
ಮಂಗಳೂರು : ಮುಂಬರುವ ಐಪಿಎಲ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರಲು ಕಾಯುತ್ತಿದ್ದೇನೆ. ಈ ಬಾರಿ ತವರಿನ ಆರ್.ಸಿ.ಬಿ ಪರ ಆಡುತ್ತಿದ್ದೇನೆ.ಜಿಮ್ನಲ್ಲಿ ಕೈಗೆ ಸಣ್ಣ ಏಟು ಬಿದ್ದಿರುವುದರಿಂದ ಸದ್ಯ ಯಾವೂದೇ ರೀತಿಯ ಕ್ರಿಕೆಟ್ನಲ್ಲಿ ಆಡುತ್ತಿಲ್ಲ ಎಂದು ಕ್ರಿಕೆಟ್ ಆಟಗಾರ, ಟೆಸ್ಟ್ ಭಾರತೀಯ ತಂಡದ ಆರಂಭಕಾರ, ಮಂಗಳೂರಿನಲ್ಲೇ ಕ್ರಿಕೆಟಿನ ಮೊದಲ ಹೆಜ್ಜೆಯನ್ನಿರಿಸಿದ ಕೆ.ಎಲ್.ರಾಹುಲ್ ಹೇಳಿದ್ದಾರೆ.

ಏರವಿವಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಮಂಗಳೂರಿಗೆ ಆಗಮಿಸಿದ ಅವರು ಸುದ್ಧಿಗಾರರ ಜೊತೆ ತಮ್ಮ ಅನಿಸಿಕೆ ಹಂಚಿಕೊಂಡರು. ಕಠಿಣ ಅಭ್ಯಾಸ ಮತ್ತು ಹೆಚ್ಚಿನ ಪರಿಶ್ರಮದಿಂದಾಗಿ ಆಸ್ಟ್ರೇಲಿಯ ವಿರುದ್ಧ ಶತಕ ಬಾರಿಸಲು ಸಾಧ್ಯವಾಯಿತು.ಈಗ ಗೆಳೆಯರು ಹಾಗೂ ಮನೆಯ ಸದಸ್ಯರೊಂದಿಗೆ ಕಾಲ ಕಳೆಯುತ್ತಿದ್ದೇನೆ.ಮುಂದಿನ ಐಪಿಎಲ್ ಬಳಿಕ ಮತ್ತೆ ಭಾರತ ತಂಡವನ್ನು ಸೇರಿಕೊಳ್ಳುವ ನಿರಿಕ್ಷೆಯಲ್ಲಿದ್ದೇನೆ ಎಂದು ಅವರು ಹೇಳಿದರು.
ದೈಹಿಕ ದೃಢತೆಯೊಂದಿಗೆ ಆತ್ಮ ವಿಶ್ವಾಸ ವೃದ್ಧಿಸಿಕೊಳ್ಳಲು ಫಿಟ್ನೆಸ್ ಮಾರ್ಗದರ್ಶಕರ ಸಲಹೆಗಳು ಕ್ರಿಕೆಟ್ ಕ್ಷೇತ್ರದಲ್ಲಿ ನನಗೆ ಸಾಧನೆ ಮಾಡಲು ಸಹಕಾರಿಯಾಗಿದೆ. ಆರೋಗ್ಯಕರ ಜೀವನ ಪದ್ಧತಿಯನ್ನು ಅಳವಡಿಸಿಕೊಳ್ಳಲು ಜಿಮ್ ಸಹಾಯಕವಾಗಲಿದೆ. ನಿಮಗೆ ಸಿಕ್ಕಿದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ. ದೈಹಿಕವಾದ ಅಸಹಜ ಬೆಳವಣಿಗೆಯನ್ನು ನಿಯಂತ್ರಿಸಿ ದೇಹದ ಫಿಟ್ನೆಸ್ ಕಾಯಿದುಕೊಳ್ಳಲು ಜಿಮ್ ಸಹಕಾರಿಯಾಗಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.