ಉಡುಪಿ: ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆಯರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಆರೋಪದಲ್ಲಿ ಉಡುಪಿ ಪೊಲೀಸರಿಂದ ಬಂಧಿತನಾಗಿದ್ದ ಆರೋಪಿ ಶರತ್ ಯಾನೆ ಮೊಹಮ್ಮದ್ ಫಯಾಜ್ ಎಂಬಾತನು ಗಂಗೊಳ್ಳಿ ಠಾಣಾ ವ್ಯಾಪ್ತಿಯ ತ್ರಾಸಿ ಬೀಚ್ ಬಳಿಯಿರುವ ರೆಸಾರ್ಟ್ವೊಂದಕ್ಕೂ ಮಹಿಳೆಯನ್ನು ಪುಸಲಾಯಿಸಿ ವ್ಯಕ್ತಿಯೋರ್ವನೊಂದಿಗೆ ಕಳುಹಿಸಿದ್ದ.

ಈ ಬಗ್ಗೆ ಸಿಕ್ಕ ಖಚಿತ ವರ್ತಮಾನದಂತೆ ದಾಳಿ ನಡೆಸಿದ ಬೈಂದೂರು ಸಿಪಿಐ ನೇತೃತ್ವದ ಪೊಲೀಸರ ತಂಡ ಸಂತ್ರಸ್ತೆ ಮಹಿಳೆಯನ್ನು ರಕ್ಷಿಸಿ ಸಖಿ ಕೇಂದ್ರಕ್ಕೆ ರವಾನಿದ್ದಾರೆ.
ಬೈಂದೂರು ಪೊಲೀಸ್ ವೃತ್ತನಿರೀಕ್ಷಕರಾದ ನಿಲೇಶ್ ಚೌವ್ಹಾಣ ಅವರು ಗಂಗೊಳ್ಳಿ ಪಿಎಸ್ಐ ಪವನ್ ನಾಯಕ್ ಹಾಗೂ ಮಹಿಳಾ ಸಿಬ್ಬಂದಿಗಳ ಜೊತೆ ಆ.25 ರಂದು ದಾಳಿ ನಡೆಸಿದ್ದು ರೆಸಾರ್ಟ್ ರೂಮಿನಲ್ಲಿ ಮಹಿಳೆ ಹಾಗೂ ಇನ್ನೋರ್ವ ಪುರುಷ ಕಂಡುಬಂದಿದ್ದರು. ಈ ವೇಳೆ ಮೊಬೈಲ್ ಫೋನುಗಳು, ಕಾರೊಂದನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿ ಶರತ್ ಯಾನೆ ಮೊಹಮ್ಮದ್ ಫಯಾಜ್ ಎಂಬಾತ ಉಡುಪಿ ನಗರವನ್ನೇ ಕೇಂದ್ರವಾಗಿಸಿಕೊಂಡು ಲಾಭದ ಉದ್ದೇಶದಿಂದ ಕೆಲವು ಲಾಡ್ಜ್ ಹಾಗೂ ರೆಸಾರ್ಟ್ಗಳಿಗೆ ಪುರುಷರ ಜೊತೆ ಮಹಿಳೆಯರನ್ನು ಕಳಿಸುತ್ತಿದ್ದ. ತನ್ನನ್ನು ಕೂಡ ಕೆಲಸ ಕೊಡಿಸುವುದಾಗಿ ನಂಬಿಸಿ ವೈಶ್ಯಾವಾಟಿಕೆ ವೃತ್ತಿಗೆ ದೂಡಿದ್ದು ವ್ಯಕ್ತಿಯೊಂದಿಗೆ ತ್ರಾಸಿಗೆ ಕಳಿಸಿದ್ದ ಎಂದು ಮಹಿಳೆ ತನಿಖೆಯಲ್ಲಿ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.