ಕರ್ನಾಟಕ

ರಾಮಲಿಂಗಾರೆಡ್ಡಿ ಮನವೊಲಿಕೆಗೆ ಕುಮಾರಸ್ವಾಮಿ ನೇತೃತ್ವದ ನಾಯಕರ ಸಂಧಾನ ವಿಫಲ

Pinterest LinkedIn Tumblr


ಬೆಂಗಳೂರು: ಕರ್ನಾಟಕ ದೋಸ್ತಿ ಸರಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿ ರಾಜೀನಾಮೆ ನೀಡಿರುವ ಬೆಂಗಳೂರು ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಮನವೊಲಿಕೆಗೆ ಮುಖ್ಯಮಂತ್ರಿ ನೇತೃತ್ವದ ನಿಯೋಗ ಪ್ರಯತ್ನಿಸಿದ್ದು, ಇದು ಸಂಪೂರ್ಣ ವಿಫಲವಾಗಿದೆ.

ರಾಮಲಿಂಗಾರೆಡ್ಡಿ ತಮ್ಮ ರಾಜೀನಾಮೆ ನಿರ್ಧಾರಕ್ಕೆ ಬದ್ಧರಾಗಿದ್ದು, ಯಾವುದೇ ಒತ್ತಡಗಳಿಗೆ ಮಣಿಯದೆ ಬಂಡೆಯಂತೆ ಅಚಲರಾಗಿದ್ದಾರೆ. ನಾಯಕರು ಒಂದು ಗಂಟೆಗೂ ಹೆಚ್ಚು ಮಾತುಕತೆ ನಡೆಸಿದರು. ನಂತರ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್‌ ಪ್ರತ್ಯೇಕವಾಗಿ ರಾಮಲಿಂಗಾರೆಡ್ಡಿ ಜತೆ ಚರ್ಚಿಸಿದರು. ಯಾವುದೇ ರೀತಿಯ ಭರವಸೆ ನೀಡಿದರೂ ಬಗ್ಗಲಿಲ್ಲ.

ದೋಸ್ತಿ ಸರಕಾರವನ್ನು ಶತಾಯಗತಾಯ ಉಳಿಸಿಕೊಳ್ಳಲು ರಾಜೀನಾಮೆ ನೀಡಿರುವ ಶಾಸಕರ ಮನವೊಲಿಸಲು ಕಾಂಗ್ರೆಸ್‌ ನಾಯಕರು ಶತ ಪ್ರಯತ್ನ ನಡೆಸುತ್ತಿದ್ದಾರೆ.

ಭಾನುವಾರ ಸಂಜೆ ಕಾಂಗ್ರೆಸ್‌ನ ಎಲ್ಲ ದಂಡನಾಯಕರು ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಸಂಧಾನಕ್ಕೆ ಮುಂದಾದರು. ಕಾಂಗ್ರೆಸ್‌ ಪಕ್ಷವನ್ನು ಬೆಂಗಳೂರಿನಲ್ಲಿ ಕಟ್ಟಿ ಬೆಳೆಸಿದ ಹಾಗೂ ಅತ್ಯಂತ ಸಜ್ನನ ರಾಜಕಾರಣಿ ಎಂದೇ ಗುರುತಿಸಿಕೊಂಡಿರುವ ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿರುವುದು ದೋಸ್ತಿಗಳಿಗೆ ದೊಡ್ಡ ಶಾಕ್‌ ಆಗಿದೆ.

ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆಸಿ ವೇಣುಗೋಪಾಲ್‌, ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್‌, ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್‌, ದಿನೇಶ್‌ ಗುಂಡೂರಾವ್‌ ಸೇರಿದಂತೆ ಹಲವಾರು ನಾಯಕರು ಸಂಧಾನಕ್ಕೆ ಆಗಮಿಸಿದ್ದರು.

ಸುಮಾರು ಒಂದು ಗಂಟೆಗಳಿಗೂ ಹೆಚ್ಚು ಕಾಲ ರಾಮಲಿಂಗಾರೆಡ್ಡಿ ಜತೆ ಮಾತುಕತೆ ನಡೆಸಿದರು.

Comments are closed.