
ಬೆಂಗಳೂರು(ಜುಲೈ.21): ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿಶ್ವಾಸಮತ ಯಾಚನೆಗೆ ನಾಳೆಯೇ ಕೊನೇ ದಿನ ಎಂದು ಸ್ಪೀಕರ್ ರಮೇಶ್ ಕುಮಾರ್ ಸಮಯ ನಿಗದಿ ಮಾಡಿದ್ದಾರೆ. ಈ ಬೆನ್ನಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ವಿಶ್ವಾಸಮತ ಯಾಚನೆಗೆ ಸ್ವಯಂ ಕಾಲಮಿತಿ ವಿಧಿಸಿಕೊಂಡಿದ್ದಾರೆ. ಹಾಗಾಗಿ ಹೇಗಾದರೂ ಸರಿಯೇ ಶತಾಯಗತಾಯ ಸರ್ಕಾರ ಉಳಿಸಿಕೊಳ್ಳಬೇಕೆಂದು ಜಿದ್ದಿಗೆ ಬಿದ್ದು ಮೈತ್ರಿ ಪಕ್ಷಗಳ ನಾಯಕರು ಬಿರುಸಿನ ಕಾರ್ಯತಂತ್ರ ನಡೆಸುತ್ತಿದ್ದಾರೆ.
ಇತ್ತ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅಖಾಡಕ್ಕಿಳಿದರೆ, ಅತ್ತ ಸಚಿವ ಡಿ.ಕೆ ಶಿವಕುಮಾರ್ ಕಾಂಗ್ರೆಸ್ನಿಂದ ಅತೃಪ್ತರ ಜೊತೆ ಮಾತುಕತೆಗೆ ಯತ್ನಿಸುತ್ತಿದ್ಧಾರೆ ಎನ್ನಲಾಗುತ್ತಿದೆ. ಈ ಮಧ್ಯೆ ಮೈತ್ರಿ ಸರ್ಕಾರ ಪತನಕ್ಕೆ ಮುನ್ನವೇ ಕಾಂಗ್ರೆಸ್ನಲ್ಲಿ ಆಂತರಿಕ ಕದನ ಶುರುವಾಗಿದೆ. ಶ್ರೀಮಂತ ಪಾಟೀಲ್ ವಿಚಾರದಲ್ಲಿ ಭಾರೀ ಕಾಂಗ್ರೆಸ್ ಹಿರಿಯ ನಾಯಕರೇ ಮುನಿಸಿಕೊಂಡಿದ್ದಾರೆ ಎಂದು ನ್ಯೂಸ್-18 ಕನ್ನಡಕ್ಕೆ ತಿಳಿದು ಬಂದಿದೆ.
ಶುಗರ್ ಫ್ಯಾಕ್ಟರಿ ರೇಟ್ ಅಗ್ರಿಮೆಂಟ್ ಫಿಕ್ಸ್ ಆಗಿರಲಿಲ್ಲ. ಕಳೆದ 3 ತಿಂಗಳಿಂದಲೂ ಫೈಲ್ಗೆ ಸಿಎಂ ಸಹಿ ಹಾಕಿರಲಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಕರೆ ಮಾಡಿದರೂ, ಸಿಎಂ ಕ್ಯಾರೇ ಎನ್ನಲಿಲ್ಲ. ರೆಸಾರ್ಟ್ನಿಂದ ನಾಪತ್ತೆ ಆದ ದಿನವೂ ಅಗ್ರಿಮೆಂಟ್ ಪೇಪರ್ ಟೇಬಲ್ನಲ್ಲೇ ಇತ್ತು. ಆದರೂ ಸಿಎಂ ಸಹಿ ಹಾಕಲಿಲ್ಲ ಎಂದು ಸಿಟ್ಟಿಗೆದ್ದು ಶ್ರೀಮಂತ ಪಾಟೀಲ್ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಇನ್ನು ಶ್ರೀಮಂತ ಪಾಟೀಲ್ ಪಾರಾರಿಯಾಗಿಲ್ಲ. ಬದಲಿಗೆ ಸಿದ್ದರಾಮಯ್ಯನವರೇ ಮುಂಬೈಗೆ ಕಳಿಸಿ ಕೊಟ್ಟಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಇಂತಹ ಆರೋಪ ಎಸಗಿದ್ದು ಬೇರ್ಯಾರು ಅಲ್ಲ, ಖುದ್ದು ಕಾಂಗ್ರೆಸ್ನ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್. ಈ ವಿಚಾರಕ್ಕೆ ಸಂಬಂಧಿಸಿದಂತೇ ಆಗಲೇ ಸಿಎಂ ಕುಮಾರಸ್ವಾಮಿ ಮತ್ತು ಶಿವಕುಮಾರ್ ಕಾಂಗ್ರೆಸ್ ಹೈಕಮಾಂಡ್ಗೆ ದೂರು ನೀಡಿದ್ಧಾರೆ ಎನ್ನುತ್ತಿವೆ ಮೂಲಗಳು.
ಸಿದ್ದರಾಮಯ್ಯ ಜತೆಗೆ ಚರ್ಚಿಸಿದ ಬಳಿಕವೇ ಶ್ರೀಮಂತ ಪಾಟೀಲ ಎಸ್ಕೇಪ್ ಆಗಿದ್ದಾರೆ. ಇವರಿಗೆ ಮೈತ್ರಿ ಸರ್ಕಾರ ಇರೋದು ಬೇಕಾಗಿಲ್ಲ. ಆದ್ದರಿಂದಲೇ ಶ್ರೀಮಂತ ಪಾಟೀಲ್ ಅವರನ್ನು ಕಳಿಸಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ಧಾರೆ.
ಸಚಿವ ಡಿ.ಕೆ ಶಿವಕುಮಾರ್ ಆರೋಪಕ್ಕೆ ಸಿದ್ದರಾಮಯ್ಯ ಕೆಂಡಾಮಂಡಲ ಆಗಿದ್ಧಾರೆ. ಅಲ್ಲದೇ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲೇ ಡಿಕೆಶಿಗೆ ತರಾಟೆ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಎಂದು ಪಕ್ಷದ ಆಪ್ತ ಮೂಲಗಳು ತಿಳಿಸಿವೆ.
Comments are closed.