮಿ ಗೌಡ, ಡಾಲಿ ಧನಂಜಯ್, ಸನಿಲ್ ಗುರು, ಸಂಸ್ಥೆಯ ಮಹಾ ಪೋಷಕರಾದ ರೊನಾಲ್ಡ್ ಮಾರ್ಟಿಸ್, ಗೌರವ ಸಲಹೆಗಾರರಾದ ಜಯಂತ್ ಶೆಟ್ಟಿ, ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪ, ಉಪಾಧ್ಯಕ್ಷರಾದ ದಯಾ ಕಿರೋಡಿಯಾನ್, ಕಾರ್ಯದರ್ಶಿ ಮನೋಹರ ಹೆಗ್ಡೆ, ಜೊತೆ ಕಾರ್ಯದರ್ಶಿ ಮಲ್ಲಿಕಾರ್ಜುನ ಗೌಡ, ಕೋಶಾಧಿಕಾರಿ ನಾಗರಾಜ ರಾವ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಚಿತ್ರ ನಟಿ ಅಂಕಿತ ಅಮರ್,ಯುಎಇಯ ಖ್ಯಾತ ನಿರೂಪಕಿ ಶ್ರೀಮತಿ ಆರತಿ ಅಡಿಗ, ಶ್ರೀಮತಿ ಕಾವ್ಯ ಯುವರಾಜ್ ಮಾಡಿದರು. ಸಂಸ್ಥೆಯ ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷರಾದ ದಯಾ ಕಿರೋಡಿಯಾನ್ ಸ್ವಾಗತಿಸಿ ಜತೆ ಕಾರ್ಯದರ್ಶಿ ಮಲ್ಲಿಕಾರ್ಜುನ ಗೌಡ ಧನ್ಯವಾದವಿತ್ತರು.ಕಾರ್ಯಕ್ರಮದ ಯಶಸ್ವಿಗೆ ದುಡಿದ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ, ಪ್ರಾಯೋಜಕರಿಗೆ, ಮಾಧ್ಯಮ ಮಿತ್ರರಿಗೆ ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪರವರು ಕೃತಜ್ಞತೆ ಸಲ್ಲಿಸಿದರು.
ವರದಿ: ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ದುಬೈ
ಚಿತ್ರ: ಅಶೋಕ್ ಬೆಳ್ಮಣ್, ದುಬೈ
Comments are closed.