ರಾಷ್ಟ್ರೀಯ

ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಾನಿಯಾದರೆ ಯಾವುದೇ ಶಿಕ್ಷೆಗೆ ಸಿದ್ಧ: ಅಯ್ಯರ್‌

Pinterest LinkedIn Tumblr


ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತಾವು ನೀಡಿದ ‘ನೀಚ’ ಹೇಳಿಕೆಯಿಂದಾಗಿ ಗುಜರಾತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಯಾವುದೇ ಹಾನಿಯಾದಲ್ಲಿ ಶಿಕ್ಷೆ ಅನುಭವಿಸಲು ಸಿದ್ಧ ಎಂದು ಪಕ್ಷದಿಂದ ಅಮಾನತುಗೊಂಡಿರುವ ಮಣಿಶಂಕರ್‌ ಅಯ್ಯರ್‌ ಹೇಳಿದ್ದಾರೆ.

ಕಾಂಗ್ರೆಸ್‌ ಪಕ್ಷ ತಮಗೆ ಎಲ್ಲವನ್ನೂ ನೀಡಿದ್ದು, ಕಾಂಗ್ರೆಸ್‌ ಇಲ್ಲದೆ ದೇಶಕ್ಕೆ ಭವಿಷ್ಯವಿಲ್ಲ ಎಂದು ಅಯ್ಯರ್‌ ಪ್ರತಿಪಾದಿಸಿದರು.

‘ನನ್ನ ಮಾತಿನಿಂದ ಕಾಂಗ್ರೆಸ್‌ಗೆ ಏನಾದರೂ ಹಾನಿಯಾದಲ್ಲಿ ನಾನು ತೀವ್ರವಾಗಿ ವಿಷಾದಿಸುವೆ’ ಎಂದು ಭಾರತ-ಪಾಕಿಸ್ತಾನ ವಿಚಾರ ಸಂಕಿರಣದಲ್ಲಿ ಅಯ್ಯರ್‌ ನುಡಿದರು.

‘ಚುನಾವಣೆಯಲ್ಲಿ ಪಕ್ಷಕ್ಕೆ ಏನಾದರೂ ನಷ್ಟವಾದರೆ ತಕ್ಕ ಶಿಕ್ಷೆ ವಿಧಿಸಲಿ, ನಾನು ಎದುರಿಸಲು ಸಿದ್ಧ’ ಎಂದು ಅವರು ತಿಳಿಸಿದರು.

ರಾಹುಲ್‌ ಗಾಂಧಿ ಅವರ ನಾಯಕತ್ವದಲ್ಲಿ ಗುಜರಾತ್‌ನಲ್ಲಿ ಕಾಂಗ್ರೆಸ್‌ ಉತ್ತಮ ಪ್ರದರ್ಶನ ನೀಡುತ್ತಿದೆ ಎಂದು ಅವರು ಹೇಳಿಕೊಂಡರು.

ಗುಜರಾತ್‌ನಲ್ಲಿ ಮೊದಲ ಹಂತದ ಚುನಾವಣೆ ನಾಳೆ (ಡಿ.9) ನಡೆಯಲಿದ್ದು, ಎರಡನೇ ಹಂತದ ಮತದಾನ ಡಿ.14ರಂದು ನಡೆಯಲಿದೆ.

ಕಾಂಗ್ರೆಸ್‌ ವೋಟಿಗಾಗಿ ಬಿ.ಆರ್‌. ಅಂಬೇಡ್ಕರ್‌ ಅವರ ಹೆಸರು ಬಳಸಿಕೊಂಡಿದೆ. ಆದರೆ ರಾಷ್ಟ್ರ ನಿರ್ಮಾಣದಲ್ಲಿ ಅವರ ಕೊಡುಗೆಯನ್ನು ಕಡೆಗಣಿಸಿದೆ ಎಂಬ ಪ್ರಧಾನಿ ಮೋದಿ ಅವರ ಆರೋಪಕ್ಕೆ ತಿರುಗೇಟು ನೀಡಲು ಹೋಗಿ ಮಣಿಶಂಕರ್‌ ಅಯ್ಯರ್‌ ಕಾಂಗ್ರೆಸ್‌ಗೇ ತಿರುಗುಬಾಣವಾಗಿ ಪರಿಣಮಿಸಿದ್ದಾರೆ.

ಅಯ್ಯರ್‌ ಅವರ ‘ನೀಚ’ ಹೇಳಿಕೆಯಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ ಎಂಬುದನ್ನು ಮನಗಂಡ ಕಾಂಗ್ರೆಸ್‌ ಕ್ಷಿಪ್ರ ಕ್ರಮ ಕೈಗೊಂಡು, ಅಯ್ಯರ್‌ ಅವರನ್ನು ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿತ್ತು.

Comments are closed.