ಕರ್ನಾಟಕ

ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್‌ಗೆ ಹಾಕಿರುವ ಬೀಗಮುದ್ರೆ ತೆರವು ಮಾಡಲು ಬಿಬಿಎಂಪಿಗೆ ಹೈಕೋರ್ಟ್‌ ಆದೇಶ

Pinterest LinkedIn Tumblr

ಬೆಂಗಳೂರು: ತೆರಿಗೆ ಕಟ್ಟದ ಆರೋಪದಲ್ಲಿ ಬೆಂಗಳೂರಿನ ಪ್ರಮುಖ ಶಾಪಿಂಗ್ ಮಾಲ್ ಆಗಿರುವ ಮಂತ್ರಿ ಮಾಲ್​ಗೆ ಬಿಬಿಎಂಪಿ ಅಧಿಕಾರಿಗಳು 4 ದಿನಗಳ ಹಿಂದೆ ಮತ್ತೆ ಬೀಗ ಹಾಕಿದ್ದರು. ಸದ್ಯ ಮಂತ್ರಿ ಮಾಲ್ ಬೀಗಮುದ್ರೆ ತೆರೆಯಲು ಬಿಬಿಎಂಪಿಗೆ ಹೈಕೋರ್ಟ್ ಆದೇಶ ನೀಡಿದೆ.

ತೆರಿಗೆ ಬಾಕಿಯ ಸ್ವಲ್ಪ ಭಾಗವನ್ನು ತಕ್ಷಣ ಪಾವತಿಸಲು ಹೈಕೋರ್ಟ್​ನ ಏಕಸದಸ್ಯ ಪೀಠ ಅರ್ಜಿದಾರ ಹಮಾರಾ ಷೆಲ್ಟರ್ಸ್, ಅಭಿಷೇಕ್ ಪ್ರಾಪರ್ಟೀಸ್​ಗೆ ಇಂದು ಸೂಚನೆ ನೀಡಿದೆ. ತಕ್ಷಣ 4 ಕೋಟಿ ರೂ. ಮೊತ್ತದ ಚೆಕ್ ನೀಡಲು ಸೂಚನೆ ನೀಡಿದೆ. ಡಿ.13ರ ಮಧ್ಯಾಹ್ನದೊಳಗೆ ರೂ. 2 ಕೋಟಿ ಡಿಡಿ ಪಾವತಿಗೆ ಸೂಚನೆ ನೀಡಲಾಗಿದೆ.

ಮಂತ್ರಿಮಾಲ್ ಆಡಳಿತ ವ್ಯವಸ್ಥೆ ಬಿಬಿಎಂಪಿಯವರ ನಿಯಮಗಳನ್ನು ಉಲ್ಲಂಘಿಸಿವೆ. ನಿಗದಿತ ಅವಧಿಯಲ್ಲಿ ಮಂತ್ರಿ ಮಾಲ್ ತೆರಿಗೆ ಪಾವತಿಸಿಲ್ಲ. ಸೀಲ್ ಮಾಡಿ ಬಿಬಿಎಂಪಿಯೂ ನಿಯಮಾವಳಿ ಉಲ್ಲಂಘಿಸಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅಭಿಪ್ರಾಯಪಟ್ಟಿದ್ದಾರೆ. ಈ ಪ್ರಕರಣದ ಕುರಿತು ಮತ್ತೆ ಡಿಸೆಂಬರ್ 13ಕ್ಕೆ ಹೈಕೋರ್ಟ್ ವಿಚಾರಣೆ ನಡೆಸಲಿದೆ.

ಮಂತ್ರಿ ಮಾಲ್​​ನಲ್ಲಿ ಕೋಟ್ಯಂತರ ರೂ. ಮೌಲ್ಯದ ವಸ್ತುಗಳಿವೆ. ಕೊಳೆಯುವಂತಹ ವಸ್ತುಗಳು ಕೂಡ ಇವೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು. ಈ ಹಿನ್ನೆಲೆಯಲ್ಲಿ ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್ ಬೀಗಮುದ್ರೆ ತೆರೆಯಲು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.

ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್ ಬಿಬಿಎಂಪಿಗೆ ಸುಮಾರು 27 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಡಿ. 6ರಂದು ಮತ್ತೊಮ್ಮೆ ಮಂತ್ರಿ ಮಾಲ್​ಗೆ ಬೀಗ ಹಾಕಲಾಗಿತ್ತು. 3 ವರ್ಷದಿಂದ ಮಂತ್ರಿ ಮಾಲ್ ಬಿಬಿಎಂಪಿಗೆ ಒಟ್ಟು 27 ಕೋಟಿ ತೆರಿಗೆಯನ್ನು ಪಾವತಿಸಿಲ್ಲ. ನೋಟಿಸ್ ಜಾರಿ ಮಾಡಿದರೂ ತೆರಿಗೆ ಪಾವತಿಸಿಲ್ಲ ಎಂಬ ಕಾರಣಕ್ಕೆ ಬಿಬಿಎಂಪಿ ಅಧಿಕಾರಿಗಳು ಮಂತ್ರಿ ಮಾಲ್​ಗೆ ಬೀಗ ಜಡಿದಿದ್ದರು. ಈಗಾಗಲೇ ಮೂರ್ನಾಲ್ಕು ಬಾರಿ ಮಂತ್ರಿ ಮಾಲ್​ಗೆ ಇದೇ ಕಾರಣಕ್ಕೆ ಬೀಗ ಹಾಕಲಾಗಿದೆ.

ಈ ಹಿಂದೆ 15 ದಿನಗಳೊಳಗೆ ತೆರಿಗೆ ಪಾವತಿಸುವಂತೆ ಮಾಲ್​ಗೆ ಗಡುವು ನೀಡಲಾಗಿತ್ತು. 15 ದಿನದೊಳಗೆ ತೆರಿಗೆ ಪಾವತಿಸುವುದಾಗಿ ಮಾಲೀಕರು ಮನವಿ ಮಾಡಿದ್ದರು. ಹೀಗಾಗಿ ಬಿಬಿಎಂಪಿ 15 ದಿನಗಳ ಕಾಲಾವಕಾಶ ನೀಡಿತ್ತು. ನವೆಂಬರ್ ತಿಂಗಳ ಅಂತ್ಯದೊಳಗೆ ತೆರಿಗೆ ಪಾವತಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ ಇನ್ನು ಉಳಿದ ಬಾಕಿ ತೆರಿಗೆ ಹಣ ನೀಡದ ಕಾರಣ ಡಿ. 6ರಂದು ಮತ್ತೆ ಬೀಗ ಹಾಕಲಾಗಿತ್ತು.

Comments are closed.