ಹೈದರಾಬಾದ್ : ನಿನ್ನೆಯಷ್ಟೇ ತನ್ನ ಗೆಳೆಯ ವೈದ್ಯ, ಡಾ| ಉದಯ್ ಕುಮಾರ್ ರಾಚಕೊಂಡ ಅವರ ಮೇಲೆ ಗುಂಡು ಹಾರಿಸಿದ್ದ ಸರ್ಜನ್, ಡಾ| ಶಶಿ ಕುಮಾರ್ ಅವರಿಂದು ಸ್ನೇಹಿತನ ಫಾರ್ಮ್ ಹೌಸ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡಾ| ಶಶಿ ಕುಮಾರ್ ಅವರು ನಿನ್ನೆ ನಗರದ ಜನದಟ್ಟನೆಯ ಹಿಮಾಯತ್ ನಗರ ಪ್ರದೇಶದಲ್ಲಿ ಕಾರಿನಲ್ಲಿ ಕೂತಿದ್ದ ಗೆಳೆದ ಡಾ| ಉದಯ್ ಕುಮಾರ್ ಮೇಲೆ ತಮ್ಮ ಪಾಯಿಂಟ್ 32 ಎಂಎಂ ಪಿಸ್ತೂಲಿನಿಂದ ಅತ್ಯಂತ ನಿಕಟದಿಂದ ಗುಂಡು ಹಾರಿಸಿದ್ದರು. ಕಾರಿನಲ್ಲಿ ಮತ್ತೋರ್ವ ವೈದ್ಯ, ಡಾ| ಸಾಯಿ ಕುಮಾರ್ ಎಂಬವರೂ ಕುಳಿತಿದ್ದರು.
ಇಂದು ಡಾ| ಶಶಿ ಕುಮಾರ್ ಅವರು ಅದೇ ಪಿಸ್ತೂಲಿನಿಂದ ಫಾರ್ಮ್ ಹೌಸ್ನಲ್ಲಿ ತಮ್ಮ ಮೇಲೆ ತಾವೇ ಗುಂಡೆಸೆದುಕೊಂಡು ಆತ್ಮಹತ್ಯೆ ಮಾಡಿಕೊಂಡರು.
ಕೆಲವು ಎನ್ ಆರ್ ಐ ಗಳನ್ನು ಸೇರಿಸಿಕೊಂಡು ಡಾ| ಶಶಿ ಕುಮಾರ್ ಮತ್ತು ಡಾ| ಉದಯ್ ಕುಮಾರ್ ಅವರು ಮಾಧಾಪುರದಲ್ಲಿ ಲಾರೆಲ್ ಹಾಸ್ಪಿಟಲ್ ಆರಂಭಿಸಿದ್ದರು. ಆದರೆ ಆಸ್ಪತ್ರೆ ವ್ಯವಹಾರ ಕುರಿತಂತೆ ಅವರೊಳಗೆ ಕೆಲವು ಭಿನ್ನಾಭಿಪ್ರಾಯಗಳು ಎದ್ದಿದ್ದವು.
ತಾನು ಈ ಅಸ್ಪತ್ರೆ ಸ್ಥಾಪಿಸಲು 75 ಲಕ್ಷ ರೂ. ಹಣ ಹೂಡಿದ ಹೊರತಾಗಿಯೂ ಉದ್ಯಮದಲ್ಲಿ ಡಾ| ಉದಯ್ ಮತ್ತು ಡಾ| ಸಾಯಿ ಅವರು ತನ್ನನ್ನು ಕಡೆಗಣಿಸಿ ಬದಿಗೊತ್ತುತ್ತಿದ್ದಾರೆ ಎಂಬುದೇ ವಿರಸಕ್ಕೆ ಕಾರಣವಾಗಿತ್ತು. ಈ ಸಂಬಂಧವಾಗಿ ಮಾತನಾಡಲು ಇವರಿಬ್ಬರನ್ನು ಡಾ| ಶಶಿ ಕುಮಾರ್ ಅವರು ಹಿಮಾಯತ್ ನಗರಕ್ಕೆ ಕರೆಸಿಕೊಂಡಿದ್ದರು. ಮಾತಿಗೆ ಮಾತು ಬೆಳೆದು ವಿಷಯ ಗಂಭೀರವಾದಾಗ ಡಾ| ಶಶಿ ಕುಮಾರ್ ಅವರು ಡಾ| ಉದಯ್ ಅವರ ಮೇಲೆ ಗುಂಡು ಹಾರಿಸಿದ್ದರು.
-ಉದಯವಾಣಿ