
ಬೆಂಗಳೂರು: ಕನ್ನಡ, ಕಾವೇರಿ ಹಾಗೂ ಡಾ. ರಾಜ್ಕುಮಾರ್ ಕುರಿತಾಗಿ ಮಾತನಾಡಿದ ಯುವನಟ ಯೋಗಿಗೆ ತಮಿಳು ಚಿತ್ರರಂಗ ಅವಮಾನ ಮಾಡಿದೆ. ಅಲ್ಲದೇ ಸಿನಿಮಾದಲ್ಲಿ ನಟಿಸುವ ಅವಕಾಶದಿಂದ ವಂಚಿತರಾಗಿದ್ದು, ಈ ಮೂಲಕ ಯುವನಟನ ಕನಸು ನುಚ್ಚು ನೂರಾಗಿದೆ.
ಕನ್ನಡದ ಯುವನಟ ಯೋಗಿ ತಮಿಳಿನ ಪಾರ್ತಿಬನ್ ಚಿತ್ರಕ್ಕೆ ನಾಯಕ ನಟನಾಗಿ ಆಯ್ಕೆಯಾಗಿದ್ದರು. ಸಿನಿಮಾಗಾಗಿ ತಂಡವು ಫೋಟೋಶೂಡ್ ಕೂಡಾ ಮುಗಿಸಿದ್ದು, ಮುಂದಿನ ತಿಂಗಳು ಶೂಟಿಂಗ್ ಆರಂಭವವಾಗಬೇಕಿತ್ತು. ಚಿತ್ರತಂಡ ಕಾರ್ಯತಕ್ರಮವನ್ನೊಂದನ್ನು ಆಯೋಜಿಸಿ ಮೋಷನ್ ಪೋಸ್ಟರ್ ಬಿಡುಗಡೆಗೊಳಿಸಿತ್ತು. ಆದರೆ ಈ ಕಾರ್ಯಕ್ರಮ ಮುಗಿದ ಬಳಿಕ ನಟ ಯೋಗಿಯವರನ್ನು ಸುತ್ತುವರಿದ ತಮಿಳುನಾಡಿನ ಪತ್ರಕರ್ತರು ನೇರವಾಗಿ ಕಾವೇರಿ ನೀರು ವಿವಾದ ಹಾಗೂ ನೆಚ್ಚಿನ ನಟನ ಕುರಿತಾಗಿ ಪ್ರಶ್ನಿಸಿದ್ದಾರೆ. ಈ ವೇಳೆ ಅವರು ಕನ್ನಡಿಗರ ಪರವಾಗಿ ಮಾತನಾಡಿದ್ದೇ ಉಲ್ಟಾ ಹೊಡೆದಿದೆ.
ಪತ್ರಕರ್ತರು ಯೋಗಿಯವರ ಬಳಿ ಕಾವೇರಿ ನೀರಿನ ವಿವಾದದ ಕುರಿತಾಗಿ ಏನು ಹೇಳುತ್ತೀರಿ? ನೀರು ಯಾರಿಗೆ ಸಿಗಬೇಕು ಎಂದು ಪ್ರಶ್ನಿಸಿದ್ದಾಋಎ. ಇದಕ್ಕೆ ಉತ್ತರಿಸಿದ ನಟ ಯೋಗಿ ಅಲ್ಲಿ ಕನ್ನಡಿಗರಿಗೇ ನೀರಿಲ್ಲ, ಹೀಗಿರುವಾಗ ಇಲ್ಲಿ ನೀರು ಬಿಡಬೇಕು ಎಂದರೆ ಹೇಗೆ? ನಾನು ಹುಟ್ಟಿದ ನಾಡು ಅದು, ಇಲ್ಲಿ ಸಿನಿಮಾ ಮಾಡಿದೆ ಎಂದ ಮಾತ್ರಕ್ಕೆ ನನ್ನ ನಾಡಿಗೆ ದ್ರೋಹ ಬಗೆಯಲು ಸಾಧ್ಯವೇ? ಅಲ್ಲಿ ಮಂಡ್ಯ ಎಂಬ ಊರಿದೆ. ಅಲ್ಲಿನ ಜನರು ನೀರಿಗೆ ಯಾವ ರೀತಿ ಕಷ್ಟ ಪಡುತ್ತಾರೆ ಎಂದು ನೀವೇ ನೋಡಿ. ನಮ್ಮ ಬಳಿ ನೀರಿದ್ದರೆ ಕೊಡಬೇಕು ಎನ್ನುತ್ತಿದ್ದೆ. ಆದರೆ ಅಲ್ಲಿಯೇ ನೀರಿಲ್ಲ ಎಂದಾಗ ಇಲ್ಲಿಗೆ ಕೊಡಬೇಕು ಎಂದು ಹೇಗೆ ಹೇಳಲಾಗುತ್ತದೆ ಎಂದು ಕನ್ನಡ ಹಾಗೂ ಕನ್ನಡದ ಪರವಾಗಿ ಮಾತನಾಡಿದ್ದಾರೆ.
ಇದಾದ ಮರುಕ್ಷಣವೇ ಪತ್ರಕರ್ತರು ನಿಮಗೆ ರಾಜ್ ಕುಮಾರ್ ಇಷ್ಟನೋ ಅಥವಾ ರಜನಿಕಾಂತ್ ಇಷ್ಟನೋ ಎಂದು ಪ್ರಶ್ನೆ ಕೇಳಿದ್ದರು. ಇದಕ್ಕೆ ಯೋಗಿ ನನಗೆ ಅಣ್ಣಾವ್ರೇ ಇಷ್ಟ ಎಂದು ಧೈರ್ಯವಾಗಿ ಉತ್ತರಿಸಿದ್ದಾರೆ.
ಆದರೆ ಇವರ ಈ ಮಾತುಗಳು ಈಗ ಅವರ ಸಿನಿಮಾ ಕನಸನ್ನು ನುಚ್ಚು ನೂರು ಮಾಡಿವೆ. ನಾಯಕ ನಟನಾಗಿ ನಟಿಸಬೇಕಿದ್ದ ಯೋಗಿಗೆ ಪಾರ್ತಿಬನ್ ಕಾದಲ್ ಸಿನಿಮಾದಿಂದ ಗೇಟ್ ಪಾಸ್ ನೀಡಿದ್ದಾರೆ. ಅಷ್ಟೇ ಅಲ್ಲದೇ ಈ ರೀತಿ ಮಾತನಾಡಬಾರದಿತ್ತು ಎಂದು ನಿರ್ಮಾಪಕರು ಬುದ್ದಿ ಮಾತು ಹೇಳಿ ಯೋಗಿಯನ್ನು ಹೊರದಬ್ಬಿದ್ದಾರೆ ಎನ್ನಲಾಗಿದೆ.
Comments are closed.