
ಕೊಡಗು: ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ಇಂದೂ ಸಹ ಮತ್ತೊಂದು ಹೇಳಿಕೆ ನೀಡಿದ್ದಾರೆ. ‘ಹಿಂದೂ ಹುಡುಗಿಯನ್ನು ಮುಟ್ಟಿದರೆ ಅವರ ಕೈಯನ್ನೇ ಇಲ್ಲದಂತೆ ಮಾಡಿ’ ಎಂದು ಹೇಳುವ ಮೂಲಕ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಕೊಡಗಿನ ಮಾದಾಪುರದಲ್ಲಿ ನಡೆದ ಹಿಂದೂ ಐಕ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮತ್ತೊಂದು ವಿವಾದ ಸೃಷ್ಟಿಸಿ ಸುದ್ದಿಗೆ ಗ್ರಾಸವಾಗಿದ್ಧಾರೆ. ಶಬರಿಮಲೆಗೆ ಪ್ರವೇಶಿಸಿದ್ದ ಮಹಿಳೆಯರು ಕೊಡಗಿನಲ್ಲಿ ತಂಗಿದ್ದರು ಎಂಬ ಮಾಹಿತಿ ಇದೆ. ಅಂತಹ ದೇಶದ್ರೋಹಿಗಳು ಮುಂದೆ ಕೊಡಗಿಗೆ ಭೇಟಿ ಕೊಟ್ಟರೆ ಇಲ್ಲಿಯೇ ಮಣ್ಣಾಗಿಸಿ ಎಂದು ಕರೆ ನೀಡಿದ್ಧಾರೆ. ಇವರ ಈ ಪ್ರಚೋದನಾಕಾರಿ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ದುರ್ಬಲರು ಇತಿಹಾಸ ಬರೆಯಬಾರದು:
ಅಷ್ಟೇ ಅಲ್ಲದೇ, ಕುತುಬ್ ಮಿನಾರ್ ನಿರ್ಮಿಸಿದ್ದು ಖುತುಬ್ ಉದ್ದೀನ್ ಐಬಕ್ ಎಂಬ ಸುಳ್ಳು ಇತಿಹಾಸ ಸೃಷ್ಟಿಸಲಾಗಿದೆ. ಆದರೆ ಅದು ಜೈನರ 24 ದೇವರ ದೇವಾಲಯವಾಗಿತ್ತು. ಇದನ್ನು ಭಾರತೀಯ ಪ್ರಾಚ್ಯ ಇಲಾಖೆಯಲ್ಲಿ ಹೇಳಲಾಗಿದೆ ಎಂದರು.
ಇನ್ನೂ ತಾಜ್ಮಹಲ್ ಕಟ್ಟಿಸಿದ್ದು ಶಹಜಾನ್ ಅಲ್ಲ. ರಾಜಾ ಜಯಸಿಂಹನಿಂದ ಕೊಂಡುಕೊಂಡ ಕಟ್ಟಡ ಅದಾಗಿತ್ತು. ಬಳಿಕ ತೇಜೋ ಮಹಾಲಯ ಆಯ್ತು. ನಂತರ ಅದು ತಾಜ್ಮಹಲ್ ಆಗಿದೆ. ಇದು ಶಹಜಾನ್ ಅವರ ಆತ್ಮಚರಿತ್ರೆಯಲ್ಲಿಯೇ ಇದೆ ಎಂದು ಹೇಳಿದರು.
ಕೇಂದ್ರ ಸಚಿವರ ವಿವಾದಾತ್ಮ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಬಿಜೆಪಿ ಹಿರಿಯ ನಾಯಕ ಗೋ.ಮಧುಸೂಧನ್, ಸಚಿವರು ಈ ರೀತಿ ಹೇಳಿಕೆ ನೀಡಿದ್ದು ತಪ್ಪು, ನಾವು ಇವರ ಮಾತನ್ನು ಸಮರ್ಥಿಸಿಕೊಳ್ಳುವುದಿಲ್ಲ. ಅದು ಅವರ ವ್ಯಕ್ತಿಗತ ಹೇಳಿಕೆ. ಇದನ್ನು ಬಿಜೆಪಿ ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಅವರ ಹೇಳಿಕೆಗೂ ನಮಗೂ ಸಂಬಂಧವಿಲ್ಲ ಎಂದು ಹೇಳಿದ್ಧಾರೆ.
ಸಚಿವ ಅನಂತ್ಕುಮಾರ್ ಅವರ ಹೇಳಿಕೆ ಸಮಂಜಸವಲ್ಲ. ಅವರು ಮಾನಸಿಕ ಸ್ಥೀಮಿತತೆ ಕಳೆದುಕೊಂಡಿದ್ಧಾರೆ. ಪ್ರಧಾನಿ ಮೋದಿ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಅನಂತಕುಮಾರ್ ಹೆಗಡೆ ಈ ಮೊದಲು ಸಂವಿಧಾನವನ್ನೇ ಬದಲಿಸಿ, ಸಂವಿಧಾನ ಇರುವುದೇ ಬದಲಾಯಿಸಲು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಜಾತ್ಯಾತೀತ ವ್ಯಕ್ತಿಗಳಿಗೆ ತಂದೆ-ತಾಯಿ ಇಲ್ಲ ಎಂದು ಸಹ ಹೇಳಿದ್ದರು. ಇದೀಗ ಈ ಹೊಸ ವಿವಾದಾತ್ಮಕ ಹೇಳಿಕೆಗೆ ತೀವ್ರ ಟೀಕೆಗಳು ವ್ಯಕ್ತವಾಗಿವೆ.
Comments are closed.