
ನವದೆಹಲಿ: ಬ್ಯಾಂಕ್ ಸಾಲ ಹಿಂತಿರುಗಿಸಲಾಗದೇ ಸುಸ್ತಿದಾರರಾಗಿರುವ ವಿಜಯ್ ಮಲ್ಯ ಬಗ್ಗೆ ಕೇಂದ್ರ ಸರ್ಕಾರ ಮೃದುಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಮಿತ್ರ ಪಕ್ಷ ಶಿವಸೇನೆ, ವಿದೇಶದಲ್ಲಿರುವ ಸುಸ್ತಿದಾರರಾಗಿರುವ ಉದ್ಯಮಿಯನ್ನು ಭಾರತಕ್ಕೆ ಕರೆತರಲಾಗದವರು, ಉಗ್ರ ದಾವೂದ್ ಇಬ್ರಾಹಿಂ ನನ್ನು ಹೇಗೆ ಬಂಧಿಸುತ್ತಾರೆ ಎಂದು ಪ್ರಶ್ನಿಸಿದೆ.
ಲಲಿತ್ ಮೋದಿ, ವಿಜಯ್ ಮಲ್ಯ ಅಂಥವರು ದೇಶ ಬಿಡುವುದಕ್ಕೆ ಹೇಗೆ ಅವಕಾಶ ನೀಡಲಾಯಿತು? ವಿದೇಶದಲ್ಲಿದ್ದರೂ ಅವರ ಜಾಡನ್ನು ಹಿಡಿಯಲು ನಮ್ಮಲ್ಲಿ ಅನೇಕ ಸಂಸ್ಥೆಗಳಿವೆ. ಮಲ್ಯರನ್ನು ವಾಪಸ್ ಕರೆತರಲು ಸಾಧ್ಯವಾಗಿಲ್ಲವೆಂದರೆ ಅದಕ್ಕೆ ಅವರ ಪ್ರಭಾವ ಕಾರಣವಲ್ಲ, ನಮ್ಮ ವೈಫಲ್ಯ ಕಾರಣ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ವಿದೇಶಕ್ಕೆ ಹೋದ ಭಾರತದ ನಾಗರಿಕರಿಕರನ್ನೇ ವಾಪಸ್ ಕರೆತರಲು ಸಾಧ್ಯವಾಗಿಲ್ಲ ಎಂದಾದ ಮೇಲೆ ಕೇಂದ್ರ ಸರ್ಕಾರಕ್ಕೆ ದಾವೂದ್ ನನ್ನು ಭಾರತಕ್ಕೆ ಕರೆತರಲು ಹೇಗೆ ಸಾಧ್ಯ ಎಂದು ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.