ರಾಷ್ಟ್ರೀಯ

ಕ್ರಿಕೆಟ್ ಬ್ಯಾಟ್​ನಿಂದ ಸರ್ಕಾರಿ ಅಧಿಕಾರಿಗೆ ಹೊಡೆದ ಬಿಜೆಪಿ ಶಾಸಕನ ಬಂಧನ

Pinterest LinkedIn Tumblr


ಇಂದೋರ್: ನಾಗರಿಕ ಸಮಿತಿಯ ಅಧಿಕಾರಿ ಮೇಲೆ ಕ್ರಿಕೆಟ್ ಬ್ಯಾಟ್​ನಿಂದ ಹಲ್ಲೆ ಮಾಡಿದ ಮಧ್ಯಪ್ರದೇಶದ ಬಿಜೆಪಿಯ ಹಿರಿಯ ಮುಖಂಡ ಕೈಲಾಶ್ ವಿಜಯ್ ವಾರ್ಗಿಯಾ ಅವರ ಮಗ ಆಕಾಶ್ ವಿಜಯ್ ವಾರ್ಗಿಯಾನನ್ನು ಪೊಲೀಸರು ಬಂಧಿಸಿದ್ದಾರೆ.

ಆಕಾಶ್​ ಇಂಧೋರ್-3 ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದು, ನಾಗರಿಕ ಸಮಿತಿಯ ಅಧಿಕಾರಿಯನ್ನು ಸಾರ್ವಜನಿಕರ ಎದುರಲ್ಲೇ ಕ್ರಿಕೆಟ್ ಬ್ಯಾಟ್​ನಿಂದ ಹಲ್ಲೇ ನಡೆಸಿದ್ದರು. ನಡುರಸ್ತೆಯಲ್ಲೇ ನೂರಾರು ಸಾರ್ವಜನಿಕರ ಎದುರು ಸರ್ಕಾರಿ ಅಧಿಕಾರಿಯನ್ನು ಆಕಾಶ್ ಮತ್ತು ಆತನ ಬೆಂಬಲಿಗರು ಥಳಿಸುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.

ಇಂದೋರ್​ನ ಗಂಜಿ ಪ್ರದೇಶದಲ್ಲಿ ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಿ ಕಾಂಪೌಂಡ್ ನಿರ್ಮಿಸಲಾಗಿತ್ತು. ಇದನ್ನು ತೆರವುಗೊಳಿಸಲು ನಗರ ಪಾಲಿಕೆ ಅಧಿಕಾರಿಗಳು ಧೀರೇಂದ್ರ ಬೈಯಾಸ್ ಮತ್ತು ಅಶೀತ್ ಖಾರೆ ನೇತೃತ್ವದಲ್ಲಿ ದಾಳಿ ನಡೆಸಿದ್ದರು. ಆಗ ಸ್ಥಳಕ್ಕೆ ಬಂದ ಶಾಸಕ ಆಕಾಶ್ ವಿಜಯ್​ವಾರ್ಗಿಯಾ ಮತ್ತು ಆತನ ಬೆಂಬಲಿಗರು, ನೀನು ಇನ್ನು ಐದು ನಿಮಿಷದಲ್ಲಿ ಸ್ಥಳದಿಂದ ಹೋಗದಿದ್ದರೆ ಮುಂದಿನ ಪರಿಣಾಮಗಳಿಗೆ ನೀನೇ ಹೊಣೆ ಎಂದು ಅಧಿಕಾರಿಗೆ ಹೆದರಿಸಿದ್ದಾರೆ.

ಆ ಕ್ಷಣದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಕೈಯಲ್ಲಿ ಕ್ರಿಕೆಟ್ ಬ್ಯಾಟ್​ ಹಿಡಿದಿದ್ದ ಆಕಾಶ್​ ಏಕಾಏಕಿ ಬ್ಯಾಟ್​ನಿಂದ ಇಬ್ಬರು ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ ಸ್ಥಳದಲ್ಲಿದ್ದ ಪೊಲೀಸರು ತಡೆಗಟ್ಟಲು ಮುಂದಾದರೂ ಅವರನ್ನು ತಳ್ಳಿ ಹಲ್ಲೆ ನಡೆಸಿದ್ದಾರೆ.

ನಾನು ಅವರಿಗೆ ಹೇಳಿದೆ. ಇನ್ನು ಹತ್ತು ನಿಮಿಷದಲ್ಲಿಇಲ್ಲಿಂದ ಹೊರಡಿ. ನಾನು ಈ ಕ್ಷೇತ್ರ ಚುನಾಯಿತ ಪ್ರತಿನಿಧಿ. ಸಾರ್ವಜನಿಕರು ಮತ್ತು ಪ್ರಾಧಿಕಾರದ ನಡುವೆನ ಸಮಸ್ಯೆಯನ್ನು ನಾನು ಬಗೆಹರಿಸಿಕೊಡುತ್ತೇನೆ. ನಾನು ಸಾಕಷ್ಟು ತಾಳ್ಮೆಯಿಂದ ಅವರಿಗೆ ಹೇಳಿದೆ. ಆದರೆ, ನಾಗರಿಕ ಸಮಿತಿ ಅಧಿಕಾರಿಗಳು ದಾದಾಗಿರಿ ಮಾಡಲು ಮುಂದಾದರು. ಮತ್ತು ಜನರ ಮಾತನ್ನು ಕೇಳುತ್ತಿರಲಿಲ್ಲ ಎಂದು ವರದಿಗಾರರಿಗೆ ಆಕಾಶ್ ವಿಜಯ್​ ವಾರ್ಗಿಯಾ ಹೇಳಿದ್ದಾರೆ.

ಸರ್ಕಾರಿ ಅಧಿಕಾರಿ ಕೆಲಸಕ್ಕೆ ಅಡ್ಡಿ ಮತ್ತು ಹಲ್ಲೆ ಪ್ರಕರಣ ಸಂಬಂಧ ಆಕಾಶ್ ವಿಜಯ್ ವಾರ್ಗಿಯಾ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಪೊಲೀಸರು ಇಬ್ಬರು ಸರ್ಕಾರಿ ಅಧಿಕಾರಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡು, ಗೂಂಡಾಗಿರಿ ಮಾಡಿದ ಬಿಜೆಪಿ ಶಾಸಕನನ್ನು ಬಂಧಿಸಿದ್ದಾರೆ.

ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಮಧ್ಯಪ್ರದೇಶ ಗೃಹಸಚಿವ ಬಾಲ ಬಚ್ಚನ್​, ಇದು ಬಿಜೆಪಿಯ ನಿಜವಾದ ಮುಖ ಮತ್ತು ಗುಣ. ಜನಪ್ರತಿನಿಧಿಗಳಿಗೆ ತಮ್ಮ ಮೇಲೆಯೇ ನಿಯಂತ್ರಣವಿಲ್ಲ. ಅವರ ವಿರುದ್ಧ ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

Comments are closed.