ಕರಾವಳಿ

ಉಳ್ಳಾಲ ಕೋಡಿಯಲ್ಲಿ ಜೆಟ್ಟಿ ನಿರ್ಮಾಣಕ್ಕೆ 4.80ಕೋಟಿ ಹಾಗೂ ಹೆಜಮಾಡಿಯಲ್ಲಿ ಜೆಟ್ಟಿ ನಿರ್ಮಾಣಕ್ಕೆ 185 ಕೋಟಿ ಮಂಜೂರು :ಎ.ಬಿ.‌ ಇಬ್ರಾಹಿಂ

Pinterest LinkedIn Tumblr

ಮಂಗಳೂರು : ಪಶುಸಂಗೋಪನೆ, ಮೀನುಗಾರಿಕೆ ಹಾಗೂ ಅಲ್ಪಸಂಖ್ಯಾತರ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎ.ಬಿ.‌ ಇಬ್ರಾಹಿಂ ಉಳ್ಳಾಲ ಕೋಡಿ ನದಿ‌ ತೀರಕ್ಕೆ ಭೇಟಿ ಮೀನುಗಾರರೊಂದಿಗೆ‌ ಚರ್ಚಿಸಿದರು.

ಬಳಿಕ ಮಾತನಾಡಿದ ಅವರು, ಮೀನುಗಾರರ ಬೋಟು ಬರಲು ಅನುಕೂಲವಾಗುವ ನಿಟ್ಟಿನಲ್ಲಿ ಶಾಸಕ ಖಾದರ್ ಅವರ ಸೂಚನೆ ಮೇರೆಗೆ ಉಳ್ಳಾಲದ ಕೋಡಿಗೆ ಬೋಟು ಜೆಟ್ಟಿ ಮಂಜೂರಾಗಿದ್ದು ಮಳೆಗಾಲಕ್ಕೆ ಮೊದಲು, ಅಥವಾ ಬಳಿಕ ಕಾಮಗಾರಿ ಚಾಲನೆ ನೀಡಲಾಗುವುದು

ಕೋಡಿಯಲ್ಲಿ ಸದ್ಯ 82 ಮೀಟರ್ ಉದ್ದದ ಜೆಟ್ಟಿ, ಅದರ ನಡುವೆ ಎಂಟು ಮೀಟರ್ ರ್ಯಾಂಪ್ ನಿರ್ಮಾಣ ಆಗಲಿದ್ದು, 4.80ಕೋಟಿ ಮಂಜೂರಾಗಿದೆ. ಹೆಜಮಾಡಿಯಲ್ಲಿ ಜೆಟ್ಟಿ ನಿರ್ಮಾಣಕ್ಕೆ 185 ಕೋಟಿ ಮಂಜೂರಾಗಿದ್ದು, ಕುಳಾಯಿಯಲ್ಲೂ ಜೆಟ್ಟಿ ಇದೆ. ಈ ಹಿನ್ನೆಲೆಯಲ್ಲಿ ಕೋಡಿಯಲ್ಲಿ ಬೋಟುಗಳು ಎಷ್ಟಿದೆ ಎನ್ನುವ ಆಧಾರದಲ್ಲಿ ಬೃಹತ್ ಜೆಟ್ಟಿ ಬೇಕೋ, ಬೇಡವೋ ಎನ್ನುವ ಬಗ್ಗೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಲೈಟ್ ಫಿಶಿಂಗ್ ಸಮಸ್ಯೆ ಮಾಹಿತಿ : ಈ ಸಂದರ್ಭ ಉಳ್ಳಾಲ ಭಾಗದಲ್ಲಿ ನಿಷೇಧಿತ ಲೈಟ್ ಫಿಶಿಂಗ್ ಸಮಸ್ಯೆ ಬಗ್ಗೆ ನಾಡದೋಣಿ ಮೀನುಗಾರರ ಸಂಘದ ಪದಾಧಿಕಾರಿಗಳು ಅಳಲು ತೋಡಿಕೊಂಡರು. ಕೇರಳದಲ್ಲಿ ಲೈಟ್ ಫಿಶಿಂಗ್ ಐದೂಕಾಲು ಲಕ್ಷ ದಂಡ ಇದೆ, ಆದರೆ ನಮ್ಮಲ್ಲಿ ಐದು ಸಾವಿರ ಮಾತ್ರ ದಂಡ ಹಾಕಲಾಗುತ್ತಿದೆ. ಹಸಿರು ದೀಪ ಸಮುದ್ರಕ್ಕೆ ಹಾಕುವುದರಿಂದ ಹದಿನೈದು ಕಿ.ಮೀ. ದೂರದಲ್ಲಿ ಮೀನು‌ ನಶೆ ಬಂದು ನಮಗೆ ಮೀನು ಸಿಗುತ್ತಿಲ್ಲ ಎಂದರು.

ಅಲ್ಲದೆ ಮೀನುಗಾರರು ಇದೇ ವೃತ್ತಿ ನಂಬಿ ಬದುಕುತ್ತಿರುವುದರಿಂದ 60 ಆದವರಿಗೆ ಸರ್ಕಾರದಿಂದ ಭತ್ಯೆ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.

ಮನವಿ ಆಲಿಸಿದ ಇಬ್ರಾಹಿಂ ಅವರು, ಸಮಸ್ಯೆ ಪರಿಹಾರ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿ ಸರ್ಕಾರಕ್ಕೆ ಪತ್ರ ಬರೆಯಿರಿ ಎಂದು ಇಬ್ರಾಹಿಂ ಅವರು ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ತಿಪ್ಪೇಗೌಡ ಅವರಿಗೆ ಸೂಚನೆ ನೀಡಿದರು.

ಬೃಹತ್ ಜೆಟ್ಟಿ ಒದಗಿಸಿ: ರಶೀದ್

ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ, ಉಳ್ಳಾಲದಲ್ಲಿ ಮುಸ್ಲಿಮರು ಮತ್ತು ಮೊಗವೀರರು ಮೀನುಗಾರಿಕೆ ವೃತ್ತಿ ನಂಬಿದ್ದಾರೆ. ಕೋಡಿಯಲ್ಲಿ ನಿರ್ಮಾಣ ಆಗಲಿರುವ ಜೆಟ್ಟಿ ಕೇವಲ ನಾಡದೋಣಿಗಳಿಗೆ ಸೀಮಿತವಾಗಲಿದೆ. ಈ ಹಿನ್ನೆಲೆಯಲ್ಲಿ ಮೀನುಗಾರರ ಇನ್ನಷ್ಟು ಅನುಕೂಲಕ್ಕಾಗಿ ಬೃಹತ್ ಮೀನುಗಾರಿಕಾ ಜೆಟ್ಟಿ ನಿರ್ಮಾಣ ಆಗಬೇಕಿದೆ ಎಂದು ಅಹವಾಲು ಸಲ್ಲಿಸಿದರು.

ಈ ಸಂದರ್ಭ ಉಳ್ಳಾಲ ದರ್ಗಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ತ್ವಾಹ, ಉಪಾಧ್ಯಕ್ಷ ಮೋನು ಇಸ್ಮಾಯಿಲ್,  ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಸೋಲಾರ್ ಹನೀಫ್, ಕಾರ್ಯದರ್ಶಿ ಅಬ್ದುಲ್ ಗಣಿಫು ಉಳ್ಳಾಲ್, ಕೋಶಾಧಿಕಾರಿ ಮುಹಮ್ಮದ್ ರಫೀಕ್, ಯು.ಕೆ.ಇಸ್ಮಾಯಿಲ್ ಪೈಲೆಟ್, ಮಯ್ಯದ್ದಿ, ಬಂದರು ಇಲಾಖೆಯ ಕಾರ್ಯನಿರ್ವಾಹಕ‌ ಅಭಿಯಂತರ ಚಂದ್ರಶೇಖರ, ಕೋಟೆಪುರ ಜುಮಾ ಮಸೀದಿ ಅಧ್ಯಕ್ಷ ‌ಅಬ್ಬಾಸ್, ಮುಖಂಡರಾದ ಎ.ಆರ್.ನಝೀರ್ ಕೋಡಿ, ಅಹ್ಮದ್ ಬಾವ ಕೊಟ್ಟಾರ, ಆಸಿಫ್ ಅಬ್ದುಲ್ಲಾ, ರಫೀಕ್ ಕೋಡಿ ಇನ್ನಿತರರು ಉಪಸ್ಥಿತರಿದ್ದರು.

Comments are closed.