ರಾಷ್ಟ್ರೀಯ

ಎಲ್ಲಾ 27 ಬ್ಯಾಂಕ್​ ಯೂನಿಯನ್​ಗಳಿಂದ ಬ್ಯಾಂಕ್​​ಗಳ ವಿಲೀನ ಖಂಡಿಸಿ ಪ್ರತಿಭಟನೆ

Pinterest LinkedIn Tumblr

ನವದೆಹಲಿ(ಆ30): ಸಾರ್ವಜನಿಕ ವಲಯದ 27 ಬ್ಯಾಂಕುಗಳನ್ನು 12 ಬ್ಯಾಂಕುಗಳೊಂದಿಗೆ ವಿಲೀನ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬ್ಯಾಂಕಿಂಗ್​ ವಲಯದಿಂದ ತೀವ್ರ ಖಂಡನೆ ವ್ಯಕ್ತವಾಗಿದೆ. ಬ್ಯಾಂಕ್​ಗಳ ವಿಲೀನದಿಂದ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಾಧ್ಯವಿಲ್ಲ, ಆರ್ಥಿಕ ಅಭಿವೃದ್ದಿಯೂ ಸಾಧ್ಯವಿಲ್ಲ ಎಂದು ಶನಿವಾರ ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕ್​ ಸಿಬ್ಬಂದಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕ ವಲಯದ 27 ಬ್ಯಾಂಕುಗಳನ್ನು 12 ಬ್ಯಾಂಕುಗಳೊಂದಿಗೆ ವಿಲೀನ ಮಾಡುವುದಾಗಿ ಘೋಷಿಸಿದರು.

ಬ್ಯಾಂಕ್​ ಎಂಪ್ಲಾಯೀಸ್ ಫೆಡರೇಷನ್​​ ಆಫ್​ ಇಂಡಿಯಾದ ಪ್ರಧಾನ ಕಾರ್ಯದರ್ಶಿಯಾದ ದೇಬಾಸಿಸ್​ ಬಸು ಚೌಧರಿ ಬ್ಯಾಂಕುಗಳ ವಿಲೀನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬ್ಯಾಂಕುಗಳ ವಿಲೀನದಿಂದ ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯವಿಲ್ಲ. ಇದರಿಂದ ಆರ್ಥಿಕ ಅಭಿವೃದ್ಧಿಯೂ ಸಾಧ್ಯವಿಲ್ಲ. ಇದು ಬ್ಯಾಂಕಿಂಗ್​ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಹಾಗೂ ಹಣಕಾಸಿನ ಸೇರ್ಪಡೆ ಗುರಿಯ ವಿರುದ್ಧವಾಗಿಯೂ ಇದೆ ಎಂದರು.

ಕೆನರಾ, ಸಿಂಡಿಕೇಟ್​ ಸೇರಿ ಹಲವು ಬ್ಯಾಂಕುಗಳು ವಿಲೀನ; ಬ್ಯಾಂಕಿಂಗ್ ವಲಯದ ಬಲವರ್ಧನೆಗೆ ಕ್ರಮ ಎಂದ ವಿತ್ತ ಸಚಿವೆ

ಜಂಟಿ ಪ್ಲಾಟ್‌ಫಾರ್ಮ್ ಆಫ್ ಬ್ಯಾಂಕಿಂಗ್ ಯೂನಿಯನ್‌ನ ಸಹಯೋಗದಲ್ಲಿ ಈ ಪ್ರತಿಭಟನೆ ನಡೆಯಲಿದೆ. ಇದರಲ್ಲಿ ಒಂಬತ್ತು ಒಕ್ಕೂಟಗಳು ಮತ್ತು ಭಾರತದ ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕುಗಳ ಪ್ರಾತಿನಿಧ್ಯವಿದೆ ಎಂದು ಚೌಧರಿ ತಿಳಿಸಿದರು.

ನಾವು ಈ ಬ್ಯಾಂಕುಗಳ ವಿಲೀನಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದೇವೆ. ಈ ಹಿಂದೆ ಬ್ಯಾಂಕುಗಳು ವಿಲೀನಗೊಂಡ ಬಳಿಕ ಶಾಖೆಗಳು ಮತ್ತು ಕಚೇರಿಗಳು ಮುಚ್ಚಲ್ಪಟ್ಟಿರುವುದನ್ನು ನಾವು ನೋಡಿದ್ದೇವೆ ಎಂದರು.

ಚೇತರಿಕೆ ಕಾಣದ ದೇಶದ ಆರ್ಥಿಕತೆ; ಶೇ.5ಕ್ಕೆ ಕುಸಿದ ಜಿಡಿಪಿ
ಪಂಜಾಬ್​ ನ್ಯಾಷನಲ್​ ಬ್ಯಾಂಕ್, ಓರಿಯಂಟಲ್​ ಬ್ಯಾಂಕ್​ ಆಫ್ ಕಾಮರ್ಸ್​ ಮತ್ತು ಯುನೈಟೆಡ್​ ಬ್ಯಾಂಕ್​ಅನ್ನು ವಿಲೀನ ಮಾಡಲಾಗಿದೆ. ಕೆನರಾ ಬ್ಯಾಂಕ್​ ಮತ್ತು ಸಿಂಡಿಕೇಟ್​ ಬ್ಯಾಂಕ್​ ಒಂದಾಗಿವೆ ಹಾಗೂ ಯೂನಿಯನ್​ ಬ್ಯಾಂಕ್​ ಆಫ್​ ಇಂಡಿಯಾ, ಆಂಧ್ರಾ ಬ್ಯಾಂಕ್​ ಮತ್ತು ಕಾರ್ಪೊರೇಷನ್​ ಬ್ಯಾಂಕ್​ ಗಳು ವಿಲೀನವಾಗಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಘೋಷಿಸಿದ್ದರು.

ಬ್ಯಾಂಕ್​ ಆಫ್​ ಇಂಡಿಯಾ ಮತ್ತು ಸೆಂಟ್ರಲ್​ ಬ್ಯಾಂಕ್​ ಆಫ್​ ಇಂಡಿಯಾ ರಾಷ್ಟ್ರೀಯ ಸಮಕ್ಷಮದಲ್ಲಿ ಮುಂದುವರೆಯಲಿದೆ. ಇಂಡಿಯನ್​ ಓವರ್​ಸೀಸ್​ ಬ್ಯಾಂಕ್​, ಯುಸಿಒ ಬ್ಯಾಂಕ್​, ಬ್ಯಾಂಕ್​ ಆಫ್​ ಮಹಾರಾಷ್ಟ್ರ ಮತ್ತು ಪಂಜಾಬ್​, ಸಿಂಧ್​ ಬ್ಯಾಂಕ್​ಗಳು ಪ್ರಾದೇಶಿಕ ಉಪಸ್ಥಿತಿಯಲ್ಲಿ ಮುಂದುವರೆಯಲಿವೆ ಎಂದು ಹೇಳಿದ್ದರು.

Comments are closed.