ಕೊಡಗು: ಕೊಡಗು ಜಿಲ್ಲೆಯ ಕೆ.ಬಾಡಗ ಗ್ರಾಮದ ಪಲ್ಲೇರಿ ಎಂಬಲ್ಲಿ ಮೊಮ್ಮಗ ಮತ್ತು ತಾತನನ್ನು ಬಲಿ ಪಡೆದಿದ್ದ ನರ ಭಕ್ಷಕ ಹುಲಿಯನ್ನು ಪೊನ್ನಂಪೇಟೆ ತಾಲ್ಲೂಕಿನ ನಾಣಚ್ಚಿಯ ಬಳಿ ಸೆರೆ ಹಿಡಿಯಲಾಗಿದೆ.

ಕಳೆದ ಮೂರು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ನರಭಕ್ಷಕ ಹುಲಿ ಜನರನ್ನು ಭೀತಿಗೊಳಿಸಿತ್ತು. ಒಂದೇ ದಿನದಲ್ಲಿ ತಾತ ಮತ್ತು ಮೊಮ್ಮಗ ಇಬ್ಬರನ್ನು ಮನೆಯ ಬಳಿಯಿರುವ ತೋಟದ ಬಳಿಯಲ್ಲಿ ದಾಳಿ ಮಾಡಿ ಕೊಂದು ಹಾಕಿದ್ದಲ್ಲದೆ ಕೆಲವರ ಮೇಲೆ ದಾಳಿ ಕೂಡ ನಡೆಸಿತ್ತು.
ಮಂಗಳವಾರ ಮಧ್ಯಾಹ್ನದ ವೇಳೆಗೆ ಹುಲಿಯನ್ನು ಸೆರೆ ಹಿಡಿಯಲಾಗಿದ್ದು ನರಹಂತಕ ಹುಲಿಯನ್ನು ಪೊನ್ನಂಪೇಟೆ ತಾಲೂಕಿನ ನಾಣಚ್ಚಿ ಗೇಟ್ ಬಳಿ ಸೆರೆ ಹಿಡಿಯಲಾಗಿದೆ. ಚೂರಿ ಕಾಡಿನಲ್ಲಿ ಸುತ್ತಾಡುತ್ತಿದ್ದ ಹುಲಿಗೆ ಅರವಳಿಕೆ ಚುಚ್ಚುಮದ್ದುಗಳನ್ನು ನೀಡಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಇದರಿಂದ ಆತಂಕದಲ್ಲಿದ್ದ ಸ್ಥಳೀಯ ಜನರು ನಿಟ್ಟುಸಿರು ಬಿಡುವಂತಾಗಿದೆ.
ಹುಲಿಯನ್ನು ಜೀವಂತವಾಗಿಯೇ ಸೆರೆ ಹಿಡಿಯಲಾಗಿದ್ದು, ಅಂದಾಜು 8 ರಿಂದ 9 ವರ್ಷ ಪ್ರಾಯ ಗಂಡು ಹುಲಿ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
Comments are closed.