
ಮಂಗಳೂರು: ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಕೆಲಸ ಕಳೆದ ಐದು ವರ್ಷಗಳಿಂದ ಪರಿಶ್ರಮದಿಂದ ನಡೆಯುತ್ತಾ ಬಂದಿದೆ. ದ.ಕ. ಉಡುಪಿಯಲ್ಲಿರುವ ಬಹಳಷ್ಟು ಹಳೇ ದೇವಸ್ಥಾನಗಳು ಪುನರುತ್ಥಾನವಾಗುತ್ತಿದೆ. ಕುಡುಪು ದೇವಸ್ಥಾನದಲ್ಲಿ ಉತ್ತಮ ಮನಸ್ಸಿನಿಂದ ಬಂದು ಪ್ರಾರ್ಥನೆ ಮಾಡಿದರೆ ಜೀವನ ಸಾರ್ಥಕವಾಗುತ್ತದೆ. ಮನುಷ್ಯನಲ್ಲಿ ಶ್ರದ್ಧೆ, ಭಕ್ತಿ , ವಿಶ್ವಾಸ ಮುಖ್ಯ. ದೈಹಿಕ ಶುದ್ಧಿ ಮಾಡಿ ದೇವರಲ್ಲಿ ಪ್ರಾರ್ಥನೆ ಮಾಡಿದರೆ ಶೂನ್ಯತೆಯಲ್ಲಿರುವ ಮನಸು ತುಂಬುತ್ತವೆ. ಇದರಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ದೇವಸ್ಥಾನಕ್ಕೆ ಉತ್ತಮ ಸಂಸ್ಕೃತಿ ಇದೆ. ಇದನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು. ಕೆಟ್ಟ ಮನಸ್ಸಿನಿಂದ ವರ್ತನೆ ಮಾಡಿ ಜಾತಿ, ಧರ್ಮದ ಹೆಸರಿನಲ್ಲಿ ಸಂಘರ್ಷ ಮಾಡಿದರೆ ಸಂಸ್ಕೃತಿಯ ಬೇರು ಕಿತ್ತು ಹೋಗುತ್ತದೆ. ದೇವರಲ್ಲಿ ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಮಾಡಿದರೆ ಪ್ರತಿಫಲ ಸಿಗುತ್ತದೆ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ತಿಳಿಸಿದರು.

ಅವರು ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶುಕ್ರವಾರ ನಡೆದ ಧಾರ್ಮಿಕ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನವು ವಿಶೇಷವಾಗಿ ವಿಸ್ಮಯ ರೀತಿಯಲ್ಲಿ ಬೆಳೆದಿದೆ. ಕುಡುಪು ದೇವಸ್ಥಾನ ಇಷ್ಟು ದೊಡ್ಡದಾಗಿ ಎದ್ದು ನಿಲ್ಲಬಹುದು ಎಂದು ನಾವು ನಿರೀಕ್ಷೆಯೇ ಮಾಡಿರಲಿಲ್ಲ. ಶ್ರೀ ಅನಂತಪದ್ಮನಾಭ ದೇವಸ್ಥಾನ ಬಹಳ ಕೃತಯುಗದ ಮೊದಲೇ ಇದ್ದ ಪವಾಢಸದೃಶ್ಯವಾಗಿ ವಿಸ್ಮಯಕರವಾಗಿ ಎದು ನಿಂತ ದೇವಸ್ಥಾನ ಇದಾಗಿದೆ. ಇಲ್ಲಿ ಮಹಾಶೇಷ, ಮಹಾವಿಷ್ಣು ಸುಬ್ರಹ್ಮಣ್ಯ ಇದ್ದಾನೆ. ಈ ದೇವಸ್ಥಾನದ ಮೇಲೆ ವಿಶ್ವಾಸ , ಶೃದ್ಧೆ, ಭಕ್ತಿಯನ್ನು ನಾವು ಇಟ್ಟುಕೊಂಡು ಬಂದಿದ್ದೇವೆ. ಪುನರುತ್ಥಾನ ದೇವಸ್ಥಾನವನ್ನು ಸಾಕ್ಷಾತ್ಕಾರಗೊಳಿಸುವುದು ಸಾಹಸದ ಕೆಲಸ. ಈ ಕೆಲಸವನ್ನು ಅಷ್ಟು ಸುಲಭದಲ್ಲಿ ಮಾಡಲು ಸಾಧ್ಯವಿಲ್ಲ. ಈ ಕೆಲಸವನ್ನು ಪವಾಢದಿಂದಲೇ ಮಾಡಲಾಗಿದೆ ಎಂದು ಎಂ. ವೀರಪ್ಪಮೊಲಿ ಹೇಳಿದರು.

ಧಾರ್ಮಿಕ ಉಪನ್ಯಾಸ ಮಾಡಿದ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ಶ್ರೀ ರವಿತಂತ್ರಿ ಅವರು ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ ಜೀರ್ಣೋದ್ಧಾರ ಮಾಡಿ ಬ್ರ ಹ್ಮಕಲಶ ನಡೆಸುತ್ತಿರುವುದು ಉತ್ತಮ ಕಾರ್ಯ ಮತ್ತು ಸಂಸ್ಕೃತಿ ಆಗಿದೆ. ಕೇವಲ ದೇವಸ್ಥಾನದ ನೇತೃತ್ವ ವಹಿಸಿಕೊಂಡರೆ ಸಾಲದು, ಕಾರ್ಯಕ್ರಮದ, ದೇವಸ್ಥಾನದ ನೇತೃತ್ವ ವಹಿಸಿಕೊಳ್ಳುವ ಮೊದಲು ನಾವು ಧಾರ್ಮಿಕ ಸಂಸ್ಕೃತಿ, ವೈಜ್ಞಾನಿಕವಾಗಿರುವ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಬೇಕು. ಆಗ ಮಾತ್ರ ಫಲ ಸಿಗುತ್ತದೆ. ದೇವಸ್ಥಾನದ ಔಚಿತ್ಯವೇನು ಎಂಬುದನ್ನು ತಿಳಿದುಕೊಳ್ಳಬೇಕು. ಆದ್ಯಾತ್ಮಿಕವಾಗಿ ತತ್ವ ಪರಂಪರೆಯನ್ನು ತಿಳಿದುಕೊಳ್ಳುವುದು ಅಗತ್ಯ. ಹಿಂದೂ ಧರ್ಮದ ಪದ್ಧತಿ ,ವೈಜ್ಞಾನಿಕ ತತ್ವವನ್ನು ಕೂಡಾ ಪಾಲಿಸಬೇಕಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಪರ ಜಿಲ್ಲಾಧಿಕಾರಿ ಕುಮಾರ್ ವಹಿಸಿದ್ದರು. ಸಮಾರಂಭದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಡಾ. ಶಾಂ ಭಟ್, ದ.ಕ. ಹಾಲು ಉತ್ಪಾದಕ ಒಕ್ಕೂಟದ ಆಡಳಿತ ನಿರ್ದೇಶಕ ಸತ್ಯ ನಾರಾಯಣ ರಾವ್, ಉದ್ಯಮಿ ಪುರುಷೋತ್ತಮ ಕೊಟ್ಟಾರಿ, ನಾರಾಯಣ ಪಿ.ಎಂ. , ಧನಂಜಯ ಆಚಾರ್ ಪಾಲ್ಕೆ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಹೊರೆಕಾಣಿಕೆ ಸಮಿತಿ ಸಂಚಾಲಕ ಮಹಾಬಲ ಪೂಜಾರಿ ಕಡಂಬೋಡಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಎ ಸುತಗುಂಡಿ, ಭಾಸ್ಕರ ಕೆ., ಸುದರ್ಶನ ಕುಡುಪು, ಚಂದ್ರಹಾಸರೈ, ಕಿಶೋರ್ ಕೊಟ್ಟಾರಿ, ಜಗದೀಶ್ ಶೇಣವ,ಅರುಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ವಾಸುದೇವರಾವ್ ಕುಡುಪು ಸ್ವಾಗತಿಸಿ ಪ್ರಸ್ತಾವನೆಗೈದರು. ರಾಮ ಎಲ್ಲಂಗಳ ವಾಮಂಜೂರು ಕಾರ್ಯಕ್ರಮ ನಿರ್ವಹಿಸಿದರು.
Comments are closed.