ರಾಷ್ಟ್ರೀಯ

ಕೃಷಿ ಕಾಯ್ದೆ ವಿರುದ್ಧ ಸುಪ್ರೀಂ ಕೋರ್ಟ್ ಖಡಕ್ ಎಚ್ಚರಿಕೆ; “ಕೃಷಿ ಕಾಯ್ದೆ ಸ್ಥಗಿತಗೊಳಿಸುತ್ತೀರೋ…ನಾವೇ ಕ್ರಮ ತೆಗೆದುಕೊಳ್ಳಬೇಕೆ..?”

Pinterest LinkedIn Tumblr

ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧಿಸಿ ಕೇಂದ್ರ ಸರಕಾರದ ನಡೆಯ ವಿರುದ್ಧ ಸುಪ್ರೀಂ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದ್ದು, ಕೃಷಿ ಕಾಯ್ದೆ ಜಾರಿ ಮಾಡುವುದನ್ನು ನೀವು ನಿಲ್ಲಿಸುತ್ತೀರೋ ಅಥವಾ ನಾವೇ ಮಧ್ಯ ಪ್ರವೇಶ ಮಾಡಿ ಕ್ರಮ ತೆಗೆದುಕೊಳ್ಳಬೇಕೋ ಎಂದು ಖಡಕ್ ಎಚ್ಚರಿಕೆ ನೀಡಿದೆ.

“ನಾವು ಅನಗತ್ಯವಾಗಿ ಮಾತನಾಡಲು ಬಯಸುವುದಿಲ್ಲ. ಆದರೆ, ಕೇಂದ್ರದ ವರ್ತನೆಯಿಂದ ಬಹಳ ನಿರಾಸೆಯಾಗಿದೆ. ಅವರು ಯಾವ ರೀತಿಯ ಸಮಾಲೋಚನೆ ಪ್ರಕ್ರಿಯೆ ಅನುಸರಿಸುತ್ತಿದ್ದಾರೋ ಗೊತ್ತಿಲ್ಲ. ದಯವಿಟ್ಟು ಏನಾಗುತ್ತಿದೆ ಎಂದು ತಿಳಿಸಿ” ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ಎಂದು ಕೇಂದ್ರವನ್ನು ಖಾರವಾಗಿ ಕೇಳಿದ್ದಾರೆ.

“ಸಮ್ಮತವಾದ ಪರಿಹಾರ ಸಿಗಬೇಕೆಂಬುದು ನಮ್ಮ ಉದ್ದೇಶ. ಕೃಷಿ ಕಾನೂನುಗಳನ್ನ ಸ್ಥಗಿತಗೊಳಿಸಬೇಕೆಂಬ ಸಲಹೆ ಬಗ್ಗೆ ಯಾಕೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ? ಕೇಂದ್ರ ಸರ್ಕಾರ ಈ ಕಾನೂನುಗಳ ಜಾರಿಯನ್ನು ನಿಲ್ಲಿಸಿದರೆ ಮಾತುಕತೆಗೆ ನಾವು ರೈತರನ್ನ ಒಪ್ಪಿಸುತ್ತೇವೆ.

”ಈ ಕಾನೂನು ಜಾರಿಗೆ ತರುವುದನ್ನು ನೀವು ನಿಲ್ಲಿಸುತ್ತೀರೋ ಅಥವಾ ನ್ಯಾಯಾಲಯವೇ ಈ ಕೆಲಸ ಮಾಡಬೇಕೋ ಎಂಬುದನ್ನು ನೀವು ತಿಳಿಸಿ” ಎಂದು ಸಿಜೆಐ ಕುಟುಕಿದ್ದಾರೆ. ಆದರೆ, ಸರ್ಕಾರದ ಪರವಾಗಿ ವಾದಿಸಿ ಅಟಾರ್ನಿ ಜನರಲ್ ಅವರು ನೂತನ ಕೃಷಿ ಕಾನೂನನ್ನ ಸ್ಥಗಿತಗೊಳಿಸುವುದು ಸಮಂಜಸ ಆಗುವುದಿಲ್ಲ ಎಂದು ಸರ್ಕಾರದ ನಿಲುವನ್ನು ತಿಳಿಸಿದ್ದಾರೆ.

ಇದೇ ವೇಳೆ, ರೈತರ ಪ್ರತಿಭಟನೆಯ ಸ್ಥಳವನ್ನು ಬದಲಿಸಬಹುದಾ ಎಂಬ ಸಲಹೆಯನ್ನು ಪ್ರತಿಭಟನಾಕಾರರಿಗೆ ಕೇಳಿತು. ನ್ಯಾಯಾಲಯವು ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿಲ್ಲ. ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಪ್ರತಿಭಟನೆಯ ಸ್ಥಳವನ್ನು ಬದಲಿಸಬಹುದಾ ಎಂದು ಕೇಳುತ್ತಿದ್ದೇವೆ ಎಂದು ಸುಪ್ರೀಂ ನ್ಯಾಯಪೀಠ ಸ್ಪಷ್ಟಪಡಿಸಿತು.

Comments are closed.