ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ
ಫೋಟೋ: ಅಶೋಕ್ ಬೆಳ್ಮಣ್
ಶಾರ್ಜಾ, ಡಿ.5: ಬಂಟ್ಸ್ ಥ್ರೋಬಾಲ್ ದುಬೈ ಇವರ ಆಶ್ರಯದಲ್ಲಿ ಶಾರ್ಜಾದ ವಂಡರೆರ್ಸ್ ಸ್ಪೋರ್ಟ್ ಕ್ಲಬ್ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾಟದಲ್ಲಿ ಇಂಡಿಯನ್ ಸ್ಪೈಕರ್ ತಂಡ ಕಪ್ ತನ್ನದಾಗಿಸಿಕೊಂಡರೆ, ಪುರುಷರ ಹಾಗೂ ಮಹಿಳೆಯರ ಥ್ರೋಬಾಲ್ ಪಂದ್ಯಾಟದಲ್ಲಿ ಬಂಟ್ಸ್ ದುಬೈ ತಂಡ ಗೆದ್ದುಕೊಂಡಿತು.
ಬೆಳಗ್ಗೆಯಿಂದ ಸಂಜೆಯ ವರೆಗೆ ನಡೆದ ಪುರುಷರ ವಾಲಿಬಾಲ್ ಹಾಗೂ ಪುರುಷರ ಹಾಗೂ ಮಹಿಳೆಯರ ಥ್ರೋಬಾಲ್ ಪಂದ್ಯಾಟದಲ್ಲಿ ಘಟಾನುಘಟಿ ತಂಡಗಳು ಟ್ರೋಫಿಗಾಗಿ ಸೆಣಸಾಟ ನಡೆಸಿದವು.
ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಇಂಡಿಯನ್ ಸ್ಪೈಕರ್ ತಂಡವು ಫೈನಲ್ನಲ್ಲಿ ಸೈಫ ಚಿಲಿವಿಲಿ ತಂಡವನ್ನು ರೋಚಕವಾಗಿ ಸೋಲಿಸಿತು. ಇನ್ನೊಂದೆಡೆ ಪುರುಷರ ಥ್ರೋಬಾಲ್ ಪಂದ್ಯದ ಫೈನಲ್ನಲ್ಲಿ ಕೋಸ್ಟಲ್ ಫ್ರೆಂಡ್ಸ್ ತಂಡವನ್ನು ಬಂಟ್ಸ್ ದುಬೈ ತಂಡ ಸೋಲಿಸಿದರೆ, ಮಹಿಳೆಯರ ವಿಭಾಗದಲ್ಲಿ ಬಂಟ್ಸ್ ದುಬೈ ತಂಡವು ಅಬುಧಾಬಿ ಕರ್ನಾಟಕ ತಂಡವನ್ನು ಸೋಲಿಸುವ ಮೂಲಕ ವಿಜಯದ ಪತಾಕೆ ಹಾರಿಸಿತು.
ವಾಲಿಬಾಲ್ ಪಂದ್ಯಾಟದಲ್ಲಿ ಬೆಸ್ಟ್ ಸ್ಟ್ರೈಕರ್ ಪ್ರಶಸ್ತಿಯನ್ನು ಸೈಫ ಚಿಲಿವಿಲಿ ತಂಡದ ಅನೂಪ್ ಡಿಕೋಸ್ತಾ ಪಡೆದರೆ, ಬೆಸ್ಟ್ ಸೆಟ್ಟರ್ ಪ್ರಶಸ್ತಿಯನ್ನು ಅದೇ ತಂಡದ ಸಮೀರ್ ಹಾಗೂ ಬೆಸ್ಟ್ ಆಲ್ರೌಂಡರ್ ಪ್ರಶಸ್ತಿ ಇಂಡಿಯನ್ ಸ್ಪೈಕರ್ ತಂಡದ ಸುಜಿತ್ ಆಚಾರ್ಯ ಪಾಲಾದವು.
ಥ್ರೋಬಾಲ್ ಮಹಿಳೆಯರ ವಿಭಾಗದಲ್ಲಿ ಬೆಸ್ಟ್ ಸ್ಟ್ರೈಕರ್ ಬಂಟ್ಸ್ ದುಬೈ ತಂಡದ ಸಂಗೀತ ಶೆಟ್ಟಿ, ಬೆಸ್ಟ್ ಡಿಫೆಂಡರ್ ಬಂಟ್ಸ್ ದುಬೈ ತಂಡದ ಅಕ್ಷತಾ ಶೆಟ್ಟಿ ಹಾಗೂ ಬೆಸ್ಟ್ ಆಲ್ರೌಂಡರ್ ಪ್ರಶಸ್ತಿ ಅಬುಧಾಬಿ ಕರ್ನಾಟಕ ತಂಡದ ಚೇತನಾ ಪ್ರಭು ಪಡೆದುಕೊಂಡರು.
ಥ್ರೋಬಾಲ್ ಪುರುಷರ ವಿಭಾಗದಲ್ಲಿ ಬೆಸ್ಟ್ ಸ್ಟ್ರೈಕರ್ ಬಂಟ್ಸ್ ದುಬೈ ತಂಡದ ಕಿರಣ್ ಶೆಟ್ಟಿ, ಬೆಸ್ಟ್ ಡಿಫೆಂಡರ್ ಕೋಸ್ಟಲ್ ಫ್ರೆಂಡ್ಸ್ ತಂಡದ ಅಸ್ಲಿನ್ ಹಾಗೂ ಬೆಸ್ಟ್ ಆಲ್ರೌಂಡರ್ ಪ್ರಶಸ್ತಿ ಬಂಟ್ಸ್ ದುಬೈ ತಂಡದ ರಂಜಿತ್ ಶೆಟ್ಟಿಗೆ ನೀಡಿ ಗೌರವಿಸಲಾಯಿತು.
ಬಲೂನ್ ಹಾರಿಬಿಡುವ ಮೂಲಕ ಪಂದ್ಯಾಟಕ್ಕೆ ಚಾಲನೆ
ಬೆಳಗ್ಗೆ ನಡೆದ ಪಂದ್ಯಾಟದ ಉದ್ಘಾಟನೆಯನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ಭಾರತದ ಖ್ಯಾತ ಬಾಡಿಬಿಲ್ಡರ್ ‘ಮಿಸ್ಟರ್ ವರ್ಲ್ಡ್’ ಪವನ್ ಶೆಟ್ಟಿ, ಉದ್ಯಮಿಗಳಾದ ಪ್ರೇಮ್ನಾಥ್ ಶೆಟ್ಟಿ, ಅವರ ಧರ್ಮಪತ್ನಿ ಭಾಗ್ಯ ಪ್ರೇಮ್ನಾಥ್ ಶೆಟ್ಟಿ, ಸೈಯ್ಯದ್ ಫೈಸಲ್, ಜಯಾನಂದ ಪಕ್ಕಳ, ನಿಶಿತ್ ಆಳ್ವ ಬಲೂನನ್ನು ಆಕಾಶಕ್ಕೆ ಹಾರಿಬಿಡುವ ಮೂಲಕ ಚಾಲನೆ ನೀಡಿದರು. ಶಶಿ ಶೆಟ್ಟಿ ಸ್ವಾಗತಿಸಿದರೆ, ಶೃತಿ ದಿನಕರ್ ಕ್ರೀಡಾಪಟುಗಳಿಗೆ ಕ್ರೀಡಾವಚನ ಭೋದಿಸಿದರು.
‘ಮಿಸ್ಟರ್ ವರ್ಲ್ಡ್’ ಪವನ್ ಶೆಟ್ಟಿಗೆ ಸನ್ಮಾನ
ಪಂದ್ಯಾಟದ ಉದ್ಘಾಟನೆಯ ವೇಳೆ ಭಾರತದ ಖ್ಯಾತ ಬಾಡಿಬಿಲ್ಡರ್ ‘ಮಿಸ್ಟರ್ ವರ್ಲ್ಡ್’ ಪವನ್ ಶೆಟ್ಟಿಯವರಿಗೆ ಅವರ ಸಾಧನೆಯನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು. ಲೇಖಕರಾದ ಗಣೇಶ್ ರೈಯವರು ಸನ್ಮಾನ ಪತ್ರ ವಾಚಿಸಿದರು. ಬಂಟ್ಸ್ ಥ್ರೋಬಾಲ್ ದುಬಾಯಿ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಮುಖ್ಯ ಪ್ರಾಯೋಜಕರು ಸನ್ಮಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಯು.ಎ.ಇ. ಬಂಟ್ಸ್ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು ಉದ್ಘಾಟನಾ ಸಮಾರಂಭ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿ ಸರ್ವರಿಗೂ ಶುಭವನ್ನು ಹಾರೈಸಿದರು. ಇದೇ ವೇಳೆ ವಿವಿಧ ವಯೋಮಿತಿಯ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಪಂದ್ಯಾಟದ ಬಹುಮಾನ ವಿತರಣಾ ಸಮಾರಂಭದ ಮೊದಲು ಪವನ್ ಶೆಟ್ಟಿಯರಿಂದ ದೇಹರ್ದಾಡ್ಯ ಪ್ರದರ್ಶನ ನಡೆಯಿತು. ಪಂದ್ಯಾಕೂಟದ ಕೊನೆಯಲ್ಲಿ ಪ್ರದರ್ಶನ ಪಂದ್ಯವಾಗಿ ಕಬಡ್ಡಿ ಪಂದ್ಯವನ್ನು ಆಯೋಜಿಸಲಾಗಿತ್ತು.
ಬಹುಮಾನ ವಿತರಣಾ ಸಮಾರಂಭ
ಪಂದ್ಯದ ಕೊನೆಯಲ್ಲಿ ವಿಜೇತ ತಂಡಗಳಿಗೆ ಗಣ್ಯರು ಬಹುಮಾನವನ್ನು ವಿತರಿಸಿ ಅಭಿನಂದಿಸಿದರು. ಫೋರ್ಚುನ್ ಗ್ರೂಪ್ ಆಫ್ ಹೊಟೇಲ್ಸ್ನ ಮಾಲಕ ಪ್ರವೀಣ್ ಶೆಟ್ಟಿ ಹಾಗೂ ಅವರ ಧರ್ಮಪತ್ನಿ ರೂಪಾಲಿ ಪ್ರವೀಣ್ ಶೆಟ್ಟಿ, ಪವನ್ ಶೆಟ್ಟಿ, ಸೈಯ್ಯದ್ ಫೈಸಲ್, ವಾಸಿಂ, ಜಯಾನಂದ ಪಕ್ಕಳ, ಅವರ ಪತ್ನಿ ಜಯಲಕ್ಷ್ಮಿ ಪಕ್ಕಳ, ಪ್ರೇಮ್ನಾಥ್ ಶೆಟ್ಟಿ, ಭಾಗ್ಯ ಪ್ರೇಮ್ನಾಥ್ ಶೆಟ್ಟಿ, ಡಾ.ರಶ್ಮಿ ಸೇರಿದಂತೆ ಮತ್ತಿತರರು ವಿಜೇತ ತಂಡಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಶಶಿ ಶೆಟ್ಟಿ ಕೊನೆಯಲ್ಲಿ ವಂದಿಸಿದರು. ಯು.ಎ.ಇ. ಬಂಟ್ಸ್ ಅಧ್ಯಕ್ಷರೂ, ಪಂದ್ಯಾಕೂಟದ ಸಂಘಟಕರೂ ಆಗಿರುವ ಸರ್ವೋತ್ತಮ ಶೆಟ್ಟಿ ಸಮಾರಂಭವನ್ನು ಅಟ್ಟುಕಟ್ಟಾಗಿ ನಡೆಸುವಲ್ಲಿ ಕಾರಣೀಭೂತರಾದರು.