ಬಂಟ್ವಾಳ, ಜನವರಿ. 25: ಉಜ್ವಲ ಯೋಜನೆಯಡಿ ಎರಡನೆ ಹಂತದ ಉಚಿತ ಅಡುಗೆ ಅನಿಲ ವಿತರಣೆ ಮತ್ತು ಫಲಾನುಭವಿಗಳ ಸಮಾವೇಶ ಶುಕ್ರವಾರ ಬಂಟ್ವಾಳದ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಮೈದಾನದಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಭಾಗವಹಿಸಿದ ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷ, ಸಂಸದ ಪ್ರಹ್ಲಾದ ಜೋಷಿ ಅವರು ಮಾತನಾಡಿ, ಭಾರತವನ್ನು ಅತ್ಯಂತ ಹೆಚ್ಚು ಕೊಳ್ಳೆ ಹೊಡೆದ ಕಾಂಗ್ರೆಸ್ಗೆ ಅಚ್ಛೇ ದಿನ್ ಅವಶ್ಯಕತೆ ಇಲ್ಲ. ಅಚ್ಛೇ ದಿನ್ ಬರಬೇಕಾದ್ದು ಈ ದೇಶದ ಜನಸಾಮಾನ್ಯರಿಗೆ. ಮೋದಿ ಆಡಳಿತಾವಧಿಯಲ್ಲಿ ಇದು ಸಾಕ್ಷಾತ್ಕಾರಗೊಳ್ಳುತ್ತಿದೆ ಎಂದು ಹೇಳಿದರು.
ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ಸಚಿವ ರಮೇಶ್ ಜಿಗಜಿಣಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಸಂಸದ ನಳಿನ್ ಕುಮಾರ್ ಕಟೀಲ್ ಪ್ರಾಸ್ತಾವಿಸಿದರು.
ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಾಸಕರಾದ ವೇದವ್ಯಾಸ ಕಾಮತ್, ಡಾ. ವೈ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ಸಂಜೀವ ಮಠಂದೂರು, ಎಸ್. ಅಂಗಾರ, ಸಿ.ಟಿ.ರವಿ, ಐಒಸಿಎಲ್ ಮುಖ್ಯ ಜನರಲ್ ಮ್ಯಾನೇಜರ್ ಕೆ. ಶೈಲೇಂದ್ರ, ಬಿಡಿಎಂ ಬಿಪಿಸಿಎಲ್ ಪ್ರೇಮನಾಥ್ ಟಿ, ಬಿಪಿಸಿಎಲ್ ಕರ್ನಾಟಕದ ಮುಖ್ಯಸ್ಥ ಪ್ರದೀಪ್ ನಾಯರ್ ಸಹಿತ ವಿವಿಧ ತೈಲ ಕಂಪನಿಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಬಿಪಿಸಿಎಲ್ ಪ್ರಾದೇಶಿಕ ಎಲ್ಪಿಜಿ ಮ್ಯಾನೇಜರ್ ತಂಗವೇಲು ಸ್ವಾಗತಿಸಿದರು. ಎಚ್.ಎ.ಎಲ್.ನ ಜೋನಲ್ ಹೆಡ್ ಅಂಬಾ ಭವಾನಿ ವಂದಿಸಿದರು. ಬಿಜೆಪಿ ಬಂಟ್ವಾಳ ಕ್ಷೇತ್ರಾಧ್ಯಕ್ಷ ದೇವದಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.






Comments are closed.