
ಮಂಗಳೂರು : ಮಂಗಳೂರಿನ ಪ್ರತಿಷ್ಠಿತ ಕರಾವಳಿ ಕಾಲೇಜು ಸಮೂಹದ ವತಿಯಿಂದ ನಗರದ ಕೊಟ್ಟಾರದ ಕಾಲೇಜು ಆವರಣದಲ್ಲಿ ದೀಪಾವಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಜಿ.ಆರ್ ಎಜ್ಯುಕೇಶನ್ ಹಾಗೂ ಕರಾವಳಿ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಎಸ್.ಗಣೇಶ್ ರಾವ್ ಅವರು ದೀಪಾವಳಿ ಹಬ್ಬ ಅಚರಣೆಗೆ ಚಾಲನೆ ನೀಡಿದರು.

ಕಾಲೇಜು ಆಡಳಿತಾ ಮಂಡಳಿಯ ನಿರ್ದೇಶಕಿ ಶ್ರೀಮತಿ ಲತಾ.ಜಿ.ರಾವ್. ಜಿ.ಆರ್.ಮೆಡಿಕಲ್ ಕಾಲೇಜಿನ ನಿರ್ದೇಶಕ ಡಾ. ಶ್ರೀಶ ಖಂಡಿಗೆ, ಕರಾವಳಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ರಘುಚಂದ್, ಕರಾವಳಿ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ರವಿ ಕುಮಾರ್, ಕರಾವಳಿ ಕಾಲೇಜು ಸಮೂಹದ ಆಡಳಿತಾಧಿಕಾರಿ ಪ್ರೋ| ಜೀಶನ್, ಕರಾವಳಿ ಕಾಲೇಜಿನ ಪ್ರಾಂಶುಪಾಲ ಪ್ರೋ. ಮೋಹನ್ ನಾಯಕ್, ಕರಾವಳಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೋ. ಭಾಗೀರಥಿ ಹಾಗೂ ವಿವಿಧ ವಿಭಾಗಳ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆಯೇಷಾ ಶಿಫಾ ಸ್ವಾಗತಿಸಿದರು. ನಿಕೋಲಾಸ್ ಆಂಟನಿಯಾ ವಂದಿಸಿದರು. ಅಂಜುಂ ಆರಾ ನಿರೂಪಿಸಿದರು.

ಈ ವೇಳೆ ಸುದ್ಧಿಗಾರರ ಜೊತೆ ಮಾತನಾಡಿದ ಕರಾವಳಿ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಎಸ್.ಗಣೇಶ್ ರಾವ್ ಅವರು, ವಿಶ್ವವನ್ನು ಬಾಧಿಸಿದ ಕೊರೊನಾ ಮಹಾಮಾರಿ ತೊಲಗಿ ಬೆಳಕಿನ ಹಬ್ಬ ದೀಪಾವಳಿ ಶಾಂತಿ ಸಮೃದ್ಧಿಯನ್ನು ತರಲಿ ಎಂದು ಹೇಳಿದರು.
ದೂರದೂರಿನ ವಿದ್ಯಾರ್ಥಿಗಳಿಗೆ ದೀಪಾವಳಿ ಆಚರಿಸಲು ತಮ್ಮ ಊರಿಗೆ ತೆರಳಲು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಕಾಲೇಜಿನ ಸರ್ವಧರ್ಮ ಸಮಭಾವ ಸಮನ್ವಯದ ಚಿಂತನೆಯೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾಲೇಜಿನಲ್ಲಿ ಎಲ್ಲಾ ಜಾತಿ ಧರ್ಮದ ವಿದ್ಯಾರ್ಥಿಗಳು ದೀಪಾವಳಿ ಹಬ್ಬವನ್ನು ಒಟ್ಟಿಗೆ ಆಚರಿಸುತ್ತಿರುವುದು ಹೆಮ್ಮೆಯೆ ವಿಷಯ.ಬೇರೆ ಬೇರೆ ಊರುಗಳಿಂದ ಬಂದಂತಹ ವಿವಿಧ ಜಾತಿ, ಧರ್ಮಗಳ ವಿದ್ಯಾರ್ಥಿಗಳಿಗೆ ಇಂಥಹ ಒಂದು ಹಬ್ಬವನ್ನು ಆಚರಿಸಲು ಕಾಲೇಜು ಆವಕಾಶ ಮಾಡಿಕೊಟ್ಟಿದ್ದು, ವಿದ್ಯಾರ್ಥಿಗಳೆಲ್ಲರೂ ಸಂಭ್ರಮದಿಂದ ಪಾಲ್ಗೊಂಡು ಸಾಮರಸ್ಯದಿಂದ ಹಬ್ಬವನ್ನು ಆಚರಿಸುತ್ತಿದ್ದಾರೆ. ಇಲ್ಲಿ ದೀಪಾವಳಿ ಮಾತ್ರವಲ್ಲದೇ ಓಣಂ ಸಹಿತಾ ವಿವಿಧ ಧರ್ಮಗಳ ಹಬ್ಬವನ್ನು ಎಲ್ಲಾ ವಿದ್ಯಾರ್ಥಿಗಳು ಒಟ್ಟಿಗೆ ಆಚರಿಸುತ್ತಾರೆ ಎಂದು ಹೇಳಿದರು.
ದೀಪಾವಳಿ ಎಂದರೆ ದೀಪದ ಹಬ್ಬವಾಗಿದ್ದು, ದೀಪ ಎಂದರೆ ಸಂತೋಷದ ಸಂಕೇತವಾಗಿದೆ. ದೀಪಾವಳಿ ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ಹಬ್ಬವಲ್ಲ, ಇಡೀ ದೇಶವೇ ದೀಪಾವಳಿಯನ್ನು ಆಚರಿಸುತ್ತಿದೆ. ದೀಪಾವಳಿ ಹಬ್ಬವನ್ನು ಕೇವಲ ಮೂರು ದಿನ ಆಚರಿಸದೆ, ಪ್ರತಿ ದಿನವೂ ಆಚರಿಸಬೇಕು.
ವಿದ್ಯಾರ್ಥಿಗಳಲ್ಲಿ ಯಾವೂದೇ ಜಾತಿ ಧರ್ಮದ ಬಗ್ಗೆ ದ್ವೇಷ ಬಾವನೆ ಬರಬಾರದೆಂಬ ಸದುದ್ದೇಶದಿಂದ ಇಂತಹ ಹಬ್ಬವನ್ನು ಒಟ್ಟಿಗೆ ಆಚರಿಸಲು ಅವಕಾಶ ನೀಡಲಾಗುತ್ತದೆ. ವಿದ್ಯಾರ್ಥಿಗಳು ಅಷ್ಟೇ, ಈ ರೀತಿಯ ಹಬ್ಬಗಳಲ್ಲಿ ಪಾಲ್ಗೊಂಡು ಇದರ ಪ್ರಯೋಜನ ಪಡೆದುಕೊಂಡು ತಮ್ಮ ಭವಿಷ್ಯವನ್ನು ಉಜ್ವಲವಾಗಿ ಬೆಳಗಿಸುವಂತಹ ಸಾಧನೆ ಮಾಡಬೇಕು ಎಂದು ಗಣೇಶ್ ರಾವ್ ಹೇಳಿದರು.


ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತ್ತು. ಭಾರತದ ಸಾಂಸ್ಕೃತಿಕ ವೈಭವವನ್ನು ಸಾರುವ ಭರತನಾಟ್ಯ, ಜಾನಪದ ನೃತ್ಯ, ಭಾರತೀಯ ಶೈಲಿಯ ಫ್ಯಾಶನ್ ಶೋ, ಕೋಲಾಟ, ರಾಜಸ್ಥಾನಿ ನೃತ್ಯ, ಗುಜಾರಾತಿ ನೃತ್ಯ, ಕಾಶ್ಮೀರ ಶೈಲಿಯ ನೃತ್ಯ, ಬೆಂಗಳಿ ನೃತ್ಯಗಳನ್ನು ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಬಳಿಕ ಕಾಲೇಜಿನ ಆವರಣದಲ್ಲಿ ಸಾವಿರಾರು ದೀಪಗಳನ್ನು ಬೆಳಗಿಸಿದ ವಿದ್ಯಾರ್ಥಿಗಳೆಲ್ಲರೂ ಸಾಂಪ್ರಾದಾಯಿಕ ಹಸಿರು ಪಟಾಕಿ ಹಚ್ಚಿ ಸಂಭ್ರಮ ಪಡುವ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸಿದರು.
Comments are closed.