
ಮುಲ್ಕಿ, ಡಿ.24: ಹಳೆಯಂಗಡಿ ಇಂದಿರಾನಗರದಲ್ಲಿರುವ ಗ್ರಾಂ ಪಂಚಾಯತ್ ಅಧಿಕಾರಿಗಳು ಹಾಗೂ ಪಂಚಾಯತ್ ಪ್ರತಿನಿಧಿಗಳು ಕೇವಲ ಸಂವಿದಾನ ಶಿಲ್ಪಿ ಅಂಬೇಡ್ಕರ್ ಅವರ ಹೆಸರಿಗೆ ಮಾತ್ರ ಅವಮಾನ ಮಾಡಿಲ್ಲ. ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ ಎಂದು ಹಳೆಯಂಗಡಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಶ್ರೀಧರ ದಡ್ಡಲ್ಕರ್ ಹೇಳಿದ್ದಾರೆ.
ಹಳೆಯಂಗಡಿ ಇಂದಿರಾನಗರದಲ್ಲಿರುವ ಅಂಬೇಡ್ಕರ್ ಭವನದ ಹೆಸರಿಗೆ ಡಿ.13ರಂದು ಪಂಚಾಯತ್ ಅಧಿಕಾರಿಗಳು ಹಾಗೂ ಪಂಚಾಯತ್ ಪ್ರತಿನಿಧಿಗಳು ಮಸಿ ಬಳಿದು ದಲಿತ ಸಮುದಾಯ ಹಾಗೂ ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳೀಯ ದಲಿತ ಸಂಘರ್ಷ ಸಮಿತಿ ಬುಧವಾರ ಹಳೆಯಂಗಡಿ ಗ್ರಾಪಂ ಎದುರು ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ದಲಿತರನ್ನು ಕೇವಲ ರಾಜಕೀಯ ಲಾಭಕ್ಕಾಗಿ ಮಾತ್ರ ಬಳಸಿಕೊಳ್ಳಲಾಗುತ್ತದೆ ಎಂದು ಆರೋಪಿಸಿದ ಅವರು, ಮಸಿ ಬಳಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಬೇಕು. ಇಲ್ಲವಾದಲ್ಲಿ ಜಿಲ್ಲಾಮಟ್ಟದಲ್ಲಿ ಹೋರಾಟ ಸಂಘಟಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಪ್ರತಿಭಟನಾಕಾರರು ಮನವಿ ನೀಡಲು ಮುಂದಾದಾಗ ಪಂಚಾಯತ್ ಅಧಿಕಾರಿ ಮನವಿ ಪಡೆಯಲು ಹಿಂದೇಟು ಹಾಕಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಕ್ಕೆ ಕಾರಣವಾಯಿತು. ಕೊನೆಗೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸ್ಥಳಕ್ಕೆ ಬಂದು ಪ್ರತಿಭಟನಾಕಾರರಿಂದ ಮನವಿ ಸ್ವೀಕ ರಿಸಿ, ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಬಳಿಕ ಮುಲ್ಕಿ ಪೊಲೀಸ್ ನಿರೀಕ್ಷಕರನ್ನು ಭೇಟಿ ಮಾಡಿದ ದಲಿತ ಸಂಘರ್ಷ ಸಮಿತಿ, ಮಸಿ ಬಳಿದವರನ್ನು ಗುರುವಾರ ಮಧ್ಯಾಹ್ನದ ಒಳಗಾಗಿ ಬಂಧಿಸಬೇಕು. ಇಲ್ಲದಿದ್ದಲ್ಲಿ ಠಾಣೆಗೆ ಮುತ್ತಿಗೆ ಹಾಕುವುದಾಗಿ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ಆನಂದ್ ಕೆರೆಕಡು, ಚಂದ್ರಕುಮಾರ್, ಕೆರೆಕಾಡು ಘಟಕಾಧ್ಯಕ್ಷ ಜಯ ಕೆರೆಕಾಡು, ಕೆರೆಕಾಡು, ಕೊಲ್ನಾಡು, ಹಳೆಯಂಗಡಿ, ಸುರತ್ಕಲ್ ಪರಿಸರದ ದಲಿತ ಸಂಘರ್ಷ ಸಮಿತಿಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರು..!
ಬುಧವಾರ ನಡೆದ ಪ್ರತಿಭಟನೆಯಲ್ಲಿ ಬಿಜೆಪಿಯ ಹಲವು ಮುಖಂಡರು ಕಾಣಿಸಿ ಕೊಂಡಿದ್ದು, ಪ್ರಕರಣ ರಾಜಕೀಯ ತಿರುವು ಪಡೆದು ಕೊಳ್ಳುತ್ತಿದೆ ಎನ್ನುವ ಆರೋಪಗಳು ವ್ಯಕ್ತವಾಗುತ್ತಿದೆ. ಅಲ್ಲದೆ, ಬಿಜೆಪಿ ಈ ಪ್ರಕರಣದ ಲಾಭ ಪಡೆದುಕೊಂಡು ತಾಪಂ ಹಾಗೂ ಜಿಪಂ ಚುನಾವಣೆಯಲ್ಲಿ ದಲಿತರ ಮತಪಡೆಯುವ ಲೆಕ್ಕಾಚಾರ ಹಾಕುತ್ತಿದೆ ಎನ್ನಲಾಗಿದೆ.
ಪರಿಶಿಷ್ಟ ಜಾತಿ ಪಂಗಡಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಚಂದ್ರಕಾಂತ್ ಮಾತನಾಡಿ, ಹಳೆಯಂಗಡಿ ಇಂದಿರಾನಗರದಲ್ಲಿರುವ ಸಭಾಭವನ ದೇವರಾಜ ಅರಸು ಅವರ ಕೊಡುಗೆ. ಇದನ್ನು ಪಂಚಾಯತ್ ದುರುಪಯೋಗಪಡಿಸಿಕೊಳ್ಳುತ್ತಿದೆ. ಅಲ್ಲದೆ, ಪಂಚಾಯತ್ ಸಮುದಾಯದ ಏಳಿಗೆಗೆ ಬಳಸಬೇಕಾಗಿರುವ ಸರಕಾರಿ ನಿಧಿಯನ್ನು ದುರುಪಯೋಗಪಡಿಸಿಕೊಂಡಿರುವ ಬಗ್ಗೆ ದಾಖಲೆಗಳು ಇವೆ ಎಂದರು.