
ಮಂಗಳೂರು,ಜುಲೈ.13: ಡಿವೈಎಸ್ಪಿ ಗಣಪತಿ ಅತ್ಮಹತ್ಯೆ ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ಸಚಿವ ಕೆ.ಜೆ.ಜಾರ್ಜ್, ಎ.ಎಂ ಪ್ರಸಾದ್ ಹಾಗೂ ಪ್ರಣವ್ ಮೋಹಾಂತಿ ಅವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ದ.ಕ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಮಂಗಳವಾರ ದ.ಕ. ಜಿಲಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲು, ಡಿವೈಎಸ್ಪಿ ಗಣಪತಿ ಅತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು.ಡಿವೈಎಸ್ಪಿ ಗಣಪತಿ ಅವರ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಆಗಲೇಬೇಕು, ಸಚಿವ ಕೆ.ಜೆ.ಜಾರ್ಜ್, ಎ.ಎಂ ಪ್ರಸಾದ್ ಹಾಗೂ ಪ್ರಣವ್ ಮೋಹಾಂತಿ ಅವರನ್ನು ಕೂಡಲೇ ಬಂಧಿಸಿ ಕಾನೂನು ತನಿಖೆಗೆ ಒಳಪಡಿಸಬೇಕು. ಸಚಿವ ಜಾರ್ಜ್, ಎಂ.ಎ ಪ್ರಸಾದ್ ಹಾಗೂ ಪ್ರಣವ್ ಮೋಹಾಂತಿ ಅವರ ವಿರುದ್ಧ 1 ವಾರದೊಳಗೆ ಎಫ್ಐಆರ್ ದಾಖಲಿಸಿ ಬಂಧಿಸಬೇಕು.ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಕಛೇರಿಗೆ ಮುತ್ತಿಗೆ ಯತ್ನ : ಪೊಲೀಸರಿಂದ ತಡೆ
ಪ್ರತಿಭಟನೆ ಅನಂತರ ಪ್ರತಿಭಟನಕಾರರು ಜಿಲ್ಲಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಈ ಸಂದರ್ಭ ಪ್ರತಿಭಟನಕಾರರನ್ನು ಒಳನುಗ್ಗದಂತೆ ಪೊಲೀಸರು ಜಿಲ್ಲಾಧಿಕಾರಿ ಕಚೇರಿ ಆವರಣದ ಗೇಟ್ ಬಂದ್ ಮಾಡಿ, ಬ್ಯಾರಿಕೇಡ್ ಆಳವಡಿಸಿ ತಡೆದರು.
ಸಂಸದ ನಳಿನ್ ಕುಮಾರ್ ಕಟೀಲು , ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ನೇತೃತ್ವದ ತಂಡ ಬ್ಯಾರೀಕೇಡ್ ದೂಡಿ ಜಿಲ್ಲಾಧಿಕಾರಿ ಚೇಂಬರ್ಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಇವರನ್ನು ತಡೆದು, ಕಛೇರಿಯ ಮುಖ್ಯ ಬಾಗಿಲು ಮುಚ್ಚಿದ್ದರು. ಇದರಿಂದ ಕಚೇರಿ ಒಳಪ್ರವೇಶಿಸಲು ಸಾಧ್ಯವಾಗದೇ ಕಚೇರಿ ಅವರಣದಲ್ಲಿಯೇ ಪ್ರತಿಭಟನಕಾರರು ಘೋಷಣೆ ಕೂಗತೊಡಗಿದರು.

ಸುಮಾರು 45 ನಿರ್ಮಿಷ ಕಳೆದರೂ ಜಿಲ್ಲಾಧಿಕಾರಿಯವರು ಸ್ಥಳಕ್ಕಾಗಮಿಸಿ ಮನವಿ ಸ್ವೀಕರಿಸಿದ ಹಿನ್ನೆಲೆಯಲ್ಲಿ ಪ್ರತಿಭಟನಕಾರರು ಜಿಲ್ಲಾಧಿಕಾರಿ ವಿರುದ್ಧವೇ ಘೋಷಣೆ ಕೂಗಿದರು. ಬಳಿಕ ಅಪರ ಜಿಲ್ಲಾಧಿಕಾರಿ ಕುಮಾರ್ ಅಗಮಿಸಿ ಮನವಿ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಮಾಜಿ ಸಚಿವ ಕೃಷ್ಣ.ಜೆ.ಪಾಲೆಮಾರ್, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಜಯರಾಮ ಶೆಟ್ಟಿ, ಬಿಜೆಪಿ ರಾಜ್ಯ ಘಟಕದ ಸುಲೋಚನಾ ಜಿ.ಕೆ.ಭಟ್,ಮಾಜಿ ಶಾಸಕರಾದ ಕೆ.ಮೋನಪ್ಪ ಭಂಡಾರಿ,ಪದ್ಮನಾಭ ಕೊಟ್ಟಾರಿ, ಬಿಜೆಪಿ ಜಿಲ್ಲಾ ಪ್ರ.ಕಾರ್ಯದರ್ಶಿಗಳಾದ ಕಿಶೋರ್ ರೈ.ಕ್ಯಾಪ್ಟನ್ ಬ್ರೀಜೇಶ್ ಚೌಟ, ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್ ಬಿಜೆಪಿ ಮುಖಂಡರಾದ ನಿತಿನ್ ಕುಮಾರ್, ಜಗದೀಶ್ ಅಧಿಕಾರಿ, ಉಮಾನಾಥ ಕೊಟ್ಯಾನ್, ಸತೀಶ್ ಪ್ರಭು ಮುಂತಾದವರು ಪಾಲ್ಗೊಂಡಿದ್ದರು
Comments are closed.