ರಾಷ್ಟ್ರೀಯ

ಭಾರತದ ಪೌರತ್ವ ಬೇಡವೆನ್ನುತ್ತಿರುವ ಟಿಬೆಟಿಯನ್ನರು!

Pinterest LinkedIn Tumblr


ಒಂದೆಡೆ ಪೌರತ್ವಕ್ಕಾಗಿ ಆಗ್ರಹಿಸಿ ಹಿಂಸಾಚಾರ ನಡೆಯುತ್ತಿದ್ದರೆ, ಇನ್ನೊಂದೆಡೆ ಭಾರತವನ್ನು ಪ್ರೀತಿಸುತ್ತಲೇ, ಈ ದೇಶದ ಪೌರತ್ವ ವನ್ನು ಕೊಟ್ಟರೂ ಬೇಡ ಎನ್ನುವ ನಿರಾಶ್ರಿತರು ಇದ್ದಾರೆ. ಭಾರತದಲ್ಲಿರುವ ಟಿಬೆಟಿಯನ್ ನಿರಾಶ್ರಿತರ ಕಥೆ-ವ್ಯಥೆ ಇದು. ಎಂದೋ ಒಂದು ದಿನ ತನ್ನ ದೇಶ ಸ್ವತಂತ್ರವಾಗುತ್ತದೆ ಎಂಬ ಭರವಸೆಯೊಂದಿಗೆ ತಾಯ್ನಾಡಿಗಾಗಿ ಹೋರಾಡುತ್ತಲೇ ಇದ್ದಾರೆ. ಎರಡು ತಲೆಮಾರಿನ ಜನರು ಹೀಗೆ ಹೋರಾಡುತ್ತಲೇ ಭಾರತದ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ.

ಚೀನಾ ದೇಶದ ಆಕ್ರಮಣದಿಂದಾಗಿ ದಿಕ್ಕೆಟ್ಟು ಭಾರತಕ್ಕೆ ದೇಶಭ್ರಷ್ಟರಾಗಿ 1959ರಲ್ಲಿ ಓಡಿ ಬಂದವರು ಟಿಬೆಟಿಯನ್ನರು . ದೇಶದ ಕೆಲವು ಕಡೆಗಳಲ್ಲಿ ಅಂದಿನ ಕೇಂದ್ರ ಸರಕಾರ ಅವರಿಗೆ ನಿರಾಶ್ರಿತರ ಶಿಬಿರ ತೆರೆದು ಮಾನವೀಯತೆಯ ನೆಲೆಯ ಮೇಲೆ ಆಶ್ರಯ ನೀಡಿತು. ಹೀಗೆ ರಾಜ್ಯದಲ್ಲಿ ಮೈಸೂರು ಜಿಲ್ಲೆಯ ಬೈಲುಕುಪ್ಪೆ, ಗುರುಪುರ, ಚಾಮರಾಜನಗರ ಜಿಲ್ಲೆಯ ಒಡೆಯರ ಪಾಳ್ಯ, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ಟಿಬೆಟಿಯನ್ ನಿರಾಶ್ರಿತರ ಶಿಬಿರಗಳಿವೆ. ಭಾರತದ ಟಿಬೆಟಿಯನ್ನರಿಗೆ ಅವರದೇ ಆದ ದೇಶಭ್ರಷ್ಟ (ಎಕ್ಸೈಲ್) ಸರಕಾರವಿದೆ. ಪ್ರಧಾನಮಂತ್ರಿ, ಸಚಿವರೂ ಇದ್ದಾರೆ.

ಭಾರತದಲ್ಲಿ ದೀರ್ಘಕಾಲದಿಂದ ನೆಲೆಸಿರುವ ಟಿಬೆಟಿಯನ್ನರಿಗೆ ಹಾಗೂ ಭಾರತದಲ್ಲೇ ಜನಿಸಿರುವ ಟಿಬೆಟಿಯನ್ನರಿಗೆ ಭಾರತೀಯ ಪೌರತ್ವ ನೀಡಲಾಗುತ್ತಿದೆ. ಭಾರತೀಯ ಪೌರತ್ವ ಬಯಸುವ ಟಿಬೆಟಿಯನ್ ವ್ಯಕ್ತಿ ತನ್ನ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಅನ್ನು ಪೊಲೀಸರಿಗೆ ಶಾಶ್ವತವಾಗಿ ಒಪ್ಪಿಸಬೇಕು. ನಂತರವೇ ಅವರಿಗೆ ಭಾರತೀಯ ಪೌರತ್ವ ನೀಡಲಾಗುತ್ತದೆ. ಭಾರತೀಯ ಪಾಸ್‌ಪೋರ್ಟ್ ಹಾಗೂ ಇಲ್ಲಿನ ಮತದಾರರ ಗುರುತಿನ ಚೀಟಿಯನ್ನೂ ನೀಡಲಾಗುತ್ತದೆ. ದೀರ್ಘ ಕಾಲದಿಂದ ಇಲ್ಲಿನ ಸ್ಥಳೀಯ ಜನರೊಂದಿಗೆ ಸೌಹಾರ್ದ ಸಂಬಂಧ ಹೊಂದಿ ಬಾಳ್ವೆ ನಡೆಸುತ್ತಿರುವ ಟಿಬೆಟಿಯನ್ನರಿಗೆ ತಮ್ಮ ತಾಯ್ನಾಡಿನ ತುಡಿತ, ಸೆಳೆತವೇ ಹೆಚ್ಚು. ಅದಕ್ಕಾಗಿಯೇ ಅವರದು ನಿರಂತರ ಹೋರಾಟ.

ಭಾರತದಲ್ಲಿ 1960-87ರ ವರೆಗೆ ಹುಟ್ಟಿರುವ ಟಿಬೆಟಿಯನ್ನರಿಗೆ ಇಂಡಿಯನ್ ಸಿಟಿಜನ್‌ಶಿಪ್ ಕೊಡಲಾಗುತ್ತಿದೆ. ಇದಕ್ಕಾಗಿ ಅವರಿಂದ ಕೆಲವು ದಾಖಲೆಗಳು ಬೇಕು. ಇದು ಕೇಂದ್ರ ಸರಕಾರದ ಆದೇಶ. ಆದರೆ, ಭಾರತೀಯ ಪೌರತ್ವ ಪಡೆಯಲು ಹೆಚ್ಚಿನ ಸಂಖ್ಯೆಯ ಟಿಬೆಟಿಯನ್ನರು ಮುಂದಾಗುತ್ತಿಲ್ಲ.

ಭಾರತ ನೀಡಿರುವ ಇಂತಹ ಹಕ್ಕುಗಳು ಸ್ವತಂತ್ರ ಟಿಬೆಟ್‌ಗಾಗಿ ನಡೆಯುತ್ತಿರುವ ನಮ್ಮ ಹೋರಾಟಕ್ಕೆ ಹಿನ್ನಡೆ ತರುವುದಿಲ್ಲ ಎಂಬ ವಿಶ್ವಾಸವನ್ನು ಇಲ್ಲಿನ ಟಿಬೆಟಿಯನ್ನರು ವ್ಯಕ್ತಪಡಿಸುತ್ತಾರೆ.

ಯುವ ಪೀಳಿಗೆಯ ಭಾರತ ಪ್ರೀತಿ
ಮೈಸೂರು: ಭಾರತೀಯ ಪೌರತ್ವ ಪಡೆಯಲು ಟಿಬೆಟಿಯನ್ ಯುವಪೀಳಿಗೆ ಇತ್ತೀಚಿನ ವರ್ಷಗಳಲ್ಲಿ ಮುಂದೆ ಬರುತ್ತಿದೆ. ಟಿಬೆಟಿಯನ್ನರ ಹೊಸ ತಲೆಮಾರು ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ವೈದ್ಯರು, ಎಂಜಿನಿಯರ್, ಶಿಕ್ಷಕರಾಗಿ ನಾನಾ ಕಡೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೊಳ್ಳೇಗಾಲ ತಾಲೂಕಿನ ಒಡೆಯರಪಾಳ್ಯದ ಟಿಬೆಟಿಯನ್ ನಿರಾಶ್ರಿತರ ಶಿಬಿರದ ಅಧಿಕಾರಿ ಗಿಲೆಕ್ ಅವರ ಪ್ರಕಾರ, ಈಗಾಗಲೇ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿರುವ ಶೇ.10ರಷ್ಟು ಟಿಬೆಟಿಯನ್ನರು ಹೀಗೆ ಭಾರತೀಯ ಪೌರತ್ವ ಪಡೆದಿದ್ದಾರೆ.

ಟಿಬೆಟಿಯನ್‌ರ ಅಂದಾಜು ಜನಸಂಖ್ಯೆ
ಬೈಲುಕುಪ್ಪೆ-18 ಸಾವಿರ
ಗುರುಪುರ- 5 ಸಾವಿರ
ಒಡೆಯರಪಾಳ್ಯ- 5 ಸಾವಿರ
ಮುಂಡಗೋಡು- 18 ಸಾವಿರ

ನಮಗೆ ನಮ್ಮದೇ ಆದ ಸರಕಾರವಿದೆ. ಪ್ರಧಾನಮಂತ್ರಿಯೂ ಇದ್ದಾರೆ. ಇಂದಲ್ಲ ನಾಳೆ ನಮ್ಮ ಟಿಬೆಟ್ ದೇಶ ಸ್ವತಂತ್ರವಾಗುತ್ತದೆ. ನಾವು ತಾಯ್ನಾಡಿಗೆ ವಾಪಸ್ ಹೋಗುತ್ತೇವೆ.
-ಟೆನ್‌ಜಿಂಗ್ ಡೋಲ್ಮಘಿ, ಟಿಬೆಟಿಯನ್ ನಿರಾಶ್ರಿತರು, ಬೈಲುಕುಪ್ಪೆ.

ಟಿಬೆಟಿಯನ್ನರಿಗೆ ಭಾರತೀಯ ಪೌರತ್ವ ಕೊಡಲಾಗುತ್ತಿದೆ. ಆದರೆ, ಬಹುತೇಕರಿಗೆ ಭಾರತೀಯ ಪೌರತ್ವ ಪಡೆಯುವ ಆಸಕ್ತಿ ಇಲ್ಲಘಿ. ಅವರಿಗೆ ಟೆಬೆಟ್ ಸ್ವತಂತ್ರ ದೇಶವಾಗಿ ವಾಪಸ್ ಹೋಗುತ್ತೇವೆ ಎಂಬ ಅದಮ್ಯ ವಿಶ್ವಾಸವಿದೆ.
-ಕೆ.ಮಹದೇವ, ಶಾಸಕ, ಪಿರಿಯಾಪಟ್ಟಣ

Comments are closed.