ಕರಾವಳಿ

ದ.ಕ.ಜಿಲ್ಲೆಯಲ್ಲಿಇಂದು ಮತ್ತೆ ಕೊರೋನಾ ಮಹಾಸ್ಫೋಟ -183 ಪಾಸಿಟಿವ್ ಪತ್ತೆ : ರಾಜ್ಯದಲ್ಲಿ 2,062 ಮಂದಿಯಲ್ಲಿ ಸೋಂಕು ಧೃಢ – 54 ಮಂದಿ ಬಲಿ

Pinterest LinkedIn Tumblr

ಮಂಗಳೂರು, ಜುಲೈ.08 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ ಕೊರೋನಾ ಮಹಾಸ್ಫೋಟ ಗೊಂಡಿದ್ದು, ಮತ್ತೊಮ್ಮೆ ಅತೀ ಹೆಚ್ಚು 183 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ಕರ್ನಾಟಕದಲ್ಲಿ ಇಂದು ಮತ್ತೆ ಒಂದೇ ದಿನ ಬರೋಬ್ಬರಿ 2,062 ಮಂದಿಯಲ್ಲಿ ಕೊರೋನ ವೈರಸ್ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಇಂದು ಸೋಂಕಿತರ ಒಟ್ಟು ಸಂಖ್ಯೆ 28,877ಕ್ಕೆ ಏರಿಕೆಯಾಗಿದೆ. ದ.ಕ.ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1,542 ಕ್ಕೆ ಏರಿಕೆಯಾಗಿದೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ರಾಜ್ಯದಲ್ಲಿ ಸೋಮವಾರ ಒಂದೇ ದಿನ 2,062 ಕೋವಿಡ್ ಪ್ರಕರಣಗಳು ಪಾಸಿಟಿವ್ ಬಂದಿರುವುದಾಗಿ ಮಾಹಿತಿ ನೀಡಿದೆ. ಇದರಲ್ಲಿ ದ.ಕ. ಜಿಲ್ಲೆಯಲ್ಲಿ ಬರೋಬ್ಬರಿ 183 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವುದಾಗಿ ವರದಿಯಾಗಿದೆ.

ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 1,148, ದಕ್ಷಿಣ ಕನ್ನಡ 183, ಧಾರವಾಡ 89, ಕಲಬುರಗಿ 66, ಬಳ್ಳಾರಿ 59, ಮೈಸೂರು 59, ಬೆಂಗಳೂರು ಗ್ರಾಮಾಂತರ 37, ರಾಮನಗರ 34, ಚಿಕ್ಕಬಳ್ಳಾಪುರ 32, ಉಡುಪಿ 31, ಹಾವೇರಿ 31, ಬೀದರ್ 29, ಬೆಳಗಾವಿ 27, ಹಾಸನ 26, ತುಮಕೂರು 24, ಬಾಗಲಕೋಟೆ 24, ಚಿಕ್ಕಮಗಳೂರು 23, ಮಂಡ್ಯ 20, ಉತ್ತರ ಕನ್ನಡ 19, ದಾವಣಗೆರೆ 18, ರಾಯಚೂರು 17, ಶಿವಮೊಗ್ಗ 17, ಕೋಲಾರ 16, ಯಾದಗಿರಿ 11, ಕೊಪ್ಪಳ 11, ಗದಗ 5, ವಿಜಯಪುರ 4, ಚಿತ್ರದುರ್ಗದಲ್ಲಿ 2 ಪ್ರಕರಣ ಪಾಸಿಟಿವ್ ಬಂದಿದೆ.

ದ.ಕ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೋಂಕಿತರು : ಇಂದು ಸೋಂಕಿಗೆ ಮೂವರು ಬಲಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು ಬುಧವಾರ ಒಂದು ದಿನದಲ್ಲೇ 183 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಈವರೆಗೆ ದೃಢಪಟ್ಟ ಕೊರೊನಾ ಸೋಂಕು ಪ್ರಕರಣಗಳಲ್ಲಿ ಈ ದಿನ ಹೆಚ್ಚಿನ ಪ್ರಕರಣಗಳು ದಾಖಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1,542 ಕ್ಕೆ ಏರಿಕೆಯಾಗಿದೆ.

63 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ, ಇಬ್ಬರಿಗೆ ದ್ವಿತೀಯ ಸಂಪರ್ಕದಿಂದ ಕೊರೊನಾ ಸೋಂಕು ತಗುಲಿದ್ದರೆ 25 ಐಎಲ್‌ಐ ಹಾಗೂ 4 ಎಸ್‌ಎಆರ್‌ಐ ಪ್ರಕರಣಗಳಾಗಿವೆ. ಇಬ್ಬರು ಮಹಾರಾಷ್ಟ್ರದಿಂದ ಹಾಗೂ ಒಬ್ಬರು ಬೆಂಗಳೂರಿನಿಂದ ಬಂದವರಾಗಿದ್ದಾರೆ. ಹಾಗೆಯೇ ಐವರು ಸೌದಿ, ಮಸ್ಕತ್‌, ದುಬೈನಿಂದ ಬಂದವರಾಗಿದ್ದಾರೆ. 22 ಮಂದಿಗೆ ರ್‍ಯಾಂಡಮ್‌ ಪರೀಕ್ಷೆಯಿಂದ ಕೊರೊನಾ ದೃಢಪಟ್ಟಿದೆ. ಇನ್ನು 54 ಮಂದಿಯ ಕೊರೊನಾ ಸೋಂಕಿನ ಮೂಲವನ್ನು ಪತ್ತೆಹಚ್ಚಲಾಗುತ್ತಿದೆ.

ಜಿಲ್ಲೆಯಲ್ಲಿ ಈವರೆಗೆ 22,181 ಮಂದಿಯ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆ ಮಾಡಲಾಗಿದ್ದು ಈ ಪೈಕಿ 21,695 ವರದಿಗಳು ಲಭಿಸಿದೆ. ಈ ಪೈಕಿ 20,153 ಕೊರೊನಾ ವರದಿ ನೆಗೆಟಿವ್‌ ಆಗಿದ್ದರೆ 1,542 ಕೊರೊನಾ ವರದಿ ಪಾಸಿಟಿವ್‌ ಆಗಿದೆ.

ಇನ್ನು ಜಿಲ್ಲೆಯಲ್ಲಿ ಇಂದು 12 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಈವರೆಗೆ 695 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 819 ಪ್ರಕರಣಗಳು ಸಕ್ರಿಯವಾಗಿದೆ. ಮೂವರು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೋನಾ ಸೋಂಕಿಗೆ ರಾಜ್ಯದಲ್ಲಿ ಇಂದು ಒಂದೇ ದಿನ 54 ಮಂದಿ ಬಲಿ :

ಕರ್ನಾಟಕದಲ್ಲಿ ಕೊರೋನ ವೈರಸ್ ನಾಗಾಲೋಟ ಮುಂದುವರಿದಿದ್ದು, ಇಂದು ಒಂದೇ ದಿನ 54 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಅಲ್ಲದೇ, 2,062 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಮಂಗಳವಾರ ಸಂಜೆಯಿಂದ ಬುಧವಾರ ಸಂಜೆವರೆಗೆ ರಾಜ್ಯದಲ್ಲಿ ದೃಢಪಟ್ಟ 2,062 ಪ್ರಕರಣಗಳ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 28,877ಕ್ಕೆ ಏರಿಕೆಯಾಗಿದೆ. 54 ಸಾವಿನೊಂದಿಗೆ ಮೃತರ ಸಂಖ್ಯೆ 470ಕ್ಕೆ ಹೆಚ್ಚಳವಾಗಿದೆ.

ಇದುವರೆಗೆ ಅತೀ ಹೆಚ್ಚು ಸಾವು ಸಂಭವಿಸಿದ ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು 24 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಧಾರವಾಡದಲ್ಲಿ 7, ಬಳ್ಳಾರಿ 4, ರಾಯಚೂರು 3, ಹಾಸನ 3, ಮೈಸೂರು 2, ತುಮಕೂರು 2, ಚಿಕ್ಕಬಳ್ಳಾಪುರ 2, ವಿಜಯಪುರ 2, ದಕ್ಷಿಣ ಕನ್ನಡ, ಬೀದರ್, ಕಲಬುರಗಿ ಮತ್ತು ಚಿಕ್ಕಮಗಳೂರಿನಲ್ಲಿ ತಲಾ 1 ಒಂದು ಸಾವು ಸಂಭವಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಒಟ್ಟಾರೆ ರಾಜ್ಯದಲ್ಲಿ 28,877 ಕೊರೋನ ಸೋಂಕಿತರ ಪೈಕಿ 11,876 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 778 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 470 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 16,527 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Comments are closed.