
ಜೈಪುರ: ಭಾರತಕ್ಕೆ ತುರ್ತಾಗಿ ಏಕರೂಪ ನಾಗರಿಕ ಸಂಹಿತೆ ಅಗತ್ಯವಿದೆ ಎಂದು ಬಾಂಗ್ಲಾದೇಶದಲ್ಲಿ ಮೂಲಭೂತವಾದಿಗಳ ದಾಳಿಗೀಡಾಗಿ ಭಾರತದಲ್ಲಿ ಆಶ್ರಯ ಪಡೆದಿರುವ ಲೇಖಕಿ ತಸ್ಲಿಮಾ ನಸ್ರಿನ್ ಅಭಿಪ್ರಾಯಪಟ್ಟಿದ್ದಾರೆ.
ಜೈಪುರ ಸಾಹಿತ್ಯ ಹಬ್ಬ(ಜೆಎಲ್ಎಫ್)ದ ಕಾರ್ಯಕ್ರಮದಲ್ಲಿ ಮಾತನಾಡಿರುವ ತಸ್ಲಿಮಾ ನಸ್ರಿನ್, ಮಹಿಳೆಯರ ರಕ್ಷಣೆಗಾಗಿ ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯ ತುರ್ತು ಅಗತ್ಯವಿದೆ ಎಂದು ತಸ್ಲಿಮಾ ನಸ್ರಿನ್ ಹೇಳಿದ್ದಾರೆ. ಇದೇ ವೇಳೆ ಇಸ್ಲಾಂ ರಾಷ್ಟ್ರಗಳ ಬಗ್ಗೆಯೂ ಮಾತನಾಡಿರುವ ಅವರು, ಇಸ್ಲಾಂ ನ ವಿಮರ್ಶೆಯಿಂದ ಮಾತ್ರ ಇಸ್ಲಾಮಿಕ್ ರಾಷ್ಟ್ರಗಳನ್ನು ಜಾತ್ಯಾತೀತಗೊಳಿಸಲು ಸಾಧ್ಯ ಎಂದಿದ್ದಾರೆ.
“ನಾನು ಸೇರಿದಂತೆ ಯಾರಾದರೂ ಹಿಂದೂ ಧರ್ಮ, ಬೌದ್ಧ ಧರ್ಮ ಅಥವಾ ಇನ್ನಿತರ ಧರ್ಮಗಳನ್ನು ಪ್ರಶ್ನಿಸಿ ವಿಮರ್ಶಿಸಿದರೆ ಏನೂ ಆಗುವುದಿಲ್ಲ. ಆದರೆ ಇಸ್ಲಾಂ ಧರ್ಮವನ್ನು ಪ್ರಶ್ನಿಸಿ, ವಿಮರ್ಶಿಸಿದ ಕ್ಷಣದಲ್ಲೇ ಪ್ರಾಣಹಾನಿ, ಕೊಲೆಗಳು ಸಂಭವಿಸುತ್ತವೆ. ಇಸ್ಲಾಂ ಧರ್ಮವನ್ನು ಪ್ರಶ್ನಿಸುವವರ ವಿರುದ್ಧ ಫತ್ವಾ ಹೊರಡಿಸಲಾಗುತ್ತದೆ. ಕೊಲೆಯ ಬೆದರಿಕೆ ಒಡ್ಡಲಾಗುತ್ತದೆ. ಒಂದು ವೇಳೆ ಅಭಿಪ್ರಾಯ ಭೇದವಿದ್ದರೆ ಫತ್ವಾ ಬದಲು ಬರವಣಿಗೆಯ ಮೂಲಕ ಉತ್ತರ ನೀಡಲಿ”. ಎಂದು ತಸ್ಲಿಮಾ ನಸ್ರಿನ್ ಹೇಳಿದ್ದಾರೆ.
“ಮುಸ್ಲಿಂ ಸಮುದಾಯದ ಮಹಿಳೆಯರು ಶೋಷಣೆಗೊಳಗಾಗಿದ್ದು, ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯ ತುರ್ತು ಅಗತ್ಯವಿದೆ. ಇಸ್ಲಾಂ ಮೂಲಭೂತವಾದವನ್ನು ಉತ್ತೇಜಿಸುವುದೇ ಜಾತ್ಯಾತೀತತೆಯಲ್ಲ ವಿಮರ್ಶೆ, ಟೀಕೆಗಳನ್ನು ತಿರಸ್ಕರಿಸುವ ಮನಸ್ಥಿತಿಯನ್ನು ಮೂಲಭೂತವಾದಿಗಳು ಪ್ರಶ್ನಿಸಿಕೊಳ್ಳಬೇಕು. ಹಿಂದೂಗಳಿಗೆ ಕಾನೂನುಗಳಿದ್ದು, ವಿಚ್ಛೇದನ ಮಹಿಳೆಯರು ಪತಿಯ ಆಸ್ತಿಯ ಪಾಲಿನ ಹಕ್ಕುದಾರರಾಗಬಹುದಾದರೆ, ಮುಸ್ಲಿಂ ಮಹಿಳೆಯರಿಗೆ ಸಮಾನ ಹಕ್ಕುಗಳು ಇರಬಾರದೇಕೆ? ಎಂದು ತಸ್ಲಿಮಾ ನಸ್ರಿನ್ ಪ್ರಶ್ನಿಸಿದ್ದಾರೆ. ಮುಸ್ಲಿಮರ ಮತಗಳಿಗಾಗಿ ಮೂಲಭೂತವಾದಿಗಳನ್ನು ಉತ್ತೇಜಿಸುವುದು ಜಾತ್ಯಾತೀತವೂ ಅಲ್ಲ, ಪ್ರಜಾಪ್ರಭುತ್ವವೂ ಅಲ್ಲ, ಅಂತಹ ಎಲ್ಲಾ ಮೂಲಭೂತವಾದದ ವಿರುದ್ಧ ತಾವಿರುವುದಾಗಿ ತಸ್ಲಿಮಾ ನಸ್ರಿನ್ ಹೇಳಿದ್ದಾರೆ.
ರಾಷ್ಟ್ರೀಯ
Comments are closed.