
ಮಂಗಳೂರು,ಅ.23 : ನಗರದ ಸಂಘ ನಿಕೇತನದಲ್ಲಿ ವಿಶ್ವ ಹಿಂದು ಪರಿಷತ್ ಕರ್ನಾಟಕ ದಕ್ಷಿಣ ವತಿಯಿಂದ ಆಯೋಜಿಸಿರುವ ಬಜರಂಗ ದಳದ ಪ್ರಾಂತ ಅಧಿವೇಶನವನ್ನು ಬಜರಂಗದಳ ಅಖೀಲ ಭಾರತೀಯ ಸಂಯೋಜಕ ರಾಜೇಶ್ ಪಾಂಡೆ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ದೇಶದಲ್ಲಿ ಗೋ ರಕ್ಷಣೆಗಾಗಿ ಬಜರಂಗದಳ ಪ್ರಾಮಾಣಿಕವಾಗಿ ಅಸಲಿ ಹೋರಾಟವನ್ನೇ ನಡೆಸುತ್ತಿದೆ. 1996ರಲ್ಲಿ ಪ್ರಯಾಗದಲ್ಲಿ ಗಾಯ್ ನಹೀಂ ಕಟ್ನೇ ದೇಂಗೆ, ದೇಶ್ ನಹೀಂ ಬಟ್ನೇ ದೇಂಗೆ ಎಂಬ ಸಂಕಲ್ಪ ಮಾಡಿದ್ದು, ಅಲ್ಲಿಂದ ಇಲ್ಲಿ ತನಕ ಸುಮಾರು 40 ಲಕ್ಷ ದನಗಳನ್ನು ರಕ್ಷಿಸಿದ್ದೇವೆ. ನಮ್ಮ ಕಾರ್ಯಕರ್ತರೆಲ್ಲ ಪ್ರಾಮಾಣಿಕರಾಗಿದ್ದು, ದೇಶ ಹಾಗೂ ಗೋ ರಕ್ಷಣೆಗೆ ಬಜರಂಗದಳದ ಪ್ರತೀ ಸದಸ್ಯರು ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಪಾಂಡೆ ಹೇಳಿದರು.

ಬಹುತೇಕ ಮುಸ್ಲಿಮರು ಮೂಲತ: ಹಿಂದುಗಳೇ ಆಗಿದ್ದು, ಮಾನಪ್ರಾಣ ರಕ್ಷಣೆಗೆ ಹೆದರಿ ಬಲವಂತವಾಗಿ ಮತಾಂತರಗೊಂಡವರಾಗಿದ್ದು ಅಂತವರನ್ನು ಮನಪರಿವರ್ತಿಸುವ ಕಾರ್ಯವನ್ನು ಮಾಡಬೇಕು.ಬಜರಂಗದಳದ ಮುಂದೆ ಹಲವಾರು ಸವಾಲುಗಳಿದ್ದು, ಎಲ್ಲವನ್ನೂ ಮೆಟ್ಟಿ ನಿಲ್ಲುತ್ತಿದ್ದೇವೆ. ಇನ್ನೆಂದೂ ದೇಶದಲ್ಲಿ ಲವ್ ಜಿಹಾದ್ ನಡೆಯಲು ಬಿಡುವುದಿಲ್ಲ ಎಂದು ಹೇಳಿದರು.
ಸಲ್ಮಾನ್, ಅಮೀರ್, ಶಾರುಕ್ ಖಾನ್ ಗೆ ಭಾರತದಲ್ಲಿ ಅಸಹಿಷ್ಣುತೆ ಕಂಡರೆ ಪಾಕ್, ಬಾಂಗ್ಲಾ ಅಥವಾ ಅಫ್ಘಾನಿಸ್ಥಾನಕ್ಕೆ ಬೇಕಾದರೆ ಹೋಗಲಿ. ಇನ್ನು ಪಾಕಿಸ್ತಾನದ ಒಬ್ಬನೇ ಒಬ್ಬ ಕಲಾವಿದ ಭಾರತಕ್ಕೆ ಬರಕೂಡದು. ಯಾರಾದರೂ ಅವರನ್ನು ಸಮರ್ಥಿಸಿದರೆ ಅವರ ಸಿನೆಮಾಗಳನ್ನೂ ಬಹಿಷ್ಕರಿಸಲಾಗುವುದು ಎಂದು ರಾಜೇಶ್ ಪಾಂಡೆ ಹೇಳಿದರು.

ದೇಶಕ್ಕೆ ಅಪಾಯ ಎದುರಾದಾಗ ಶತ್ರು ರಾಷ್ಟ್ರಗಳ ವಿರುದ್ಧ ಸೈನಿಕರಾಗಿ ಹೋರಾಡಲೂ ನಾವು ಸಿದ್ಧರಿದ್ದೇವೆ.ನಮ್ಮ ಶತ್ರು ರಾಷ್ಟ್ರ ಪಾಕಿಸ್ಥಾನಕ್ಕೆ ಚೀನ ನೆರವು ನೀಡುತ್ತಿದೆ. ಹೀಗಾಗಿ ಚೀನದ ಎಲ್ಲ ಉತ್ಪನ್ನಗಳನ್ನು ನಾವು ಬಹಿಷ್ಕರಿಸಬೇಕು. ಈ ಮೂಲಕ ದೇಶದ ಸೈನಿಕರಿಗೆ ನಾವು ಗೌರವ ಸಲ್ಲಿಸೋಣ ಎಂದರು.
ಅಧಿವೇಶನದಲ್ಲಿ ರಾಜ್ಯದ 21 ಜಿಲ್ಲೆಗಳಿಂದ 520 ಮಂದಿ ಭಾಗ ವಹಿಸಿದ್ದು, ಅ. 23ರಂದು ಸಂಜೆ 4ಕ್ಕೆ ಕದ್ರಿ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಭಾರತ ಮಾತೆ ರಕ್ಷಣೆಗಾಗಿ ನಿಸ್ವಾರ್ಥವಾಗಿ ದುಡಿಯುವ ಸಹಸ್ರ ಸಹಸ್ರ ಕಾರ್ಯಕರ್ತರ ಬಳಗ ನಮ್ಮಲ್ಲಿದೆ. ಬಜರಂಗದಳ ಸೇರುವ ಸದಸ್ಯರಲ್ಲಿ ರಾಜ ಕೀಯ ಆಕಾಂಕ್ಷೆಯಾಗಲೀ, ಅಧಿಕಾರದ ಆಕಾಂಕ್ಷೆಯಾಗಲೀ ಇಲ್ಲ ಎಂದು ಪಾಂಡೆ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವಹಿಂದೂ ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಮಾತನಾಡಿ, ಹಿಂದೂ ಮತ್ತು ಮುಸಲ್ಮಾನರಿಗೆ ಪ್ರತ್ಯೇಕ ಕಾನೂನು ಸರಿಯಲ್ಲ. ಒಂದೇ ರಾಷ್ಟ್ರ-ಒಂದೇ ಕಾನೂನು ಸಿದ್ಧಾಂತದಂತೆ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಬೇಕು. ಕಳೆದ ಬಾರಿ ಗಲಭೆ ನಡೆದರೂ ಮತ್ತೆ ಟಿಪ್ಪು ಜಯಂತಿ ಆಚರಣೆಗೆ ಸರಕಾರ ಹೊರಟಿದೆ. ಇದನ್ನು ನಾವೆಲ್ಲರೂ ವಿರೋಧಿಸುತ್ತೇವೆ ಎಂದರು.
ಬಜರಂಗದಳದಲ್ಲಿ ಮೇಳು- ಕೀಳು ಎಂಬುದು ಇಲ್ಲ. ಇಲ್ಲಿ ಜಾತಿ ಪರಿಗಣಿಸುವುದಿಲ್ಲ. ನಾವೆಲ್ಲರೂ ಹಿಂದುಗಳು ಎಂಬುದೇ ಮುಖ್ಯ ಮಾನದಂಡ. ಉಡುಪಿಯಲ್ಲಿ ದಲಿತರ ಹೆಸರಿನಲ್ಲಿ ಮಠಕ್ಕೆ ದಾಳಿ ಮಾಡಿದರೆ ಅದನ್ನು ಹಿಮ್ಮೆಟ್ಟಿಸಲು ಬಜರಂಗದಳದ 600 ಸಂಚಾಲಕರು, ಕಾರ್ಯಕರ್ತರೂ ಒಂದು ಗಂಟೆಯಲ್ಲಿ ಧಾವಿಸಿ ಬರಲಿದ್ದಾರೆ. ಯಾರೂ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಪುರಾಣಿಕ್ ಹೇಳಿದರು.

ಉಡುಪಿ ಮಠಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರೆ ಬಜರಂಗದಳ ಕಾರ್ಯ ಕರ್ತರು ಅವರನ್ನು ತಡೆದು ಮಠಕ್ಕೆ ರಕ್ಷಣೆ ನೀಡಲಿದ್ದಾರೆ ಎಂದು ಹೇಳಿದ ಬಜರಂಗದಳ ಪ್ರಾಂತ ಸಂಯೋಜಕ ಶರಣ್ ಪಂಪ್ವೆಲ್ ಅವರು, ರಾಜ್ಯ ಸರಕಾರ ರಾಜ್ಯದಲ್ಲಿ ಟಿಪ್ಪು ಜಯಂತಿಗೆ ಅವಕಾಶ ಕೊಟ್ಟರೆ ಸುಮ್ಮನೆ ಕೂರುವುದಿಲ್ಲ. ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ವಿಹಿಂಪ ಕ್ಷೇತ್ರೀಯ ಸಂಯೋಜಕ ಸೂರ್ಯನಾರಾಯಣ, ಪ್ರಾಂತ ಸಹಕಾರ್ಯದರ್ಶಿ ಕೃಷ್ಣಮೂರ್ತಿ, ಮಂಗಳೂರು ಜಿಲ್ಲಾ ಕಾರ್ಯದರ್ಶಿ ಗೋಪಾಲ್ ಕುತ್ತಾರ್, ಆರೆಸ್ಸೆಸ್ ಮಂಗಳೂರು ನಗರ ಸಂಘ ಸಂಚಾಲಕ ಸುನಿಲ್ ಆಚಾರ್, ಬಜರಂಗ ದಳ ವಿಭಾಗ ಸಹ ಸಂಚಾಲಕ ಸುನಿಲ್ ಕೆ.ಆರ್., ಬೆಂಗಳೂರು ಮಹಾನಗರ ಸಂಚಾಲಕ ಕೇಶವ ನಾಯ್ಕ ಉಪಸ್ಥಿತರಿದ್ದರು.

ಬಜರಂಗದಳ ಪ್ರಾಂತ ಗೋರಕ್ಷಾ ಪ್ರಮುಖ್ ರಘು ಸಕಲೇಶಪುರ ಸ್ವಾಗತಿಸಿದರು. ವಿಭಾಗ ಸಹ ಸಂಚಾಲಕ ಸುನೀಲ್ ಕೆ.ಆರ್. ವಂದಿ ಸಿದರು. ಮುರಳೀಕೃಷ್ಣ ಹಸಂತಡ್ಕ ಕಾರ್ಯಕ್ರಮ ನಿರೂಪಿಸಿದರು.
Comments are closed.