ಮಳವಳ್ಳಿ, ಫೆ.26-ತಾಲೂಕಿನ ಹಲಗೂರಿನಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ ಜೆಡಿಎಸ್ ಸೋಲನುಭವಿಸಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಬಾಳೇವನಗ ಗ್ರಾಮದ ಪಕ್ಷದ ಕಾರ್ಯಕರ್ತ ಶಿವಮಾದು ಕುಟುಂಬ ವರ್ಗಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾಂತ್ವಾನ ಹೇಳಿದರು. ನಿನ್ನೆ ಸಂಜೆ ಬಾಳೇವನಗ ಗ್ರಾಮಕ್ಕೆ ಪಕ್ಷದ ಮುಖಂಡರೊಂದಿಗೆ ತೆರಳಿ ಶಿವಮಾದು ಅವ ಪತ್ನಿ , ಪೋಷಕರು ಹಾಗೂ ಮಕ್ಕಳನ್ನು ಸಾಂತ್ವಾನಗೊಳಿಸಿದರು.
ಪಕ್ಷದ ವತಿಯಿಂದ 5 ಲಕ್ಷ ರೂ. ಪರಿಹಾರ ನೀಡುತ್ತೇನೆ ಎಂದು ಭರವಸೆ ನೀಡಿದ ಕುಮಾರಸ್ವಾಮಿ ಅವರು, ಸ್ಥಳದಲ್ಲೇ 50 ಸಾವಿರ ರೂ. ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಭದ್ರಕೋಟೆಯಾದ ಹಲಗೂರಿನಲ್ಲಿ ನಮ್ಮ ಪಕ್ಷದ ಸೋಲಿಗೆ ನಮ್ಮವರೇ ಆದ ಕೆಲವು ಮುಖಂಡರು ಅಧಿಕಾರ ಅನುಭವಿಸಿ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು. ಮುಂದೊಂದು ದಿನ ಇಂಥವರಿಗೆ ತಕ್ಕ ಉತ್ತರ ಹೇಳುತ್ತೇನೆ. ನಾವು ಪಕ್ಷ ಸಂಘಟನೆ ಮಾಡಿ ನಮ್ಮ ಅಸ್ತಿತ್ವವನ್ನು ಸಾಬೀತುಪಡಿಸುತ್ತೇನೆ ಎಂದು ಹೇಳಿದರು. ಈ ವೇಳೆ ವಿಧಾನಪರಿಷತ್ ಸದಸ್ಯ ಅಪ್ಪಾಜಿಗೌಡ, ಮಾಜಿ ಶಾಸಕ ಕೆ.ಅನ್ನದಾನಿ, ಸಂಸದ ಪುಟ್ಟರಾಜು ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.