ಕರ್ನಾಟಕ

ಪತಿಯ ಹಿಂಸೆಗೆ ಬೇಸತ್ತ ಗೃಹಿಣಿ: ಕಮೀಷನರ್ ಹೆಸರಿಗೆ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ

Pinterest LinkedIn Tumblr


ಬೆಂಗಳೂರು: ಬೆಂಗಳೂರಿನ ಸುಬ್ರಹ್ಮಣ್ಯ ನಗರದಲ್ಲಿ ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಗೃಹಿಣಿ ನಂದಿನಿ, ಮರಣ ಪತ್ರವನ್ನೂ ಬಿಟ್ಟು ಹೋಗಿದ್ದು, ತನ್ನ ಪತಿ ಹಾಗೂ ಆತನ ಸಹೋದರಿ, ಅತ್ತೆ ಹಾಗೂ ಮಾವನೇ ತನ್ನ ಸಾವಿಗೆ ಕಾರಣ ಎಂದು ಬರೆದಿಟ್ಟಿದ್ದಾರೆ. 26 ವರ್ಷ ವಯಸ್ಸಿನ ಮೃತ ಗೃಹಿಣಿ ನಂದಿನಿ, ಮೂಲತಃ ಮಂಡ್ಯ ಜಿಲ್ಲೆ ಮಾವಳ್ಳಿ ತಾಲ್ಲೂಕು ಗೌಡನ ಪಾಳ್ಯದವರು.

ತನ್ನ ಪತಿ ರಾಜ ಹಾಗೂ ಆತನ ಸಹೋದರಿ ರೂಪಾ ತನಗೆ ಹೇಗೆಲ್ಲಾ ಕಿರುಕುಳ ನೀಡುತ್ತಿದ್ದರು ಎಂದು ಮೃತ ಗೃಹಿಣಿ ನಂದಿನಿ ಡೆತ್‌ನೋಟ್‌ನಲ್ಲಿ ವಿವರಿಸಿದ್ದಾರೆ.

ತನ್ನ ಪತಿ ರಾಜನ ಜೊತೆ ಪ್ರೇಮ ವಿವಾಹವಾಗಿದ್ದೆ ಎಂದು ವಿವರಿಸಿರುವ ನಂದಿನಿ, ಇಬ್ಬರು ಮಕ್ಕಳಾದ ಮೇಲೆ ತನ್ನ ಪತಿಯ ವರ್ತನೆ ಬದಲಾಯಿತು ಎಂದು ಹೇಳಿಕೊಂಡಿದ್ದಾರೆ. ಕುಡಿದು ಮನೆಗೆ ಬರುತ್ತಿದ್ದ ರಾಜ, ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದ ಎಂದು ನಂದಿನಿ ಪತ್ರದಲ್ಲಿ ವಿವರಿಸಿದ್ದಾರೆ. ತಮಗೆ ಹಾಗೂ ತಮ್ಮ ಮಕ್ಕಳ ಮೇಲೆ ಹಲ್ಲೆ ನಡೆಸೋದು, ಅವಾಚ್ಯ ಶಬ್ಧಗಳಿಂದ ನಿಂದಿಸೋದು ಹೆಚ್ಚಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ನಾದಿನಿ, ಅತ್ತೆ, ಮಾವನ ಮಾತು ಕೇಳಿಕೊಂಡು ತಮ್ಮ ಪತಿ ತಮ್ಮ ಮೇಲೆ ಹಲ್ಲೆ ನಡೆಸುತ್ತಿದ್ದಾರೆ, ದ್ವೇಷ ಸಾಧನೆ ಮಾಡುತ್ತಿದ್ಧಾರೆ. ಮಕ್ಕಳನ್ನೂ ಪ್ರೀತಿಸುತ್ತಿಲ್ಲ ಎಂದು ನಂದಿನಿ ತಮ್ಮ ಮರಣ ಪತ್ರದಲ್ಲಿ ಅಳಲು ತೋಡಿಕೊಂಡಿದ್ಧಾರೆ. ಮನೆ ಬಾಡಿಗೆಯನ್ನೂ ಕಟ್ಟೋದಿಲ್ಲ, ದಿನಸಿ ವಸ್ತುಗಳನ್ನ ತರೋದಿಲ್ಲ. ಆದ್ರೆ, ಕುಡಿತ, ಜೂಜಾಟದಲ್ಲಿ ತೊಡಗಿ ತಮ್ಮ ಸುಖ, ಸಂತೋಷಗಳನ್ನು ಮಾತ್ರ ನೋಡಿಕೊಳ್ತಿದ್ದಾರೆ ಎಂದು ನಂದಿನಿ ಹೇಳಿಕೊಂಡಿದ್ದಾರೆ. ಬೆಂಗಳೂರು ನಗರ ಪೊಲೀಸ್ ಕಮೀಷನರ್ ಅವರ ಹೆಸರಲ್ಲಿ ಪತ್ರ ಬರೆದಿಟ್ಟಿರುವ ನಂದಿನಿ, ತಮ್ಮ ಆತ್ಮಹತ್ಯೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.

Comments are closed.