ರಾಷ್ಟ್ರೀಯ

ಮೇಲ್ಮನೆಯಲ್ಲಿ ತ್ರಿವಳಿ ತಲಾಖ್ ನಿಷೇಧ ವಿಧೇಯಕ: ಎಲ್ಲರ ದೃಷ್ಟಿ ಕಾಂಗ್ರೆಸ್‌ ಮೇಲೆ

Pinterest LinkedIn Tumblr


ಹೊಸದಿಲ್ಲಿ: ದಿಢೀರ್ ತ್ರಿವಳಿ ತಲಾಖ್‌ ನಿಷೇಧ ವಿಧೇಯಕವು ರಾಜ್ಯಸಭೆಯಲ್ಲಿ ಮಂಡನೆಯಾಗಲಿದ್ದು, ಮೇಲ್ಮನೆಯಲ್ಲಿ ಪ್ರಾಬಲ್ಯ ಹೊಂದಿರುವ ಕಾಂಗ್ರೆಸ್‌ ಯಾವ ನಿಲುವು ತಳೆಯುತ್ತದೆ ಎಂಬುದರ ಮೇಲೆ ನೂತನ ಕಾಯ್ದೆಯ ಭವಿಷ್ಯ ನಿಂತಿದೆ.

ಕಳೆದ ವಾರ ಎಡಪಕ್ಷಗಳು ಕಾಂಗ್ರೆಸ್ ಜತೆ ಸಮಾಲೋಚನೆ ನಡೆಸಿದ್ದು, ‘ಮುಸ್ಲಿಂ ಮಹಿಳೆಯರ (ಮದುವೆ ಹಕ್ಕುಗಳ ರಕ್ಷಣೆ) ವಿಧೇಯಕ, 2017ನ್ನು ಆಯ್ದ ಸಮಿತಿಯ ಪರಿಶೀಲನೆಗೆ ಒಪ್ಪಿಸಬೇಕು’ ಎಂದು ಒತ್ತಾಯಿಸುವ ನಿರ್ಣಯ ಕೈಗೊಂಡಿವೆ.

ಪ್ರಮುಖ ಸೆಕ್ಯುಲರ್‌ ಮಿತ್ರಪಕ್ಷದ ನಿಲುವು ಕಾಂಗ್ರೆಸ್‌ ಅನ್ನೂ ಇಕ್ಕಟ್ಟಿಗೆ ಸಿಲುಕಿಸಿದೆ. ಈ ವಿಚಾರವಾಗಿ ಸಮಾನ ಮನಸ್ಕ ಪಕ್ಷಗಳ ಜತೆ ಅದು ಚರ್ಚೆ ಮುಂದುವರಿಸಿದೆ.

‘ತ್ರಿವಳಿ ತಲಾಖ್‌ ಆಚರಣೆಯನ್ನು ನಾವು ಮೊದಲಿನಿಂದಲೂ ವಿರೋಧಿಸುತ್ತಿದ್ದೇವೆ. ಅದನ್ನು ನಿವಾರಿಸಲೇಬೇಕು. ಆದರೆ ಮದುವೆ ಎಂಬುದು ಒಂದು ನಾಗರಿಕ ಒಪ್ಪಂದ (ಮುಸ್ಲಿಮರ ನಡುವೆ). ನೂತನ ಕಾನೂನು ಅದನ್ನು ಅಪರಾಧವಾಗಿ ಪರಿಗಣಿಸುವುದು ತಪ್ಪು. ಬಿಜೆಪಿ ಕೋಮು ಧ್ರವೀಕರಣದ ಮೂಲಕ ರಾಜಕೀಯ ಲಾಭಕ್ಕಾಗಿ ತರಾತುರಿಯಿಂದ ಈ ವಿಧೇಯಕ ಮಂಡಿಸಿದೆ’ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಆರೋಪಿಸಿದ್ದಾರೆ.

‘ಮೂಲತಃ ಪೌರ ವಿವಾದವೊಂದನ್ನು, ಸುಪ್ರೀಂ ಕೋರ್ಟ್‌ ಆದೇಶವನ್ನು ಆಧರಿಸಿ ಅಪರಾಧೀಕರಣಗೊಳಿಸಲು ಬಿಜೆಪಿ ಸರಕಾರ ಹವಣಿಸುತ್ತಿದೆ’ ಎಂದು ಸಿಪಿಎಂ ಪಾಲಿಟ್‌ ಬ್ಯೂರೋ ಸದಸ್ಯೆ ಬೃಂದಾ ಕಾರಾಟ್‌ ಆರೋಪಿಸುತ್ತಾರೆ. ಮಹಿಳಾ ಸಬಲೀಕರಣದ ಹೆಸರಿನಲ್ಲಿ ಈ ಕೆಲಸ ಮಾಡಿದ್ದರೂ, ಮುಸ್ಲಿಂ ಮಹಿಳೆಯರು ಮತ್ತು ಅವರ ಸಂಘಟನೆಗಳ ಅಭಿಪ್ರಾಯವನ್ನು ಸರಕಾರ ಪಡೆದಿಲ್ಲ’ ಎಂದು ಕಾರಾಟ್‌ ಹೇಳಿದ್ದಾರೆ.

ವಿಧೇಯಕವನ್ನು ಆಯ್ದ ಸಮಿತಿಯ ಪರಾಮರ್ಶೆಗೆ ಕಳುಹಿಸಬೇಕೆಂದು ಎಡಪಕ್ಷಗಳು ಒತ್ತಾಯಿಸಲಿವೆ ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ. ರಾಜಾ ಹೇಳುತ್ತಾರೆ.

ಹೀಗಾಗಿ ಎಲ್ಲರ ನೋಟ ಕಾಂಗ್ರೆಸ್‌ ಮೇಲಿದೆ. ಮೇಲ್ಮನೆಯಲ್ಲಿ ವಿಧೇಯಕದ ಹಣೆಬರಹವನ್ನು ಅದು ನಿರ್ಧರಿಸಲಿದೆ. ರಾಜ್ಯಸಭೆಯಲ್ಲಿ ಬಿಜೆಪಿಗೆ ಬಹುಮತದ ಕೊರತೆಯಿದ್ದು, ಮೋದಿ ಸರಕಾರಕ್ಕೆ ಮುಜುಗರ ಸೃಷ್ಟಿಸಲು ಪ್ರತಿಪಕ್ಷಗಳು ಹಲವು ಬಾರಿ ಕೈಜೋಡಿಸಿವೆ.

ಜಂಟಿ ನಿರ್ಣಯ ಕೈಗೊಳ್ಳುವಂತೆ ಕಾಂಗ್ರೆಸ್‌ ಮೇಲೆ ಇತರ ಪ್ರತಿಪಕ್ಷಗಳು ಒತ್ತಡ ಹೇರುತ್ತಿವೆ.

Comments are closed.