
ಹೈದ್ರಾಬಾದ್: ನ್ಯಾಯಾಲಯದ ಆವರಣದಲ್ಲೇ ಪತಿ ಪತ್ನಿಯ ಕತ್ತು ಸೀಳಿ ಪರಾರಿಯಾಗಿರುವ ಘಟನೆ ಹೈದ್ರಾಬಾದ್ ನಲ್ಲಿ ನಿನ್ನೆ ನಡೆದಿದೆ.
ಕೌಟುಂಬಿಕ ದೌರ್ಜನ್ಯ ಪ್ರಕರಣದ ವಿಚಾರಣೆಗೆ ಹಾಜರಾಗಿದ್ದ ಪತ್ನಿಯನ್ನು ಪತಿಯೇ ಕೊರ್ಟ್ ಆವರಣದಲ್ಲಿ ಕತ್ತಿಯಿಂದ ಕತ್ತು ಸೀಳಿದ್ದಾನೆ. ಸೈಬರ್ ಬಾದ್ ನಲ್ಲಿರುವ ರಾಜೇಂದ್ರನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸೌಜನ್ಯ ಎಂಬುವವರು ತಮ್ಮ ಪತಿ ನಾಗೇಂದ್ರನಾಥ್ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದರು. ತನ್ನ ಪರ ವಕೀಲ ಜತೆ ಮಾತುಕತೆ ಮುಗಿಸಿ ಕೋರ್ಟ್ ಆವರಣದಲ್ಲಿ ಬರುತ್ತಿರಬೇಕಾದರೆ, ಹಿಂದಿನಿಂದ ಬಂದ ಪತಿ ನಾಗೇಂದ್ರನಾಥ್ ಸೌಜನ್ಯ ಕತ್ತಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ತೀವ್ರವಾಗಿ ಗಾಯಗೊಂಡ ಸೌಜನ್ಯಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2007ರಲ್ಲಿ ಸೌಜನ್ಯಾಳನ್ನು ನಾಗೇಂದ್ರನಾಥ್ ವಿವಾಹವಾಗಿದ್ದನು. ಕಳೆದ ಒಂದೂವರೆ ವರ್ಷದಿಂದ ಕೌಟುಂಬಿಕ ಹಿಂಸೆಯಿಂದಾಗಿ ದಂಪತಿಗಳು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ನಾಗೇಂದ್ರನಾಥ್ ವಿರುದ್ಧ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ. ನಾಗೇಂದ್ರನಾಥ್ ಮತ್ತು ಆತನ ಪತ್ನಿ ಸೌಜನ್ಯ ಕೌಟುಂಬಿಕ ದೌರ್ಜನ್ಯ ಪ್ರಕರಣದ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಆಗಮಿಸಿದ್ದರು.