ಕರಾವಳಿ

ಸಮುದಾಯ ಸಹಾಯ ಕೇಂದ್ರ ರೋಗಿಗಳಿಗೆ ಸಹಾಯವಾಗಲಿ : ಸಚಿವ ಕೋಟ ಶ್ರೀನಿವಾಸ ಪೂಜಾರಿ

Pinterest LinkedIn Tumblr

ಮಂಗಳೂರು  :ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ನೀಗಿಸಲು ಸರಕಾರ ಆದ್ಯತೆ ನೀಡಿದ್ದು, ಶೀಘ್ರವೇ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಮಂಗಳೂರಿನ ಜಿಲ್ಲಾ ಆಸ್ಪತ್ರೆ ವೆನ್ಲಾಕ್‍ನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ದ.ಕ. ಜಿಲ್ಲಾ ಶಾಖೆ, ಯುವ ರೆಡ್ ಕ್ರಾಸ್, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಆಶ್ರಯದಲ್ಲಿ ನಡೆದ ಸಮುದಾಯ ಸಹಾಯ ಕೇಂದ್ರ ಉದ್ಘಾಟನೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ಇರುವ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಹೊಂದಿದೆ. ಅಂತಹ ಆಸ್ಪತ್ರೆಗಳಿಗೆ ಆದಷ್ಟು ಬೇಗನೆ ಸರ್ಕಾರ ವೈದ್ಯರನ್ನು ನೇಮಕ ಮಾಡಲಿದೆ, ಹಾಗೂ ಪ್ರತಿಯೊಂದು ಜಿಲ್ಲಾ ಆಸ್ಪತ್ರೆಯಲ್ಲಿ ಸಮುದಾಯ ಸಹಾಯ ಕೇಂದ್ರವನ್ನು ತೆರೆಯುವುದರಿಂದ ರೋಗಿಗಳಿಗೆ ಸಹಾಯವಾಗಲಿದೆ. ಬೇಸರ ಕಳೆಯಲು ಮನೆಯಲ್ಲಿ ಕಾಲಹರಣ ಮಾಡುವುದಕ್ಕಿಂತ ಆಸ್ಪತ್ರೆಯಲ್ಲಿ ಸೇವೆ ಮಾಡುವ ಮೂಲಕ ಆತ್ಮತೃಪ್ತಿ ಹೊಂದುವುದು ಲೇಸು. ರೋಗಿಗಳಿಗೆ ಸಲಹೆ, ಸಹಾಯ ಮಾಡಲು ಹಿರಿಯ ನಾಗರಿಕರು ಮತ್ತು ವಿದ್ಯಾರ್ಥಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲು ಮುಂದಾಗಿರುವುದು ಹೆಮ್ಮಯ ವಿಷಯ ಎಂದರು.

ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್, ಜಿಲ್ಲೆಯಲ್ಲಿ ಶೇಕಡಾ 47 ಜನರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಅಷ್ಟೇ ಅಲ್ಲದೇ ಹೊರ ಜಿಲ್ಲಾಗಳಾದ ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಸಹಿತ ಸುತ್ತಮುತ್ತಲಿನ ರೋಗಿಗಳು ಬರುತ್ತಾರೆ. ಅಲ್ಲದೆ, ಗಡಿ ರಾಜ್ಯ ಕೇರಳದ ಕಾಸರಗೋಡು ಜಿಲ್ಲೆಯಿಂದಲೂ ಚಿಕಿತ್ಸೆಗೆ ಆಗಮಿಸುವವರಿದ್ದಾರೆ. ರೋಗಿಗಳು ಹಾಗೂ ರೋಗಿಗಳ ಜತೆ ಸಹಾಯಕ್ಕೆಂದು ಬರುವವರಿಗೆ ಸಮಗ್ರ ಮಾಹಿತಿ ನೀಡಲು ಸಮುದಾಯ ಸಹಾಯ ಕೇಂದ್ರವು ಸಹಕಾರ ನೀಡಲಿದೆ ಎಂದರು.

ನಾವು ಮೊದಲು ಸೇವಾ ಕಾರ್ಯದಲ್ಲಿ ಭಾಗಿಯಾಗಿ ಅನಂತರ ಇತರರಿಗೆ ಸೇವಾ ಕಾರ್ಯದಲ್ಲಿ ತೊಡಗುವಂತೆ ಪ್ರೇರಣೆ ನೀಡಬೇಕು ಹಾಗೂ ರೋಗಿಗಳ ಸೇವೆಯನ್ನು ಮಾಡುವುದರಲ್ಲಿ ದೇವರನ್ನು ಕಾಣಬೇಕು. ಸೇವೆಯನ್ನು ಮಾಡುವ ಸಂದರ್ಭ ಇಚ್ಚಾಶಕ್ತಿ, ಸೇವಾನೋಭಾವನೆ, ಆತ್ಮಭಿಮಾನ, ಧೈರ್ಯ ತುಂಬುವ ಶಕ್ತಿ ಇದ್ದರೆ ರೋಗಿ ಅರ್ಧ ಖಾಯಿಲೆ ಮಾಯವಾಗುತ್ತದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಹೇಳಿದರು.

ಸಮುದಾಯ ಸಹಾಯ ಕೇಂದ್ರದ ಸದಸ್ಯ ಡಾ.ವೆಂಕಟ್ರಮಣ್ ಶೆಣೈ. ‘ಸುಮಾರು 60ರಿಂದ 75 ವರ್ಷದೊಳಗಿನ 30ಕ್ಕೂ ಹೆಚ್ಚು ಸ್ವಯಂ ಸೇವಕರು ಈಗಾಗಲೇ ನೋಂದಣಿ ಮಾಡಿಸಿಕೊಂಡಿದ್ದಾರೆ. ಪ್ರತಿದಿನವೂ ಸ್ವಯಂ ಸೇವಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ವಿದ್ಯಾರ್ಥಿಗಳು ಬರಲು ಉತ್ಸುಕರಾಗಿದ್ದಾರೆ. ಸ್ವಯಂ ಸೇವಕರು ಬೆಳಿಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಹೀಗೆ ದಿನದ ಬೇರೆ ಬೇರೆ ಸಮಯದಲ್ಲಿ ಸೇವೆ ಸಲ್ಲಿಸಲಿದ್ದಾರೆ. ಎಲ್ಲವನ್ನೂ ಸಂಭಾಳಿಸಿಕೊಂಡು ವೇಳಾಪಟ್ಟಿ ರಚಿಸಿದ್ದು, ಸಹಾಯ ಕೇಂದ್ರದ ಕಾರ್ಯ ಪಡೆ ಸಿದ್ಧವಾಗಿದೆ.

ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾದ ರೋಗಿಗಳು ಹಾಗೂ ಸಹಾಯಕ್ಕೆ ಬರುವವರು ಓದಿಗಾಗಿ ಗ್ರಂಥಾಲಯದಲ್ಲಿ ಬಗೆ ಬಗೆಯ ನಿಯತಕಾಲಿಕೆಗಳು, ವಾರಪತ್ರಿಕೆ, ಮಾಸಪತ್ರಿಕೆ ಸಹಿತ ಪುಸ್ತಕಗಳನ್ನು ಇರಿಸಲಿದ್ದೇವೆ. ಪುಸ್ತಕ, ನಿಯತಕಾಲಿಕೆಗಳು ಸುಲಭವಾಗಿ ಗೋಚರಿಸುವಂತಹ ಜಾಗದಲ್ಲಿ ಇಡಲಾಗುವುದು. ಓದುವ ಹವ್ಯಾಸವನ್ನು ಬೆಳೆಸುವುದೂ ಇದರಿಂದ ಸಾಧ್ಯವಾಗಲಿದೆ ಎಂದು ಮಕ್ಕಳ ತಜ್ಞ ಹಾಗೂ ಸಮುದಾಯ ಸಹಾಯ ಕೇಂದ್ರದ ಸದಸ್ಯ ಡಾ.ವೆಂಕಟ್ರಮಣ್ ಶೆಣೈ ತಿಳಿಸಿದರು..

ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೋ..ಪಿ.ಎಸ್.ಯಡಪಡಿತ್ತಾಯ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಎಸ್.ಎ. ಪ್ರಭಾಕರ ಶರ್ಮ, ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಅಧೀಕ್ಷಕರು ಡಾ. ರಾಜೇಶ್ವರಿ ದೇವಿ, ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ವರ್ಗ ಮತ್ತು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.