ಕರಾವಳಿ

ಕುಂದಾಪುರದ ಮೊಬೈಲ್ ಶಾಪ್ ಮಾಲಿಕನ ಅಪಹರಿಸಿ 4.5 ಲಕ್ಷ ನಗದು, ಮೊಬೈಲ್ ದೋಚಿದ ಆರೋಪ: 6 ಮಂದಿ ವಿರುದ್ಧ FIR ದಾಖಲು

Pinterest LinkedIn Tumblr

ಕುಂದಾಪುರ: ಕುಂದಾಪುರದಲ್ಲಿ ಮೊಬೈಲ್ ಶಾಪ್ ನಡೆಸುತ್ತಿರುವ ಯುವಕನನ್ನು ಆರು‌ ಮಂದಿಯಿದ್ದ ತಂಡವೊಂದು ಅಪಹರಿಸಿ ಆತನಿಂದ ನಗದು ಹಾಗೂ ದಾಖಲೆಗಳನ್ನು ಸುಲಿಗೆ ಮಾಡಿದ ಘಟನೆ ನಡೆದಿದೆ.

(ಅಪಹರಣಕ್ಕೊಳಗಾಗಿದ್ದ ಮುಸ್ತಾಫ್)

ಬೈಂದೂರು ತಾಲೂಕು ಅರೆಹೊಳೆ ಮೂಲದ ಪ್ರಸ್ತುತ ಕುಂದಾಪುರದ ಫ್ಲ್ಯಾಟ್ ಒಂದರಲ್ಲಿ ವಾಸವಿರುವ ಮುಸ್ತಾಫ್ (34) ಅಪಹರಣಕ್ಕೊಳಗಾದವರು. ಮುಕ್ತಾರ್ ಹಾಗೂ ಇತರ ಐವರು ಅಪಹರಣ ಮಾಡಿ 4 ಲಕ್ಷದ 64 ಸಾವಿರದ ನೂರ ಎಪ್ಪತ್ತೈದು ರೂಪಾಯಿ ಹಣ ಹಾಗೂ 1 ಲಕ್ಷ ಮೌಲ್ಯದ ಸೊತ್ತುಗಳು ಮತ್ತು ಅಮೂಲ್ಯ ದಾಖಲಾತಿಗಳನ್ನು ಸುಲಿಗೆ ಮಾಡಿದ ಬಗ್ಗೆ ಮುಸ್ತಾಫ್ ಕುಂದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆ ವಿವರ….
ಕುಂದಾಪುರದ ಚಿಕನ್ ಸಾಲ್ ರಸ್ತೆಯಲ್ಲಿ ಮೊಬೈಲ್ ಏಕ್ಸ್ ಎಂಬ ಮೊಬೈಲ್ ಅಂಗಡಿಯನ್ನು ಹೊಂದಿರುವ ಮುಸ್ತಾಪ್ ಸೆ.17 ರಂದು ರಾತ್ರಿ 9.30ಕ್ಕೆ ಅಂಗಡಿ ವ್ಯವಹಾರ ಮುಗಿಸಿ ವ್ಯವಹಾರದ ಹಣ 50 ಸಾವಿರ ನಗದು, ಆಧಾರ್ ಕಾರ್ಡ್ , ಪಾನ್ ಕಾರ್ಡ್ 3-4 ಬ್ಯಾಂಕ್‌ಗಳ ಚೆಕ್ ಪುಸ್ತಕಗಳು ಹಾಗೂ ಇನ್ನಿತರ ಅಮೂಲ್ಯ ದಾಖಲಾತಿಯೊಂದಿಗೆ ಹಾಗೂ ಐಫೋನ್ -1, ಸ್ಯಾಮಸಂಗ್ ಮೊಬೈಲ್ ಫೋನ್ 1, ಆಪಲ್ ಸ್ಮಾರ್ಟ್ ವಾಚ್ -1 ಹಾಗೂ ಏರ್ ಪೋಡ್-1 ಇವುಗಳನ್ನು ಬ್ಯಾಗಿನಲ್ಲಿ ಹಾಕಿಕೊಂಡು ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡಿಕೊಂಡು ತನ್ನ ವಾಸದ ಪ್ಲ್ಯಾಟ್ ಸಮೀಪ ಹೋದಾಗ ಒಂದು ಸ್ವಿಪ್ಟ್ ಕಾರು ಅನುಮಾನಾಸ್ಪದವಾಗಿ ಬಂದಿದ್ದು ಅದರ ಚಾಲಕನಾಗಿ ಆರೋಪಿ ಮುಕ್ತಾರ್ ಎಂಬುವವರಿದ್ದು ಅಪರಿಚಿತ ವ್ಯಕ್ತಿ ಕಾರಿನಿಂದ ಕೆಳಗೆ ಇಳಿದು ದೈಹಿಕ ಹಲ್ಲೆ ಮಾಡಿ ಕಾರಿನ ಒಳಗೆ ಎಳೆದುಕೊಂಡಿದ್ದು ಕಾರಿನಲ್ಲಿದ್ದ ಇನ್ನೊರ್ವ ಅಪರಿಚಿತ ವ್ಯಕ್ತಿ ಕೈಯಲ್ಲಿದ್ದ ರಿಲಾಲ್ವರ್‌ ಅನ್ನು ತೋರಿಸಿ ಬೆದರಿಸಿದ್ದಾನೆ. ಓರ್ವ ಆರೋಪಿಯು ಮುಸ್ತಾಫ್ ಎಡಕಣ್ಣಿನ ಕೆಳಗೆ ಮುಷ್ಠಿಯಿಂದ ಬಲವಾಗಿ ಗುದ್ದಿ ಹಲ್ಲೆ ನಡೆಸಿ ಕೈಯನ್ನು ಹಾಗೂ ಬಾಯಿಯನ್ನು ಕಟ್ಟಿ ಕೂಗದಂತೆ ಮಾಡಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ಕಾರಿನಲ್ಲಿ ತೆರಳುವ ಮಾರ್ಗಮದ್ಯೆ ಓರ್ವ ಮಹಿಳೆ ಕಾರು ಏರಿದ್ದು ಬೆಂಗಳೂರಿನ ಲಾಡ್ಜ್ ಒಂದರಲ್ಲಿ ಮತ್ತಿಬ್ಬರು ಅಪರಿಚಿತ ಆರೋಪಿಗಳು ಇವರಿಗೆ ಜೊತೆಯಾಗಿದ್ದಾರೆ.

4.5 ಲಕ್ಷಕ್ಕೂ ಅಧಿಕ ಸುಲಿಗೆ…
ಲಾಡ್ಜಿನಲ್ಲಿ ಮಹಿಳಾ ಆರೋಪಿ ಒಂದು ಮೊಬೈಲ್‌ಗೆ ಮುಸ್ತಾಪ್ ಅವರ ಸಿಮ್ ಕಾರ್ಡ್ ಹಾಕಿ ಮನೆಯವರಿಗೆ ಕರೆ ಮಾಡಿಸಿ‌ ಅವರಿಂದ ತಲಾ ಒಂದೊಂದು‌ ಲಕ್ಷ ಬೇಕೆಂದು ಹಾಕಿಸಿಕೊಂಡಿದ್ದು ಮುಸ್ತಾಪ್ ಖಾತೆಯಲ್ಲಿದ್ದ ಹಣ ಸಹಿತ ಮೊಬೈಲ್‌ ಮೂಲಕ ಬ್ಯಾಂಕ್ ಖಾತೆಯನ್ನು ಓಪನ್ ಮಾಡಿ ಅವರ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿದ್ದು ಮಾತ್ರವಲ್ಲದೇ ಕುಂದಾಫುರದಿಂದ ಬೆಂಗಳೂರಿಗೆ ಕರೆದುಕೊಂಡು ಹೋಗುವಾಗ ದಾರಿಮಧ್ಯೆಯಲ್ಲಿ ಬೆಂಗಳೂರಿನ ಎಟಿಎಮ್‌ ಹಾಗೂ ಸ್ವೈಪಿಂಗ್ ಮೆಷಿನ್‌ ನಿಂದ ರೂಪಾಯಿ 3,14,175 /- ರೂಪಾಯಿಯನ್ನು ಡ್ರಾ ಮಾಡಿದ್ದಾರೆ. ಅಲ್ಲದೆ ಎಕ್ಸಿಸ್ ಬ್ಯಾಂಕ್‌ನ ಚೆಕ್ ಪುಸ್ತಕವನ್ನು ತೆಗೆದುಕೊಂಡು ಸಹಿ ಮಾಡಲು ಹೇಳಿ ನೀನು ಊರಿಗೆ ಹೋದ ಮೇಲೆ ಖಾತೆಗೆ ಹಣ ಜಮಾ ಮಾಡಬೇಕು ಜಮಾ ಮಾಡಿದರೇ ಮಾತ್ರ ದಾಖಲಾತಿಯನ್ನು ಮೊಬೈಲ್ ಹಾಗೂ ಇನ್ನಿತರ ವಸ್ತುಗಳ ಹಿಂತಿರುಗಿಸುವುದಾಗಿ ಹೇಳಿದ್ದಾರೆ. ಒಟ್ಟು 4,64,175 ರೂ. ಹಣವನ್ನು ಹಾಗೂ 1 ಲಕ್ಷ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಸುಲಿಗೆ ಮಾಡಿದ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.

ಮತ್ತೆ ಹಣಕ್ಕೆ ಬೇಡಿಕೆಯಿಟ್ಟು 2 ಮೊಬೈಲ್, ದಾಖಲೆಗಳನ್ನು ತಮ್ಮಲ್ಲಿಯೇ ಇರಿಸಿಕೊಂಡ ಆರೋಪಿಗಳು ಸೆ.18ರಂದು ರಾತ್ರಿ 9:30ಕ್ಕೆ ಮುಸ್ತಾಫ್ ಅವರನ್ನು ಬಿಟ್ಟಿದ್ದು ಸ್ನೇಹಿತರ ಸಹಾಯದಿಂದ ಅವರು ಸೆ.19ಕ್ಕೆ ಊರು ಸೇರಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Comments are closed.