
ಬೆಂಗಳೂರು: ಯುವಕನನ್ನು ಕಿಡ್ನಾಪ್ ಮಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಿನ್ನೆ ತಡ ರಾತ್ರಿ ಬೆಂಗಳೂರಿನ ಏರ್ಪೋರ್ಟ್ ರಸ್ತೆಯ ಬಾಗಲೂರು ಕ್ರಾಸ್ ಬಳಿ ನಡೆದಿದೆ.
ವಿದ್ಯಾನಗರದ ನಿವಾಸಿ 19 ವರ್ಷದ ಅರುಣ್ ಕೊಲೆಯಾಗಿರುವ ಯುವಕ. ನಿನ್ನೆ ರಾತ್ರಿ ಮೂರು ರಿಂದ ನಾಲ್ಕು ಜನರ ದುಷ್ಕರ್ಮಿಗಳು ಗುಂಪೊಂದು ವಿದ್ಯಾನಗರದಲ್ಲಿರುವ ಅರುಣ್ ಅವರ ಮನೆಯಿಂದ ಕಾರಿನಲ್ಲಿ ಕಿಡ್ನಾಪ್ ಮಾಡಿಕೊಂಡು ರಾತ್ರಿ ಏರ್ಪೋರ್ಟ್ ರಸ್ತೆಯ ಬಾಗಲೂರು ಕ್ರಾಸ್ ಬಳಿ ಅಟ್ಟಾಡಿಸಿಕೊಂಡು ಚಾಕುವಿನಿಂದ ಇರಿದು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅರುಣ್ ಅವರನ್ನು ಸ್ನೇಹಿತರು ತಮ್ಮ ಕಾರಿನಲ್ಲಿ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದ್ದರಾದರೂ ದಾರಿ ಮಧ್ಯದಲ್ಲೆ ಅರುಣ್ ಮೃತಪಟ್ಟಿದ್ದಾರೆ.
ಕೊಲೆಗೆ ಕಾರಣವೇನು?: ಏರ್ಪೋರ್ಟ್ ಕಾರ್ಗೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅರುಣ್, 20 ದಿನಗಳ ಹಿಂದೆ ಫೇಸ್ ಬುಕ್ನಲ್ಲಿ ಚಾಟಿಂಗ್ ವಿಚಾರವಾಗಿ ಸ್ನೇಹಿತರೊಡನೆ ಜಗಳವಾಗಿದ್ದು, ಜಗಳ ವಿಕೋಪಕ್ಕೆ ತಿರುಗಿ ಹೊಡೆದಾಡಿಕೊಂಡಿದ್ದರಂತೆ. ಈ ಜಗಳ ಮುಂದುವರೆಯದಂತೆ ರಾಜಿ ಕೂಡ ಮಾಡಿಸಲಾಗಿತ್ತು. ಆದರೆ ಅಂದು ಅರುಣ್ ಜೊತೆ ಜಗಳವಾಡಿಕೊಂಡ ಗುಂಪು ಇಂದು ಅರುಣ್ನನ್ನು ಕೊಲೆ ಮಾಡಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಈ ಸಂಬಂಧ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಎರಡು ತಂಡ ರಚನೆ ಮಾಡಿ ಪೊಲೀಸರು ಬಲೆ ಬೀಸಿದ್ದಾರೆ.