
ಮಂಗಳೂರು,ಜ.27 : ಪಾಶ್ಚಿಮಾತ್ಯ ದೇಶಗಳಲ್ಲಿ ಇರುವಂತೆ ನಮ್ಮ ದೇಶದಲ್ಲಿಯೂ ಪ್ರತಿಯೊಬ್ಬರಿಗೆ ಕಡ್ಡಾಯ ಮಿಲಿಟರಿ ತರಬೇತಿ ಪಡೆಯುವ ಕಾನೂನನ್ನು ರೂಪಿಸಿದರೆ ಸಮಾಜದಲ್ಲಿ ಬಹಳಷ್ಟು ಸುಧಾರಣೆ ತರಲು ಸಾಧ್ಯವಿದೆ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದರು.
ನಗರದ ರೋಶನಿ ನಿಲಯದಲ್ಲಿ ಎಮ್. ಫ್ರೆಂಡ್ಸ್ ಮಂಗಳೂರು, ಅಲ್ ಫಲಾಹ್ ಎಂಟರ್ಪ್ರೈಸಸ್ ಬೆಂಗಳೂರು ಮತ್ತು ದುಬೈ ಹಾಗೂ ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್, ರೋಶನಿ ನಿಲಯದ ಸಹಯೋಗದಲ್ಲಿ ಗಾಯಗೊಂಡ ನಿವೃತ್ತ ಯೋಧರನ್ನು ಮತ್ತು ಹುತಾತ್ಮರಾದ ಯೋಧರ ಕುಟುಂಬವನ್ನು ಸನ್ಮಾನಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಲಾದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ಮತ್ತು ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಲ್ಫಲಾಹ್ ಎಂಟರ್ಪ್ರೈಸಸ್ನ ಚೇರ್ಮೆನ್ ಅಬ್ದುಲ್ಲಾ ಎಸ್. ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಆರೋಗ್ಯ ಸಚಿವ ಯು.ಟಿ ಖಾದರ್ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಎಮ್. ಫ್ರೆಂಡ್ಸ್ ಟ್ರಸ್ಟ್ನ ಅಧ್ಯಕ್ಷ ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ವಹಿಸಿದ್ದರು.
ಯುದ್ಧದಲ್ಲಿ ಗಾಯಗೊಂಡು ನಿವೃತ್ತರಾದ ಯೋಧರಾದ ಚಂದಪ್ಪ ಡಿ.ಎಸ್., ಸೇಸಪ್ಪ ಗೌಡ , ಹುತಾತ್ಮ ಯೋಧ ಚಂದ್ರಶೇಖರ್ರ ಪತ್ನಿ ಇಂದಿರಾ ಚಂದ್ರಶೇಖರ್, ಹುತಾತ್ಮ ಯೋಧ ಪರಮೇಶ್ವರ್ರ ಪತ್ನಿ ಕೆ.ಪುಷ್ಪಾವತಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.ಲ್ ಫಲಾಹ್ ಎಂಟರ್ಪ್ರೈಸಸ್ನ ಆಡಳಿತ ನಿರ್ದೇಶಕ ಯೂಸುಫ್ ಎಸ್., ಎಮ್.ಫ್ರೆಂಡ್ಸ್ ಟ್ರಸ್ಟ್ನ ಕಾರ್ಯದರ್ಶಿ ರಶೀದ್ ವಿಟ್ಲ, ರೋಶನಿ ನಿಲಯದ ಎಲ್ವಿನ್ ಬೆನ್ನಿಸ್ ಉಪಸ್ಥಿತರಿದ್ದರು.
ಕಾಲಿದ್ ತಣ್ಣೀರುಬಾವಿ ಗೀತೆ ಗಾಯನ ಮಾಡಿದರು. ಎಮ್. ಫ್ರೆಂಡ್ಸ್ನ ಕೋಶಾಧಿಕಾರಿ ಸುಜಾಹ್ ಮುಹಮ್ಮದ್ ಸ್ವಾಗತಿಸಿದರು. ಕಾನೂನು ಸಲಹೆಗಾರ ಅಬೂಬಕರ್ ವಿಟ್ಲ ವಂದಿಸಿದರು. ಅಬ್ದುರ್ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.