
ಕನ್ನಡದ ಪ್ರಯೋಗಶೀಲ ನಿರ್ದೇಶಕಿಯರಲ್ಲಿ ಒಬ್ಬರಾಗಿರುವ ಸುಮನಾ ಕಿತ್ತೂರು (ಸುಮನ್ ಕಿತ್ತೂರ್) ಸಪ್ತಪದಿ ತುಳಿಯುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ‘ಆ ದಿನಗಳು’ ಸಿನಿಮಾ ಮೂಲಕ ಸಹಾಯಕ ನಿರ್ದೇಶಕಿಯಾಗಿ ಸ್ಯಾಂಡಲ್ವುಡ್ಗೆ ಪ್ರವೇಶಿಸಿದ ಸುಮನಾ ಬಳಿಕ ಹಲವಾರು ಸಿನಿಮಾಗಳನ್ನು ನಿರ್ದೇಶಿಸಿದರು.
ಕೆಲ ವರ್ಷಗಳಿಂದ ಪಾಂಡಿಚೇರಿಯಲ್ಲಿ ವಾಸವಾಗಿರುವ ಸುಮನಾ ಕಿತ್ತೂರ್ ತನ್ನ ಬಹುಕಾಲದ ಮಿತ್ರನನ್ನು ವರಿಸಿದ್ದಾರೆ. ಲಾಕ್ಡೌನ್ ಸಮಯವಾದ ಕಾರಣ ಸುಮನಾ ಕಿತ್ತೂರು ಮದುವೆ ಸುದ್ದಿ ತಿಳಿಯಲೇ ಇಲ್ಲ. ಏಪ್ರಿಲ್ 17ರಂದೇ ಇವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದಿವೆ ಮೂಲಗಳು.
ಶಿವಮೊಗ್ಗ ಮೂಲದವರಾದ ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಶ್ರೀನಿವಾಸ್ ಎಂಬುವವರನ್ನು ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿದ್ದಾರೆ. ಕುವೆಂಪು ಅವರ ಮಂತ್ರ ಮಾಂಗಲ್ಯದಿಂದ ವಿವಾಹ ಪದ್ಧತಿಯ ಮೂಲಕ ಕುಪ್ಪಳಿಯಲ್ಲಿ ವಿವಾಹವಾಗಬೇಕು ಎಂಬುದು ಸುಮನಾ ಅವರ ಬಯಕೆಯಾಗಿತ್ತು. ಆದರೆ ಲಾಕ್ಡೌನ್ ಕಾರಣದಿಂದ ಅದು ಸಾಧ್ಯವಾಗಿಲ್ಲ.
‘ನಾವು ಎರಡೂ ಕುಟುಂಬದವರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾದೆವು. ನಮಗಿಬ್ಬರಿಗೂ ಸರಳ ವಿವಾಹದಲ್ಲೇ ನಂಬಿಕೆ ಇತ್ತು. ಈ ಹಿಂದೆ ಏಪ್ರಿಲ್ 31ಕ್ಕೆ ಲಾಕ್ಡೌನ್ ತೆರವಾಗುತ್ತದೆ. ಆಗ ಕರ್ನಾಟಕಕ್ಕೆ ಹೋಗಿ ಮಂತ್ರಮಾಂಗಲ್ಯ ವಿವಾಹ ಆಗಬೇಕು ಎಂದುಕೊಂಡಿದ್ದೆವು. ಆದರೆ ಅದು ಸಾಧ್ಯವಾಗಲಿಲ್ಲ. ಕೊನೆಗೆ ಪಾಂಡಿಚೇರಿಯಲ್ಲೇ ಮದುವೆಯಾದೆವು’ ಎಂದು ಸುಮನಾ ಕಿತ್ತೂರು ಹೇಳಿದ್ದಾರೆ.
ಕೆಲವು ವರ್ಷಗಳಿಂದ ಸುಮನಾ ಅವರು ಕೆಲಸದ ನಿಮಿತ್ತ ಪಾಂಡಿಚೇರಿಯಲ್ಲಿ ನೆಲೆಸಿದ್ದಾರೆ. ಶಿವಮೊಗ್ಗ ಮೂಲದ ಶ್ರೀನಿವಾಸ್ ಕುಟುಂಬ ಕಳೆದ 30 ವರ್ಷಗಳಿಂದ ಪಾಂಡಿಚೇರಿಯಲ್ಲಿಯೇ ನೆಲೆಸಿದೆ. ಮುಂದೆ ಕರ್ನಾಟಕದಲ್ಲಿಯೇ ನೆಲೆಸುವ ನಿರ್ಧಾರವನ್ನು ಈ ನವ ದಂಪತಿ ಮಾಡಿದೆ.
ಪಾಂಡಿಚೇರಿಯ ಒರೋವಿಲ್ನಲ್ಲಿ ಈ ದಂಪತಿಗಳು ಸದ್ಯಕ್ಕೆ ವಾಸವಾಗಿದ್ದಾರೆ. ಅಲ್ಲಿಂದ ಬಂದ ಬಳಿಕ ಮೈಸೂರಿನಲ್ಲಿ ನೆಲೆಸಲು ಈ ದಂಪತಿ ಚಿಂತಿಸಿದ್ದಾರೆ ಎಂದಿವೆ ಮೂಲಗಳು.
ಸ್ಲಂ ಬಾಲ, ಕಳ್ಳರ ಸಂತೆ, ಎದೆಗಾರಿಕೆ, ಕಿರಗೂರಿನ ಗಯ್ಯಾಳಿಗಳು ಸುಮಾನಾ ಕಿತ್ತೂರು ನಿರ್ದೇಶನದ ಸಿನಿಮಾಗಳು. ಕಳ್ಳರ ಸಂತೆ, ಎದೆಗಾರಿಕೆ ಸಿನಿಮಾಗಳು ರಾಜ್ಯ ಪ್ರಶಸ್ತಿಗೂ ಪಾತ್ರವಾಗಿವೆ. ರೌಡಿ ಮಾಂತ್ರಿಕ ಅಗ್ನಿ ಶ್ರೀಧರ್ ನನ್ನ ಗುರುವು ಎನ್ನುವ ಸುಮನಾ ಅವರು ಮೈಸೂರು ಜಿಲ್ಲೆ ಪಿರಿಯಾ ಪಟ್ಟಣ್ಣ ಮೂಲದವರು.
Comments are closed.