ಮಂಗಳೂರು, ಮೇ.19; ಎತ್ತಿನಹೊಳೆ ಯೋಜನೆ ವಿರೋಧಿಸಿ,ಯೋಜನೆ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಕರೆ ನೀಡೆಲಾಗಿದ್ದ ಸ್ವಯಂ ಪ್ರೇರಿತ ದ.ಕ ಜಿಲ್ಲಾ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಂಗಳೂರಿನಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.
ಇತ್ತ ಖಾಸಗಿ ಬಸ್ಗಳು ಸಹ ಬಂದ್ಗೆ ಸಂಪೂರ್ಣ ಬೆಂಬಲ ಘೋಷಿಸಿವೆ. ಬಂದ್ ಕರೆಗೆ ಸ್ಪಂದಿಸಿರುವ ಬಸ್ ಚಾಲಕರು ಬಸ್ ಗಳನ್ನು ರಸ್ತೆಗಿಳಿಸಲಿಲ್ಲ. ಖಾಸಗಿ ಸರ್ವಿಸ್ ಬಸ್ ಗಳು ಮತ್ತು ಸಿಟಿ ಬಸ್ ಗಳು ರಸ್ತೆಗೆ ಇಳಿಯಲಿಲ್ಲ . ನಗರದಲ್ಲಿ ಬಸ್ ಇಲ್ಲದೇ ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿತು. ಬೆಂಗಳೂರು, ಮೈಸೂರು ಮುಂತಾದೆಡೆಯಿಂದ ಬರುವ ಕೆ ಎಸ್ ಆರ್ ಟಿ ಸಿ ಬಸ್ ಗಳು ಪೊಲೀಸರ ರಕ್ಷಣೆಯೊಂದಿಗೆ ಸಂಚರಿಸುತ್ತಿರುವುದು ಕಂಡುಬಂದಿದೆ. ನಗರದ ಸ್ಟೇಟ್ ಬ್ಯಾಂಕ್ ನಿಂದ ಯಾವುದೇ ಖಾಸಗಿ ಮತ್ತು ಕೆ ಎಸ್ ಆರ್ ಟಿ ಸಿ ಬಸ್ ಗಳು ಸಂಚಾರವನ್ನು ನಡೆಸಿಲ್ಲ.
ನಗರದಲ್ಲಿ ಕೆಲವೊಂದು ಅಟೋ ರಿಕ್ಷಾ ಮಾತ್ರ. ಚಲಿಸುತ್ತಿವೆ. ಜನಸಂಚಾರವು ವಿರಳವಾಗಿದೆ. ದೂರದೂರಿನಿಂದವ ಪ್ರಯಾಣ ಮುಗಿಸಿ ಬಂದ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೋಟೆಲ್ ಅಂಗಡಿಗಳು ಸಂಪೂರ್ಣ ಬಂದ್ ಆಗಿದೆ. ನಗರದ ಸೆಂಟ್ರಲ್ ಮಾರುಕಟ್ಟೆಯಲ್ಲಿ ಇಂದು ಯಾವೂದೇ ಅಂಗಡಿ ಮುಂಗಟ್ಟುಗಳು ತೆರೆಯದೆ ಬಂದ್ಗೆ ಸಂಪೂರ್ಣ ಬೆಂಬಲ ಸೂಚಿಸಿದೆ. ಈ ನಡುವೆ ಜಿಲ್ಲಾ ಬಂದ್ಗೆ ವಿವಿಧ ಸಂಘ ಸಂಸ್ಥೆಗಳು, ವಿದ್ಯಾ ಸಂಸ್ಥೆಗಳು, ಐಟಿ ಕಂಪನಿಗಳು ಬೆಂಬಲಿಸಿವೆ. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಗ್ಯಾಸ್ ಮತ್ತು ಪಡಿತರ ಬಳಕೆದಾರರ ವೇದಿಕೆ ಹಾಗೂ ಬಿಜೆಪಿ ಕೂಡ ಬಂದ್ಗೆ ಬೆಂಬಲ ಸೂಚಿಸಿದ್ದು, ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದಾರೆ.
ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಸ್ವಯಂಪ್ರೇರಿತವಾಗಿ ಶಾಂತಿಯುತ ಬಂದ್ಗೆ ಕರೆ ನೀಡಲಾಗಿದ್ದರು, ಕೆಲವು ಕಡೆಗಳಲ್ಲಿ ಕಿಡಿಗೇಡಿಗಳಿಂದ ವಾಹನಗಳಿಗೆ ಬೆಂಕಿ ಹಚ್ಚುವುದು, ರಸ್ತೆ ಮಧ್ಯೆ ಟಯರ್ ಗೆ ಬೆಂಕಿ ಹಾಕುವುದು ಮುಂತಾದ ಘಟನೆಗಳು ನಡೆದಿವೆ.ಇಂದು ಮುಂಜಾನೆ ಪಂಪ್ವೆಲ್ ವೃತ್ತ, ತೊಕ್ಕೊಟ್ಟು, ಉಳ್ಳಾಲ, ಎಕ್ಕೂರ್ ಮೊದಲಾದ ಕಡೆಗಳಲ್ಲಿ ಕಿಡಿಗೇಡಿಗಳು ಟಯರ್ ಗೆ ಬೆಂಕಿ ಕೊಟ್ಟು ರಸ್ತೆ ಸಂಚಾರಕ್ಕೆ ಅಡ್ಡಿ ಪಡಿಸಿದ್ದಾರೆ. ಆದರೆ ಕೂಡಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅದನ್ನು ತೆರವುಗೊಳಿಸಿದ್ದಾರೆ.
ನಂತೂರು ಸರ್ಕಲ್ ಬಳಿ ರಸ್ತೆ ತಡೆ :
ನಗರದ ನಂತೂರು ಸರ್ಕಲ್ ಬಳಿ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರಿಂದ ರಸ್ತೆ ತಡೆ ನಡೆಯಿತು. ಮಂಗಳೂರಿನ ನಂತೂರ್ ಸರ್ಕಲ್ನಲ್ಲಿ ರಸ್ತೆ ತಡೆ ಮತ್ತು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತೂರು ಸರ್ಕಲ್ ನಲ್ಲಿರುವ ನಾಲ್ಕು ರಸ್ತೆಗಳಲ್ಲಿ ರಸ್ತೆ ತಡೆ ನಡೆಸಿದ ಕಾರ್ಯಕರ್ತರು ಎತ್ತಿನಹೊಳೆ ಯೋಜನೆ ವಿರುದ್ದ ಘೋಷಣೆ ಕೂಗಿದರು. ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆ ತಡೆ ನಡೆಸಿದರು. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ರಸ್ತೆ ತಡೆ ನಡೆಸುತ್ತಿದ್ದವರನ್ನು ಆಲ್ಲಿಂದ ತೆರವುಗೊಳಿಸಿದರು.
ಬೆಳ್ತಂಗಡಿ ತಾಲೂಕಿನಲ್ಲಿ ಬಂದ್ ಯಶಸ್ವಿ: ಕಾರಿಗೆ ಬೆಂಕಿ
ಬೆಳ್ತಂಗಡಿ ತಾಲೂಕಿನಲ್ಲಿ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಕಾಶಿಬೆಟ್ಟು ಸಮೀಪ ನಿಲ್ಲಿಸಿದ್ದ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಅಲ್ಲಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚಿ ವಾಹನ ಸಂಚಾರಕ್ಕೆ ತಡೆಯೊಡ್ಡಿದ್ದಾರೆ. ಖಾಸಗಿ ಹಾಗೂ ಸರಕಾರಿ ಬಸ್ಸುಗಳು ಸಂಚಾರ ಸ್ಥಗಿತಗೊಳಿಸಿದ್ದು, ಬೆಳ್ತಂಗಡಿ, ಉಜಿರೆ, ಗುರುವಾಯನಕೆರೆ ಸೇರಿದಂತೆ ಬಹುತೇಕ ಕಡೆ ಅಂಗಡಿಗಳು ಬಾಗಿಲು ತೆರೆದಿಲ್ಲ, ಜನ ಸಂಚಾರವೂ ವಿರಳವಾಗಿದೆ. ಬೆಳಗ್ಗಿನಿಂದಲೇ ತುಂತುರು ಮಳೆ ಆರಂಭಗೊಂಡಿದ್ದು, ಜನರು ಮನೆಗಳಿಂದ ಹೊರಬರುವುದಕ್ಕೆ ಹಿಂಜರಿಯುತ್ತಿದ್ದಾರೆ.
ಜಿಲ್ಲಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.. ನಗರದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ನಗರದಲ್ಲಿ ಸುತ್ತಾಟ ನಡೆಸಿ ಪರಿಸ್ಥಿತಿಯ ಅವಲೋಕನದಲ್ಲಿ ತೊಡಗಿದ್ದಾರೆ. ಬಂದ್ ನಿಂದ ಆಸ್ಪತ್ರೆ, ಮೆಡಿಕಲ್ ಸ್ಟೋರ್, ಆ್ಯಂಬುಲೆನ್ಸ್, ಪತ್ರಿಕೆ, ಹಾಲು ವಿತರಣೆಗೆ ಬಂದ್ ನಿಂದ ವಿನಾಯಿತಿ ನೀಡಲಾಗಿದೆ.
ಬಂದ್’ಗೆ ಈಗಾಗಲೇ ಬೆಂಬಲ ನೀಡಿದ ಸಂಘ ಸಂಸ್ಥೆಗಳು :
* ಜೈತುಳುನಾಡ್(ರಿ.) * ತುಳುಪಾತೆರ್ಗ ತುಳು ಒರಿಪಾಗ (ರಿ.) * ತುಳುನಾಡ್ ಒಕ್ಕೂಟ * ತುಳುನಾಡ ರಕ್ಷಣಾ ವೇದಿಕೆ (ರಿ.) * ತುಳುಸೇನಾ * ನಮ್ಮ ತುಳುನಾಡ್ ಟ್ರಸ್ಟ್ (ರಿ.) *ತುಳುನಾಡ್ ನವ ನಿರ್ಮಾಣ ಸೇನೆ* ತುಳುರಾಜ್ಯ ಹೋರಾಟ ಸಮಿತಿ * ತುಳುನಾಡ್ ಸ್ಟೇಟ್ ಫೇಸ್ಬುಕ್ ಪೇಜ್ * ಬಜರಂಗಬಳ * ವಿಶ್ವಹಿಂದೂಪರಿಷತ್ * ಹಿಂದೂ ಜಾಗರಣ ವೇದಿಕೆ * ಹಿಂದೂ ರಾಷ್ಟ್ರ ಸಂಘ * ನೇತ್ರಾವತೀ ಉಳಿಸಿ ಸಮಿತಿ * ಸಹ್ಯಾದ್ರಿ ಸಂಚಯ * ಬಿಲ್ಲವರ ಏಕೀಕರಣ ಸಮಿತಿ (ರಿ ) * ಯುವ ಕೇಸರಿ ಕೊಯಿಕುಡೆ * ಜೈ ತುಳುನಾಡ್ ವೆಬ್ ಸೈಟ್ * ವಲ್ಡ್ ತುಳುವಾಸ್ ನೆಟ್ ವರ್ಕ್ * ಬಿಲ್ಲವರ ಮಹಾಮಂಡಲ * ತುಳುನಾಡ್ ಪಕ್ಷ * ದುರ್ಗಾಶಕ್ತಿ *ಆಲ್ ತುಳು ಅಶೋಶಿಯೆಷನ್ *ಓಂಕಾರೇಶ್ವರಿ ಮಹಿಳಾ ಮಂಡಲ *ಕುಡ್ಲದ ಬಿರುವೆರ್ *ಬಂಟ್ಸ್ ವಿಂಗ್ ಕುಡ್ಲ್ *ತೀಯಾ ಸಮಾಜ್ ಮಹಾರಾಷ್ಟ್ರ *ಆಲ್ ತುಳು ಪೇಜಸ್ ಯೂನಿಯನ್ * ಹಡೀಲ್ ಬ್ರದರ್ಸ್ *ಪರಿಸರ ಜಾಗೃತಿ ಸಮಿತಿ ಅಳಿಕೆ ಮಾತ್ರವಲ್ಲದೇ ಇನ್ನಷ್ಟು ಹೆಚ್ಚಿನ ವಿವಿಧ ಧರ್ಮಗಳ ಸಂಘಟನೆಗಳು ಬಂದ್’ಗೆ ಬೆಂಬಲ ಘೋಷಿಸಿದೆ.
ಬಲವಂತದ ಬಂದ್ಗೆ ಯತ್ನಿಸಿದರೆ ನಿರ್ದಾಕ್ಷಿಣ್ಯ ಕ್ರಮ : ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ
ಮಂಗಳೂರು : ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಇಂದು ಕರೆ ನೀಡಿರುವ ಸ್ವಯಂಪ್ರೇರಿತ ಬಂದ್ ಸಂದರ್ಭ ಬಲವಂತದ ಬಂದ್ಗೆ ಯತ್ನಿಸಿದರೆ ನಿರ್ದಾಕ್ಷಿಣ್ಯ ಕ್ರಮ ಜರಗಿಸಲಾಗುವುದೆಂದು ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಜಿಲ್ಲಾಡಳಿತ ಬದ್ಧವಾಗಿದೆ. ಬಲಾತ್ಕಾರವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲು ಯಾರಾದರೂ ಪ್ರಯತ್ನಿಸಿದರೆ ಅಥವಾ ಸಾರ್ವಜನಿಕರಿಗೆ ಅನಗತ್ಯವಾಗಿ ತೊಂದರೆ ಉಂಟು ಮಾಡಿದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವನ್ನು ತೆಗೆದು ಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
Comments are closed.