
ಚೆನ್ನೈ: ಕಾಲಿವುಡ್ ನ ಖ್ಯಾತ ನಟ ವಿಕ್ರಮ್ ಅವರ ಮಗಳಾದ ಅಕ್ಷಿತಾ ಅವರು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಎಂ. ಕರಣಾನಿಧಿಯ ಮೊಮ್ಮಗ ಮನು ರಂಜಿತ್ ರನ್ನು ವರಿಸಲಿದ್ದಾಳೆ.
ಚೆನ್ನೈನಲ್ಲಿ ಕಳೆದ ಭಾನುವಾರ ಈ ನೂತನ ಜೋಡಿಯ ವಿವಾಹ ನಿಶ್ಚಿತಾರ್ಥ ಸಮಾರಂಭ ನಡೆದಿದ್ದು, ಚಿತ್ರರಂಗದ ಮತ್ತು ರಾಜಕೀಯ ವಲಯದ ಕೆಲವೇ ಆಪ್ತ ಮಿತ್ರರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಹೀಗಾಗಿ ಖ್ಯಾತ ನಟ ಹಾಗೂ ಪ್ರಭಾವಿ ರಾಜಕಾರಣಿ ಕುಟುಂಬದ ವಿವಾಹ ಸಮಾರಂಭ ಸರಳವಾಗಿ ನಡೆಯಿತು. ಮೂಲಗಳ ಪ್ರಕಾರ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಕಾಲಿವುಡ್ ಖ್ಯಾತ ನಿರ್ದೇಶಕ ಶಂಕರ್ ಹಾಗೂ ಶ್ರೀ ಕೃಷ್ಣ ಸ್ವೀಟ್ಸ್ ಸಂಸ್ಥೆಯ ಎಂ ಮುರಳಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ಬಹಳ ದಿನಗಳ ಹಿಂದೆಯೇ ಮನು ರಂಜಿತ್ ಹಾಗೂ ಅಕ್ಷಿತಾ ಪರಸ್ಪರ ಪರಿಚಿತರಾಗಿದ್ದು, ಕ್ರಮೇಣ ಪರಿಚಯ ಪ್ರೀತಿಯಾಗಿದೆ. ಬಳಿಕ ಇಬ್ಬರೂ ತಮ್ಮ ತಮ್ಮ ಪೋಷಕರಿಗೆ ವಿಷಯ ತಿಳಿಸಿದ್ದು, ಎರಡೂ ಕುಟುಂಬದವರು ಮದುವೆಗೆ ಸಹಮತ ವ್ಯಕ್ತಪಡಿಸಿದ ಬಳಿಕವಷ್ಟೇ ಮದುವೆಗೆ ನಿಶ್ಚಯ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇನ್ನು ಮುಂದಿನ ವರ್ಷ ಅಂದರೆ 2017ರ ಆರಂಭದಲ್ಲಿ ಮದುವೆ ನಡೆಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
Comments are closed.