ರಾಷ್ಟ್ರೀಯ

ಗಾಂಧಿಯನ್ನು ದೇಶದ ಮಗ ಎಂದು ಕರೆದ ಸಾಧ್ವಿ ಪ್ರಗ್ಯಾ ಸಿಂಗ್

Pinterest LinkedIn Tumblr


ಭೂಪಾಲ್: ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ಬಿಜೆಪಿಯ ಸಂಸದೆ ಸಾಧ್ವಿ ಪ್ರಗ್ಯಾ ಠಾಕೂರ್ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅದು ಮಹಾತ್ಮ ಗಾಂಧೀಜಿ ಅವರ ವಿಷಯವಾಗಿ.

ರೈಲ್ವೆ ಇಲಾಖೆ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಭೂಪಾಲ್ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಅವರು, ಮಹಾತ್ಮ ಗಾಂಧೀಜಿ ಅವರನ್ನು ರಾಷ್ಟ್ರಪಿತ ಎಂದು ಕರೆಯುವ ಬದಲು ರಾಷ್ಟ್ರದ ಮಗ ಎಂದು ಕರೆದಿದ್ದಾರೆ.

ಗಾಂಧೀಜಿ ಈ ದೇಶದ ಮಗ, ಈ ಮಣ್ಣಿನ ಮಗ. ರಾಮ, ಮಹಾರಾಣ ಪ್ರತಾಪ್, ಶಿವಾಜಿ ಮಹಾರಾಜ್ ಕೂಡ ಈ ನೆಲದ ಮಕ್ಕಳು. ಈ ದೇಶಕ್ಕಾಗಿ ಅವರು ಮಾಡಿರುವ ಕೆಲಸ ಅವಿಸ್ಮರಣೀಯ. ಅವರ ದಾರಿ ನಮ್ಮೆಲ್ಲರಿಗೂ ದಾರಿದೀಪ, ಅವರ ಆದರ್ಶಗಳನ್ನು ನಾವೆಲ್ಲಾ ಅಳವಡಿಸಿಕೊಂಡು, ಅನುಸರಿಸಿಕೊಂಡು ಹೋಗಬೇಕು ಎಂದು ಸಾಧ್ವಿ ಅವರು ಹೇಳಿದ್ದರು.

ಮಹಾತ್ಮ ಗಾಂಧೀಜಿ ಬಗ್ಗೆ ಠಾಕೂರ್ ನೀಡಿದ ಹೇಳಿಕೆಯನ್ನು ಮಧ್ಯಪ್ರದೇಶ ಕಾಂಗ್ರೆಸ್ ಸರ್ಕಾರ ತೀವ್ರವಾಗಿ ಖಂಡಿಸಿದೆ. ಸ್ವಾತಂತ್ರ್ಯ ಚಳವಳಿಯ ನಾಯಕನಿಗೆ ಅಪಮಾನ ಮಾಡಿದ್ದಾರೆ ಎಂದು ಹೇಳಿದೆ.

ಇದೇ ವರ್ಷದ ಮೇ ನಲ್ಲಿ ಗಾಂಧಿ ಹಂತಕ ನಾಥೂರಾಮ್​ ಗೂಡ್ಸೆಯನ್ನು ದೇಶಭಕ್ತ ಎಂದು ಇದೇ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಕರೆಯುವ ಮೂಲಕ ವಿವಾದಕ್ಕೆ ಕಾರಣವಾಗಿದ್ದರು. ಈ ಹೇಳಿಕೆ ತೀವ್ರ ಟೀಕೆಗೆ ಗುರಿಯಾದ ಬಳಿಕ ತಕ್ಷಣದಲ್ಲೇ ಮಾಲೆಂಗಾವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪ್ರಗ್ಯಾ ಸಿಂಗ್ ತಮ್ಮ ಹೇಳಿಕೆಯನ್ನು ಹಿಂಪಡೆದು, ಕ್ಷಮೆ ಕೋರಿದ್ದರು.

ಅದೇ ಸಮಯದಲ್ಲಿ ಸಂದರ್ಶನವೊಂದರಲ್ಲಿ ಪ್ರಗ್ಯಾ ಅವರು, 1992ರಲ್ಲಿ ಬಾಬ್ರಿ ಮಸೀದಿ ಕೆಡವಿದ್ದಕ್ಕೆ ಪ್ರಗ್ಯಾಗೆ ಬೇಸರವಿಲ್ಲವಂತೆ. ನನ್ನ ನಿರ್ಧಾರದ ಬಗ್ಗೆ ನನಗೆ ಸಂತಸವಿದೆ ಎಂದು ಹೇಳಿಕೆ ನೀಡಿದ್ದರು.

Comments are closed.