
ಮಂಡ್ಯ: ಆಪರೇಷನ್ ಕಮಲದ ಹಿಂದೆ ಜೆಡಿಎಸ್ ಶಾಸಕ ಹೆಚ್. ವಿಶ್ವನಾಥ್ ಕೈವಾಡ ಇದ್ದರೂ ಇರಬಹುದು ಎಂದು ಮಾಜಿ ಡಿಸಿಎಂ ಆರ್. ಅಶೋಕ್ ಹೇಳಿದ್ದಾರೆ.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ಪತನದ ಕಡೆ ಹೋಗ್ತಿದೆ. ಕುಮಾರಸ್ವಾಮಿ ನಡವಳಿಕೆ ಬಗ್ಗೆ ಕಾಂಗ್ರೆಸ್ ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಜೆಡಿಎಸ್- ಕಾಂಗ್ರೆಸ್ ಶಾಸಕರಿಗೆ ತಾರತಮ್ಯ ಮಾಡ್ತಿದ್ದಾರೆ. ಆನಂದ್ ಸಿಂಗ್ ಅಲ್ಲದೇ ಅನೇಕ ಶಾಸಕರು ರಾಜೀನಾಮೆ ಕೊಡ್ತಾರೆ ಎಂದು ತಿಳಿಸಿದರು.
ಸರ್ಕಾರ ಬದುಕಿದೆಯೋ ಸತ್ತಿದೆಯೋ ಗೊತ್ತಿಲ್ಲ
ಬಿಜೆಪಿ ಆಪರೇಷನ್ ಕಮಲ ಮಾಡಲ್ಲ, ಸರ್ಕಾರ ಪತನ ಆದರೆ ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ, ರಾಜೀನಾಮೆ ನೀಡೋದು ಸರದಿ ಸಾಲಿನಂತೆ ಇದು ನಿಲ್ಲೋದಿಲ್ಲ, ಎರಡು ವಿಕೆಟ್ ಬಿದ್ದಿದೆ. ಇನ್ನಷ್ಟು ವಿಕೆಟ್ ಬೀಳಬಹುದು. ಒಂದು ವರ್ಷದಲ್ಲಿ ಸರ್ಕಾರ ಬದುಕಿದೆಯೋ ಸತ್ತಿದೆಯೋ ಗೊತ್ತಿಲ್ಲ, ಮಂಡ್ಯದಲ್ಲಿ ಸಿಎಂ ಮಗ ಸೋತಿದ್ದಾರೆ ಇದು ಸಿಎಂ ಸೋತಂತೆ. ಸಿದ್ದರಾಮಯ್ಯ ಗೆ ಸರ್ಕಾರ ಬಿದ್ದರೆ ಸಾಕು ಎಂದು ದಿನ ಒಂದೊಂದು ಬಾಂಬ್ ಹಾಕ್ತಿದ್ದಾರೆ. ಕುಮಾರಸ್ವಾಮಿ, ಡಿ. ಕೆ. ಶಿವಕುಮಾರ್, ಪರಮೇಶ್ವರ್ ಗೆ ಮಾತ್ರ ಸರ್ಕಾರ ಬೇಕಿದೆ. ಮೈತ್ರಿ ಸರ್ಕಾರ ಬಿದ್ದರೆ ನಾವು ಚುನಾವಣೆಗೆ ಹೋಗಲ್ಲ. ಸರ್ಕಾರ ರಚನೆ ಮಾಡ್ತೀವಿ, ನಮಗೆ ನೈತಿಕ ಅಧಿಕಾರ ಇದೆ ಎಂದು ಇದೇ ವೇಳೆ ತಿಳಿಸಿದರು.
ಮನೆ ಒಂದು ಮೂರು ಬಾಗಿಲು ಆಗಿದೆ
ಸಚಿವ ಸತೀಶ್ ಜಾರಕಿಹೊಳಿ ರಿವರ್ಸ್ ಆಪರೇಷನ್ ಮಾಡುತ್ತೇವೆ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅಣ್ಣನನ್ನೇ ಕೈಯಲ್ಲಿ ಇಟ್ಟುಕೊಳ್ಳೋಕೆ ಆಗಿಲ್ಲ. ಮನೆ ಒಂದು ಮೂರು ಬಾಗಿಲು ಆಗಿದೆ. ಮೊದಲು ಮನೆ ಸರಿಪಡಿಸಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ಕೆಲ ಶಾಸಕರು ಸರ್ಪ್ರೈಸ್ ಆಗಿ ರಾಜೀನಾಮೆ ಕೊಡಬಹುದು
ಸರ್ಕಾರದ ಬಗ್ಗೆ ನಿಂಬೆಹಣ್ಣು ರೇವಣ್ಣ ಜ್ಯೋತಿಷ್ಯ ಹೇಳಲಿ, ಯಾವ್ಯಾವ ಶಾಸಕರು ಯಾರ್ಯಾರ ಸಂಪರ್ಕದಲ್ಲಿದ್ದಾರೆಂಬುದು ಒಂದು ವಾರದಲ್ಲಿ ತಿಳಿಯಲಿದೆ. ಇನ್ನಷ್ಟು ಶಾಸಕರ ರಾಜೀನಾಮೆ ಬಗ್ಗೆ ಸುಳಿವು ನೀಡಿದ ಅಶೋಕ್, ಎಷ್ಟು ಮಂದಿ ಶಾಸಕರು ರಾಜೀನಾಮೆ ಕೊಡ್ತಾರೆ ಅನ್ನೋದು ಗೊತ್ತಿಲ್ಲ. ಕೆಲ ಶಾಸಕರು ಸರ್ಪ್ರೈಸ್ ಆಗಿ ರಾಜೀನಾಮೆ ಕೊಡಬಹುದು. ಆಶಾಡದಲ್ಲಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ರಚನೆ ಆಗಬಹುದು ಎಂದು ಆರ್. ಅಶೋಕ್ ಹೇಳಿದರು.
Comments are closed.