ಕರ್ನಾಟಕ

ಪತ್ನಿಯ ಶವವನ್ನು ಬ್ಯಾಗ್​ನಲ್ಲಿಟ್ಟು ಎಸ್ಕೇಪ್!

Pinterest LinkedIn Tumblr


ಆನೇಕಲ್ (ಆ. 24): ಇತ್ತೀಚೆಗೆ ದೇಶದಲ್ಲಿ ಅಪರಾಧ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿದೆ. ಬೆಚ್ಚಿ ಬೀಳಿಸುವ ಘಟನೆಗಳು ನಮ್ಮ ನಡುವೆಯೇ ನಡೆಯುತ್ತಿರುತ್ತವೆ. ಅಂಥದ್ದೊಂದು ದುರ್ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪ ನಡೆದಿದೆ.

ಹೆಂಡತಿಯ ಹತ್ಯೆ ಮಾಡಿದ ಗಂಡ ಆಕೆಯ ಮೃತದೇಹವನ್ನು ಲಗೇಜ್ ಬ್ಯಾಗ್​ನಲ್ಲಿಟ್ಟು ಮನೆಬಿಟ್ಟು ಪರಾರಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೆಲಸ ಹುಡುಕಿಕೊಂಡು ಒರಿಸ್ಸಾದಿಂದ ಬೆಂಗಳೂರಿಗೆ ಬಂದಿದ್ದ ಸುನೀಲ್ ಕುಮಾರ್ ಮೊಹಂತಿ ಮತ್ತು ರೋಸಾಲಿಯಾ ಸರೋಜಿನಿ ಬಿರ್ಲಾ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಬಸಾಪುರದಲ್ಲಿ ಮನೆ ಮಾಡಿಕೊಂಡಿದ್ದರು. 2 ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಈ ದಂಪತಿ ಶಿಫ್ಟ್​ ಆಗಿದ್ದರು.

ಇದೇ ತಿಂಗಳ 14ನೇ ತಾರೀಕಿನಿಂದ ಸುನೀಲ್ ಕುಮಾರ್ ಅವರ ಮನೆಗೆ ಬೀಗ ಹಾಕಲಾಗಿತ್ತು. ಅಕ್ಕ-ಪಕ್ಕದ ಮನೆಯವರು ಅವರು ಊರಿಗೆ ಹೋಗಿರಬಹುದು ಎಂದು ಆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಅದಾಗಿ ಒಂದು ವಾರ ಕಳೆಯುವಷ್ಟರಲ್ಲಿ ಮನೆಯೊಳಗಿಂದ ಕೆಟ್ಟ ವಾಸನೆ ಬರಲಾರಂಭಿಸಿತು. ಸುತ್ತಮುತ್ತಲಿನ ಮನೆಯವರಿಗೆ ಆ ಕಡೆ ಓಡಾಡಲೂ ಅಸಾಧ್ಯವೆನಿಸುವ ವಾಸೆ ಎಲ್ಲೆಡೆ ಹರಡಿತು. ಇದರಿಂದ ಅನುಮಾನಗೊಂಡ ನೆರೆಹೊರೆಯವರು ಸ್ಥಳೀಯ ಪೊಲೀಸರಿಗೆ ವಿಷಯ ತಿಳಿಸಿದರು. ಪೊಲೀಸರು ಮನೆಯ ಮಾಲೀಕರಿಂದ ನಕಲಿ ಕೀ ಪಡೆದು ಮನೆ ಬಾಗಿಲು ತೆರೆದು ಒಳಗೆ ಹೋಗಿ ನೋಡಿದಾಗ ಕೊಲೆಯ ವಿಷಯ ಗೊತ್ತಾಗಿದೆ.

ಲಗೇಜ್ ಬ್ಯಾಗ್​ನಲ್ಲಿ ಹೆಂಡತಿಯ ಹೆಣವನ್ನು ತುಂಬಿಸಿಟ್ಟು ಮನೆಗೆ ಬೀಗ ಹಾಕಿ ಸುನೀಲ್ ಕುಮಾರ್ ಮೊಹಂತಿ ಪರಾರಿಯಾಗಿದ್ದಾನೆ. ರೋಸಾಲಿಯಾ ಸರೋಜಿನಿ ಬಿರ್ಲಾ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಮನೆಯೊಳಗೆ ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ಆರೋಪಿ ಸುನೀಲ್ ಕುಮಾರ್​ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Comments are closed.