ಕರ್ನಾಟಕ

12 ಮಂದಿಗೆ ಮಂತ್ರಿ ಸ್ಥಾನ ನಿಶ್ಚಿತ; ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ

Pinterest LinkedIn Tumblr


ಬೆಂಗಳೂರು(ಡಿ. 10): ಉಪಚುನಾವಣೆಯಲ್ಲಿ ಭರ್ಜರಿ ಗೆಲುವಿನ ಬಳಿಕ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸುಭದ್ರಗೊಂಡಂತಾಗಿದೆ. ಈಗ ಕಾಂಗ್ರೆಸ್ ಮತ್ತು ಜೆಡಿಎಸ್​ನಿಂದ ಪಕ್ಷಾಂತರಗೊಂಡು ಬಂದು ಉಪಸಮರದಲ್ಲಿ ಗೆಲುವು ಸಾಧಿಸಿದ ಶಾಸಕರಿಗೆ ಈ ಮೊದಲು ನೀಡಿದ್ದ ವಾಗ್ದಾನವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಮುಖ್ಯಮಂತ್ರಿಗಳ ಹೆಗಲ ಮೇಲಿದೆ. ಉಪ ಚುನಾವಣೆಯಲ್ಲಿ ಗೆದ್ದ ಈ ಶಾಸಕರಿಗೆ ಸಂಪುಟ ಸೇರ್ಪಡೆ ಭಾಗ್ಯ ನಿಶ್ಚಿತವಾಗಿದೆ. ರಾಣೆಬೆನ್ನೂರಿನಲ್ಲಿ ಟಿಕೆಟ್ ಬಿಟ್ಟುಕೊಟ್ಟ ಆರ್. ಶಂಕರ್ ಅವರಿಗೂ ಮಂತ್ರಿಭಾಗ್ಯ ಸಿಗಲಿದೆ ಎನ್ನುತ್ತವೆ ಬಿಜೆಪಿ ಮೂಲಗಳು.

ಗುರುವಾರ ಮಧ್ಯಾಹ್ನ 3 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದೆ. ಉಪಸಮರದ ಬಳಿಕ ನಡೆಯಲಿರುವ ಈ ಮೊದಲ ಸಂಪುಟ ಸಭೆಯಲ್ಲಿ ನೂತನವಾಗಿ ಸೇರ್ಪಡೆಯಾಗಲಿರುವ ಸಚಿವರಿಗೆ ಯಾವ್ಯಾವ ಖಾತೆಗಳನ್ನು ನೀಡಬಹುದು ಎಂಬ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ವಿಧಾನಸೌಧದಲ್ಲಿ ನಡೆಯುವ ಆ ಸಭೆಯಲ್ಲೇ ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನಾರಚನೆಯ ರೂಪುರೇಖೆ ಅಂತಿಮಗೊಳ್ಳಬಹುದೆನ್ನಲಾಗಿದೆ. ಅದಾದ ಬಳಿಕ ಯಡಿಯೂರಪ್ಪ ಅವರು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

ಮೂಲಗಳ ಪ್ರಕಾರ, ರಮೇಶ್ ಜಾರಕಿಹೊಳಿ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಲಾಗುತ್ತದೆ. ಜೊತೆಗೆ ಅವರಿಗೆ ಬಹಳ ಮಹತ್ವದ್ದಾದ ಜಲ ಸಂಪನ್ಮೂಲ ಖಾತೆಯನ್ನ ಕೊಡಲಾಗುತ್ತದೆ. ಆಪರೇಷನ್ ಕಮಲದ ರೂವಾರಿಯಾದ ರಮೇಶ್ ಜಾರಕಿಹೊಳಿ ಅವರು ಈ ಮುಂಚೆಯೇ ಯಡಿಯೂರಪ್ಪರಿಂದ ವಾಗ್ದಾನ ಪಡೆದಿದ್ದರು. ಹೀಗಾಗಿ, ಅವರಿಗೆ ಆ ಎರಡೂ ಸ್ಥಾನ ಪಕ್ಕಾ ಆಗಿದೆ.

ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಇರುವ ಕಾರಣ ಮಾಜಿ ಬಿಡಿಎ ಅಧ್ಯಕ್ಷ ಎಸ್.ಟಿ. ಸೋಮಶೇಖರ್ ಅವರಿಗೆ ಸಹಕಾರಿ ಖಾತೆ ಸಿಗುವ ನಿರೀಕ್ಷೆ ಇದೆ. ಮೂಲತಃ ವೈದ್ಯರಾಗಿರುವ ಡಾ. ಕೆ. ಸುಧಾಕರ್ ಅವರಿಗೆ ಸಹಜವಾಗಿಯೇ ವೈದ್ಯಕೀಯ ಖಾತೆ ಒಲಿಯಲಿದೆ. ಬಳ್ಳಾರಿ ನಾಡಿನ ಆನಂದ್ ಸಿಂಗ್ ಅವರಿಗೆ ಪ್ರವಾಸೋದ್ಯಮ ಅಥವಾ ಗಣಿ ಮತ್ತು ಭೂ ವಿಜ್ಞಾನ ಖಾತೆ ಸಿಗಬಹುದೆನ್ನಲಾಗಿದೆ.

ರಾಣೆಬೆನ್ನೂರಿನಲ್ಲಿ ಟಿಕೆಟ್ ತ್ಯಾಗ ಮಾಡಿದ ಆರ್. ಶಂಕರ್ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡುವುದರ ಜೊತೆಗೆ ಹಿಂದಿನ ಮೈತ್ರಿ ಸರ್ಕಾರದಲ್ಲಿ ಅವರು ಹೊಂದಿದ್ದ ಅರಣ್ಯ ಖಾತೆಯನ್ನೇ ಕೊಡುವ ಸಾಧ್ಯತೆ ಇದೆ.

ಸಂಭಾವ್ಯ ಸಚಿವರು ಮತ್ತು ಖಾತೆಗಳು:
1) ರಮೇಶ್ ಜಾರಕಿಹೊಳಿ- ಡಿಸಿಎಂ ಮತ್ತು ಜಲಸಂಪನ್ಮೂಲ ಖಾತೆ
2) ಎಸ್.ಟಿ.ಸೋಮಶೇಖರ್- ಸಹಕಾರಿ ಇಲಾಖೆ
3) ಗೋಪಾಲಯ್ಯ- ಆಹಾರ ಮತ್ತು ನಾಗರೀಕ ಸರಬರಾಜು ಖಾತೆ
4) ಬೈರತಿ ಬಸವರಾಜ್- ಇಂಧನ ಖಾತೆ
5) ಡಾ.ಸುಧಾಕರ್- ವೈದ್ಯಕೀಯ ಖಾತೆ
6) ಶಿವರಾಂ ಹೆಬ್ಬಾರ್- ತೋಟಗಾರಿಕೆ, ಒಳನಾಡು ಮತ್ತು ಬಂದರು ಖಾತೆ
7) ಆನಂದ್ ಸಿಂಗ್ – ಪ್ರವಾಸೋದ್ಯಮ ಅಥವಾ ಗಣಿ ಮತ್ತು ಭೂ ವಿಜ್ಞಾನ ಖಾತೆ
8) ಮಹೇಶ್ ಕುಮಟಹಳ್ಳಿ- ಯುವಜನ ಮತ್ತು ಕ್ರೀಡಾ ಇಲಾಖೆ
9) ನಾರಾಯಣಗೌಡ- ಪ್ರವಾಸೋದ್ಯಮ ಖಾತೆ
10) ಶ್ರೀಮಂತ ಪಾಟೀಲ್- ಸಕ್ಕರೆ ಮತ್ತು ರೇಷ್ಮೆ ಖಾತೆ
11) ಬಿ.ಸಿ.ಪಾಟೀಲ್- ಗೃಹ ಅಥವಾ ಲೋಕೋಪಯೋಗಿ ಖಾತೆ
12) ಆರ್.ಶಂಕರ್ – ಎಂಎಲ್​ಸಿ ಸ್ಥಾನ ಮತ್ತು ಅರಣ್ಯ ಖಾತೆ

Comments are closed.