
ಇಸ್ಲಾಮಾಬಾದ್: ಸಿಹಿ ತಿಂಡಿ ಅಂಗಡಿಯ ಮಾಲಿಕನೊಬ್ಬ ತನ್ನ ಹಿರಿಯ ಸಹೋದರನ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಕೀಟನಾಶಕ ಬೆರೆಸಿದ ಸಿಹಿ ತಿಂಡಿಯನ್ನು ಮಾರಾಟ ಮಾಡಿ 30 ಅಮಾಯಕರನ್ನು ಬಲಿತೆಗೆದುಕೊಂಡ ಘಟನೆ ನಡೆದಿದೆ.
ಪಾಕಿಸ್ತಾನದ ಕೇಂದ್ರ ಪಂಜಾಬ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ಅಣ್ಣ ತಾರಿಕ್ ಮೆಹಮೂದ್ ಮತ್ತು ಆರೋಪಿ ಖಾಲಿದ್ ಮೆಹಮೂದ್ ಒಟ್ಟಾಗಿ ಸಿಹಿತಿಂಡಿ ಅಂಗಡಿಯನ್ನು ನಡೆಸುತ್ತಿದ್ದರು. ವ್ಯಾಪಾರಕ್ಕೆ ಸಂಬಂಧಿಸಿದ ವಿವಾದದಲ್ಲಿ ಅಣ್ಣ ತಾರಿಕ್ ತನ್ನನ್ನು ಅವಮಾನಿಸಿ ಛೇಡಿಸಿದನೆಂಬ ಕಾರಣಕ್ಕೆ 18 ವರ್ಷದ ಖಾಲಿದ್ ಮೆಹಮೂದ್ ಸಿಟ್ಟಿಗೆದ್ದಿದ್ದ. ಅಣ್ಣನ ವಿರುದ್ಧ ಸೇಡು ತೀರಿಸಿಕೊಳ್ಳಲು ಬಯಸಿದ್ದ ಖಾಲಿದ್ ಸಿಹಿ ತಿಂಡಿಗೆ ಕೀಟನಾಶಕ ಬೆರೆಸಿದ್ದ.
ಸಿಹಿ ತಿಂಡಿಗೆ ಕೀಟನಾಶಕ ಬೆರೆಸಿದ್ದನ್ನು ಸ್ವತಃ ಖಾಲಿದ್ ಒಪ್ಪಿಕೊಂಡಿದಾನೆ. ಈ ನಡುವೆ ಕೀಟ ನಾಶಕ ಬೆರೆಸಿದ ಸಿಹಿ ತಿಂಡಿಯನ್ನು ಸೇವಿಸಿ ಮಕ್ಕಳು ಸೇರಿದಂತೆ ಒಟ್ಟು 30 ಮಂದಿ ಸಾವನ್ನಪ್ಪಿದ್ದು, ಇನ್ನೂ ಐವರು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೇಕರಿಯ ಒಬ್ಬ ನೌಕರ ಸೇರಿದಂತೆ ಸಹೋದರರಾದ ತಾರಿಕ್ ಮತ್ತು ಖಾಲಿದ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.