
ಮಂಗಳೂರು, ಜನವರಿ.11: ಭಾರತೀಯ ರೆಡ್ಕ್ರಾಸ್ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲಾ ಘಟಕ ವತಿಯಿಂದ ರಕ್ತ ಸಂಗ್ರಹ ಅಭಿಯಾನ ಜ.13ರಂದು ಆರಂಭಗೊಳ್ಳಲಿದೆ. ದ.ಕ. ಈಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಕಾರದೊಂದಿಗೆ ನಡೆಯಲಿರುವ ರಕ್ತ ಸಂಗ್ರಹ ಅಭಿಯಾನಕ್ಕೆ ಲೇಡ್ ಹಿಲ್ನ ಪತ್ರಿಕಾಭವನದ ಮುಂಭಾಗದಲ್ಲಿ ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಚಾಲನೆ ನೀಡಲಿರುವರು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ದ.ಕ. ಜಿಲ್ಲಾಧ್ಯಕ್ಷ ಸಿ.ಎ. ಶಾಂತಾರಾಮ ಶೆಟ್ಟಿ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಅವರು, ರಕ್ತಸಂಗ್ರಹ ಮತ್ತು ರಕ್ತದಾನದ ಬಗ್ಗೆ ಜಾಗೃತಿ ಅಭಿಯಾನ ಜ.16ರ ತನಕ ನಡೆಯಲಿದೆ. ರಕ್ತ ಸಂಗ್ರಹಕ್ಕೆ ರೆಡ್ ಕ್ರಾಸ್ ರೋಟರಿ ಬಸ್ ನಗರದಾದ್ಯಂತ ಸಂಚರಿಲಿದ್ದು, ಈ ಬಸ್ನಲ್ಲಿ ಒಮ್ಮೆಲೆ ಮೂವರಿಗೆ ರಕ್ತದಾನಕ್ಕೆ ವ್ಯವಸ್ಥೆ ಇದೆ.
ಸರ್ಕಾರಿ ಲೇಡಿಗೋಶನ್ ಆಸ್ಪತ್ರೆಯ ಆವರಣದಲ್ಲಿರುವ ರೆಡ್ಕ್ರಾಸ್ ರಕ್ತನಿಧಿ ದಿನದ 24 ತಾಸು ನಿರಂತರವಾಗಿ ರೋಗಿಗಳ ರಕ್ತದ ಅಗತ್ಯತೆಯನ್ನು ಪೂರೈಸುವುದರೊಂದಿಗೆ ಅವರ ಜೀವ ಉಳಿಸುವ ಸೇವೆಯಲ್ಲಿ ನಿರತವಾಗಿದೆ. ನುರಿತ ವೈದ್ಯರು, ಅನುಭವಿ ಮತ್ತು ನಿಷ್ಠಾವಂತ ತಂತ್ರಜ್ಞರು ಹಾಗೂ ಸಿಬ್ಬಂದಿಗಳ ಪರಿಶ್ರಮದಿಂದ ಈ ರೆಡ್ಕ್ರಾಸ್ ರಕ್ತನಿಧಿ ಕಾರ್ಯ ನಿರ್ವಹಿಸುತ್ತಿದೆ.
ರಕ್ತದಾನಕ್ಕೆ ಯುವ ಜನಂಗವನ್ನು ಪ್ರೇರೇಪಿಸುವ, ರಕ್ತ ಸಂಗ್ರಹಿಸುವ, ಪರೀಕ್ಷಿಸುವ ಮತ್ತು ವಿತರಿಸುವ ಕಾರ್ಯದಲ್ಲಿ ಇದು ತೊಡಗಿಕೊಂಡಿದೆ. ನಮ್ಮ ರೆಡ್ಕ್ರಾಸ್ ರಕ್ತನಿಧಿಯ ಅಪರಿಮಿತ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರು ಪ್ರಶಸ್ತಿಯನ್ನು ನೀಡಿದ್ದಾರೆ ಎಂದು ತಿಳಿಸಿದರು..
ನ್ಯಾಕೋ (ನ್ಯಾಶನಲ್ ಏಡ್ಸ್ ಕಂಟ್ರೋಲ್ ಆರ್ಗನೈಶೇಶನ್) ಮಾನ್ಯತೆ ಪಡೆದಿರುವ ನಮ್ಮ ರೆಡ್ಕ್ರಾಸ್ ರಕ್ತನಿಧಿ ನಿಯಮಾನುಸಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳನ್ನು ಏರ್ಪಡಿಸುವುದಲ್ಲದೆ, ಸಂಗ್ರಹಿಸಲ್ಪಟ್ಟ ರಕ್ತವನ್ನು ಕ್ರಮಬದ್ಧವಾಗಿ ಗುಂಪುವಾರು ವಿಂಗಡಿಸಿ ಎಲೈಸಾ ಇತ್ಯಾದಿ ಪರೀಕ್ಷೆಗಳನ್ನು ನಡೆಸಿ ರೋಗಿಗಳ ಕಡೆಯಿಂದ ಅವರ ವೈದ್ಯರ ಮೂಲಕ ಬರುವ ರಕ್ತವನ್ನು ಮ್ಯಾಚಿಂಗ್ ಮಾಡಿ ನೀಡಲಾಗುತ್ತಿದೆ.
ನಮ್ಮ ರಕ್ತನಿಧಿಯಲ್ಲಿ ಬದಲಿ ರಕ್ತಕ್ಕೆ ಒತ್ತಾಯಿಸದೇ ರಕ್ತವನ್ನು ನೀಡುವ ನೀತಿಯನ್ನು ಜಾರಿಗೆ ತರಲಾಗಿದೆ. ಸರ್ಕಾರಿ ಲೇಡಿಗೋಶನ್ ಆಸ್ಪತ್ರೆಯಿಂದ ಬರುವ ರಕ್ತ ಕೋರಿಕೆಯನ್ನು ಆದ್ಯತೆಯ ಮೇಲೆ ಪರಿಗಣಿಸಿ ರಕ್ತ ಹಾಗೂ ಅದರ ಘಟಕಗಳನ್ನು ಉಚಿತವಾಗಿ ನೀಡಲಾಗುತ್ತಿದೆ.
ಪ್ರತಿ ತಿಂಗಳು ಸರಿಸುಮಾರು 250 ರಿಂದ 300 ಯುನಿಟ್ಗಳಷ್ಟು ರಕ್ತವನ್ನು ಲೇಡಿಗೋಶನ್ ಆಸ್ಪತ್ರೆಗೆ ನೀಡಲಾಗುತ್ತಿದ್ದು, ಇದೇ ಡಿಸೆಂಬರ್ ತಿಂಗಳಲ್ಲಿ 345 ಯುನಿಟ್ ರಕ್ತವನ್ನು ನೀಡಲಾಗಿದೆ. ಈ ಸೇವೆ ನಮ್ಮ ರೆಡ್ಕ್ರಾಸ್ಗೆ ಹೆಮ್ಮೆಯ ವಿಚಾರ.
ಪ್ರತಿ ತಿಂಗಳು ವಿವಿಶ ಸಂಘ ಸಂಸ್ಥೆಗಳು ಮತ್ತು ಕಾಲೇಜುಗಳಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ಯುವ ಜನಾಂಗದಲ್ಲಿ ಸಮಾಜಸೇವೆಯ ಮನೋಭಾವವನ್ನು ಪ್ರೇರೇಪಿಸಿ ರಕ್ತದಾನದ ಮಹತ್ವವನ್ನು ತಿಳಿಸಲು, ಅದರ ಬಗ್ಗೆ ಜಾಗೃತಿ ಮೂಡಿಸಲು ರೆಡ್ಕ್ರಾಸ್ ಅವಿರತವಾಗಿ ಶ್ರಮಿಸುತ್ತಿದೆ.
ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಕೂಡಾ ರಕ್ತದಾನ ಶಿಬಿರಗಳನ್ನು ಸಂಘಟಿಸಿ ರಕ್ತದ ಕೊರತೆಯಿಂದಾಗಿ ಜೀವ ಹಾನಿ ಉಂಟಾಗದoತೆ ರೆಡ್ಕ್ರಾಸ್ ಕಾರ್ಯನಿರ್ವಹಿಸಿದೆ. ನಗರದ ಆಸ್ಪತ್ರೆಗಳಲ್ಲದೆ ಜಿಲ್ಲೆಯ ಇತರ ಆಸ್ಪತ್ರೆಗಳಿಗೆ ಮತ್ತು ಬೇರೆ ಜಿಲ್ಲೆಗಳಿಗೆ ಕೂಡ ರಕ್ತ ನೀಡಿ ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ರಕ್ತದ ಕೊರತೆಯನ್ನು ನೀಗಿಸಿದೆ.
ಪ್ರತಿ ತಿಂಗಳು ನಮ್ಮ ರಕ್ತನಿಧಿಗೆ ಸುಮಾರು 1000ಕ್ಕೂ ಹೆಚ್ಚು ಯುನಿಟ್ಗಳ ರಕ್ತ ಸಂಗ್ರಹವಾಗಬೇಕಾಗಿದೆ. ಕಾಲೇಜುಗಳು ಪ್ರಾರಂಭವಾಗದೇ ಇರುವುದರಿಂದ ವಿದ್ಯಾರ್ಥಿಗಳಿಂದ ರಕ್ತದಾನ ಮಾಡಲಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ರೋಟರಿ ಕ್ಲಬ್ ಮಂಗಳೂರು ಇವರು ರೆಡ್ಕ್ರಾಸ್ಗೆ ನೀಡಿರುವ ರಕ್ತ ಸಂಚಾರಿ ಘಟಕ (ಬಸ್) ಅತ್ಯಂತ ಪ್ರಯೋಜನಕಾರಿಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು
ಭಾರತೀಯ ರೆಡ್ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ ಜಿಲ್ಲಾ ಘಟಕ ಜಂಟಿಯಾಗಿ ರಕ್ತದಾನ ಸಂಗ್ರಹ ಅಭಿಯಾನವನ್ನು ಹಮ್ಮಿಕೊಂಡಿವೆ ಎಂದು ಶಾಂತಾರಾಮ ಶೆಟ್ಟಿ ವಿವರಿಸಿದರು.
ರಕ್ತದಾನ ಮಾಡಬಯಸುವ ವ್ಯಕ್ತಿಗಳು/ ಸಂಘ ಸಂಸ್ಥೆಗಳು/ಕಾಲೇಜುಗಳು ರೆಡ್ಕ್ರಾಸ್ ಕೋ-ಆರ್ಡಿನೇಟರ್ ಪ್ರವೀಣ ಕುಮಾರ್ (ಮೊ. 9916262459) ಇವರನ್ನು ಸಂಪರ್ಕಿಸಬಹುದಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಎಸ್.ಎ. ಪ್ರಭಾಕರ ಶರ್ಮಾ, ಗೌರವ ಕಾರ್ಯದರ್ಶಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ದ.ಕ. ಜಿಲ್ಲೆ, ಬಿ.ರವೀಂದ್ರ ಶೆಟ್ಟಿ, ಸದಸ್ಯರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ದ.ಕ. ಜಿಲ್ಲೆ, ಶ್ರೀನಿವಾಸ್ ನಾಯಕ್ ಇಂದಾಜೆ, ಅಧ್ಯಕ್ಷರು, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು.
Comments are closed.