(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮಪಂಚಾಯತ್ ವ್ಯಾಪ್ತಿಯ ಮಾಲಾಡಿ ಎಂಬಲ್ಲಿನ ಶ್ರೀ ನಂದಿಕೇಶ್ವರ ದೇವಸ್ಥಾನ ಹಾಗೂ ಅಂಗನವಾಡಿ, ಶಾಲೆ ಇರುವ ಪರಿಸರದ ಪಕ್ಕದ ತೋಪಿನ ಸಮೀಪದಲ್ಲಿ ಮತ್ತೆ ಚಿರತೆ ಕಾಟ ಹೆಚ್ಚಿದೆ. ಮನೆ ವಠಾರಕ್ಕೆ ಬುಧವಾರ ರಾತ್ರಿ ನುಗ್ಗಿದ ಚಿರತೆ ಸಾಕು ನಾಯಿಯನ್ನು ಹೊತ್ತೊಯ್ದಿದ್ದು ಈ ಭಾಗದ ಜನರಲ್ಲಿ ಆತಂಕ ಮೂಡಿದೆ.

ತೆಕ್ಕಟ್ಟೆ ಸಮೀಪದ ಮಾಲಾಡಿಯ ತೋಪಿನಿಂದ ಮುಂದೆ ಸಾಗಿದಾಗ ಸಿಗುವ ತೆಕ್ಕಟ್ಟೆ ಗ್ರಾ.ಪಂ ಅಧ್ಯಕ್ಷೆ ಮಮತಾ ದೇವಾಡಿಗರ ಪತಿ ಸುರೇಶ್ ದೇವಾಡಿಗರ ನಿವಾಸದ ಎದುರು 7.30ರ ಹೊತ್ತಿಗೆ ಪ್ರತ್ಯಕ್ಷವಾದ ಚಿರತೆ ಅವರ ಮನೆ ಸಾಕು ನಾಯಿಯನ್ನು ನೋಡನೋಡುತ್ತಿದ್ದಂತೆಯೇ ಹೊತ್ತೊಯ್ದಿದೆ.
ಘಟನೆ ವಿವರ: ಇಲ್ಲಿನ ನಿವಾಸಿ ಸುರೇಶ್ ದೇವಾಡಿಗ ಹಾಗೂ ಪತ್ನಿ , ಹಾಗೂ ಮಕ್ಕಳು ಮನೆಯಲ್ಲಿದ್ದು ಇದೇ ವೇಳೆ ಮಕ್ಕಳು ಮನೆ ಹೊರಗಡೆ ಓದುವಿಕೆಯಲ್ಲಿ ತೊಡಗಿಸಿಕೊಂಡಿದ್ದರು. ರಾತ್ರಿ ಮನೆ ನಾಯಿ ಏಕಾಏಕಿ ಬೊಗಳಿದಾಗ ಮನೆಮಂದಿ ನೋಡಿದ್ದು ಚಿರತೆ ನಾಯಿಮೇಲೆ ಹೊತ್ತು ಪಲಾಯನಗೈದಿದೆ. ಕೂಡಲೇ ಮನೆಯವರಾದ ಸತೀಶ್ ದೇವಾಡಿಗ ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದಾರೆ.
ಬೋನು ಇಟ್ಟ ಅರಣ್ಯ ಇಲಾಖೆ:
ನಿರಂತರ ಈ ಭಾಗದಲ್ಲಿ ಚಿರತೆ ಕಾಟವಿದ್ದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದು ಇಲಾಖೆ ಗುರುವಾರ ಬೋನ್ ಇಟ್ಟು ಚಿರತೆ ಹಿಡಿಯುವ ಕಾರ್ಯಾಚರಣೆ ನಡೆಸಲು ಮುಂದಾಗಿದೆ. ಚಿರತೆ ಪ್ರತ್ಯಕ್ಷವಾದ ತೋಪಿನಲ್ಲಿ ಬೋನು ಇಡಲಾಗಿದ್ದು ಕುಂದಾಪುರ ವಲಯ ಅರಣ್ಯಾಧಿಕಾರಿ ಕಿರಣ್ ಬಾಬು, ಉಪವಲಯ ಅರಣ್ಯಾಧಿಕಾರಿ ಉದಯ್, ತೆಕ್ಕಟ್ಟೆ ಗ್ರಾ.ಪಂ ಉಪಾಧ್ಯಕ್ಷ ಸಂಜೀವ ದೇವಾಡಿಗ, ಪಿಡಿಓ ಸುನೀಲ್ ಭೇಟಿ ನೀಡಿದರು.
4 ವರ್ಷದ ಅಂತರದಲ್ಲಿ 5 ಚಿರತೆ ಸೆರೆ…
ನಾಯಿ, ಜಾನುವಾರು ಸೇರಿದಂತೆ ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸುವುದು ಮಾತ್ರವಲ್ಲದೇ ಹಾಡುಹಗಲೇ ಪ್ರತಕ್ಷವಾಗಿ ಚಿರತೆ ನಿರಂತರವಾಗಿ ಉಪಟಳ ನೀಡುತ್ತಿದ್ದು ಮಾಲಾಡಿಯ ಎಕ್ರೆಗಟ್ಟಲೆ ಇರುವ ಈ ತೋಟದಲ್ಲಿ 2018 ಆಗಸ್ಟ್ ತಿಂಗಳಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿತ್ತು. ಬಳಿಕ ಚಿರತೆ ಆಗ್ಗಾಗೆ ಕಾಣಿಸಿಕೊಳ್ಳುತ್ತಿದ್ದು ಅ.6, 2019, ಡಿ.12, 2019, ಡಿ.24 ,2019 ರಲ್ಲಿ ಹಾಗೂ 2022 ರ ಎಪ್ರಿಲ್ ತಿಂಗಳಿನಲ್ಲಿ ‘ಆಪರೇಶನ್ ಚೀತಾ’ ಕಾರ್ಯಾಚರಣೆ ನಡೆಸಿದ ಇಲಾಖೆ ಚಿರತೆಯನ್ನು ಬೋನಿಗೆ ಬೀಳಿಸಿತ್ತು.
ಚಿರತೆ ಉಪಟಳವಿರುವ ಮಾಲಾಡಿ ತೋಟದ ಬಳಿಯೇ ಸರಕಾರಿ ಶಾಲೆ, ಅಂಗನವಾಡಿ ಹಾಗೂ ದೇವಸ್ಥಾನ ಸೇರಿದಂತೆ ವಸತಿ ಪ್ರದೇಶವಿದೆ. ಆಸುಪಾಸಿನಲ್ಲಿ 50ಕ್ಕೂ ಅಧಿಕ ಮನೆಗಳಿದೆ. ನಿರಂತರವಾಗಿ ಚಿರತೆ ಕಾಟದಿಂದ ಇಲ್ಲಿನ ಜನರು ಭಯಭೀತರಾಗಿದ್ದಾರೆ.
Comments are closed.