* ಯೋಗೀಶ್ ಕುಂಭಾಸಿ
ಕುಂದಾಪುರ: ಶುಕ್ರವಾರ ತಡರಾತ್ರಿ ಬಂದ ಬಾರೀ ಸುಂಟರಗಾಳಿಗೆ ಮನೆಯೊಂದರ ಮೇಲ್ಮಾಡು ಹಾಗೂ ಗೋಡೆ ಬಿದ್ದುವ್ಯಕ್ತಿ ಹಾಗೂ ಮಗುವೊಂದು ಗಂಭೀರವಾಗಿ ಗಾಯಗೊಂಡ ಘಟನೆ ತಾಲ್ಲೂಕಿನ ಮರವಂತೆ ಎಂಬಲ್ಲಿ ನಡೆದಿದೆ.
ಮಂಜುನಾಥ ಹಾಗೂ ಅವರ ನಾಲ್ಕು ವರ್ಷ ಪ್ರಾಯದ ಮಗ ಚಿರಾಗ್ ಗಾಯಗೊಂಡವರು.

ಘಟನೆ ವಿವರ: ಮರವಂತೆ ಸೀ ಲ್ಯಾಂಡ್ ಹಿಂಭಾಗದ ಮೀನುಗಾರಿಕೆ ರಸ್ತೆಯ ಸನಿಹದಲ್ಲಿದ್ದ ದಾಸಿ ವೆಂಕಟ ಖಾರ್ವಿ ಅವರ ಮನೆ ಇದಾಗಿದ್ದು ಮನೆಯಲ್ಲಿ ವೆಂಕಟ ಖಾರ್ವಿ ಅವರ ಮಗಳು ಲಕ್ಷ್ಮೀ, ಅಳಿಯ ಮಂಜುನಾಥ್, ಮಂಜುನಾಥ ಅವರ ಮಗ ಚಿರಾಗ್, ಮಂಜುನಾಥ್ ಪತ್ನಿ ಸೇರಿದಂತೆ ಆಕೆ ಶೋದರಿ ಇದ್ದರು. ರಾತ್ರಿ 1.30ರ ವೇಳೆ ಬೀಸಿದ ಬಾರೀ ಗಾಳಿಗೆ ಮನೆಯ ಮೇಲ್ಮಾಡು ಹಾರಿಹೋಗಿದ್ದು ಗೋಡೆಗಳು ಧರಾಶಾಹಿಯಾಗಿದೆ. ಈ ಸಂದರ್ಭ ಎಲ್ಲರೂ ಮಲಗಿದ್ದು ಮಂಜುನಾಥ್ ಹಾಗೂ ಚಿರಾಗ್ ಅವರ ಮೇಲೆ ಗೋಡೆ ಬಿದ್ದ ಪರಿಣಾಮ ಗಂಭೀರ ಗಾಯಗಳಾಗಿದೆ. ಇಬ್ಬರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮಂಜುನಾಥ ಅವರ ಎರಡು ಕಾಲು, ತೊಡೆ ಹಾಗೂ ಸೊಂಟದ ಭಾಗಕ್ಕೆ ಬಲವಾದ ಪೆಟ್ಟಾಗಿದೆ ಎನ್ನಲಾಗಿದೆ. ಲಕ್ಷ್ಮೀ ಅವರ ತಲೆಗೂ ಸಣ್ಣಪುಟ್ಟ ಗಾಯವಾಗಿದ್ದು ಉಳಿದವರು ಅಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ಗ್ರಹೋಪಯೋಗಿ ವಸ್ತುಗಳು ನಾಶವಾಗಿದೆ.
ನೋವಿನ ಮೇಲೆ ನೋವು….
ಲಕ್ಷ್ಮೀ ಅವರ ಪುತ್ರ ಬ್ರೇನ್ ಟ್ಯೂಮರ್ ಖಾಯಿಲೆಯಿಂದ ಬಳಲುತ್ತಿದ್ದು ಕಳೆದ ಒಂಬತ್ತು ದಿನಗಳ ಹಿಂದಷ್ಟೇ ಮ್ರತಪಟ್ಟಿದ್ದ. ಆತನ ಅಗಲುವಿಕೆಯ ನೋವಿನಲ್ಲಿದ್ದ ಕುಟುಂಬ ಮನೆಯನ್ನು ಕಳೆದುಕೊಂಡು ಪರಿತಪಿಸುವಂತಾಗಿದೆ. ಮೀನುಗಾರಿಕೆಯನ್ನು ನಂಬಿಕೊಂಡಿದ್ದ ಈ ಬಡಕುಟುಂಬವೀಗ ಚಿಂತಕ್ರಾಂತವಾಗಿದ್ದು ವಾಸಿಸಲು ಸೂರಿಲ್ಲದೇ ಕಂಗಾಲಾಗಿದ್ದಾರೆ.
ಶಾಸಕ ಗೋಪಾಲ ಪೂಜಾರಿ ಭೇಟಿ..
ಮನೆ ಕುಸಿತದ ಸ್ಥಳಕ್ಕೆ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೇ ತಹಶಿಲ್ದಾರರಿಗೆ ಸೂಕ್ತ ಪರಿಹಾರ ನೀಡುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ನೊಂದ ಕುಟುಂಬಕ್ಕೆ ತಾನೂ ವೈಯಕ್ತಿಕ ಪರಿಹಾರ ನೀಡಿದರು.
ಸುಕುಮಾರ್ ಶೆಟ್ಟಿ ಭೇಟಿ…
ಘಟನಾ ಸ್ಥಳಕ್ಕೆ ಕುಂದಾಪುರ ಎಜುಕೇಶನ್ ಸೊಸೈಟಿಯ ಬಿ.ಎಂ. ಸುಕುಮಾರ್ ಶೆಟ್ಟಿ ಭೇಟಿ ನೀಡಿದರು. ಕುಟುಂಬಕ್ಕೆ ಧೈರ್ಯ ತುಂಬಿದ ಅವರು ವೈಯಕ್ತಿಕವಾಗಿ ಧನಸಹಾಯ ನೀಡಿದ್ದಲ್ಲದೇ ಮುಂದಿನ ದಿನಗಳಲ್ಲಿ ಹೊಸ ಮನೆಯ ಕೆಲಸಕೂ ಸಹಕಾರ ನೀಡುವ ಭರವಸೆಯನ್ನಿತ್ತರು.
Comments are closed.