ಮಂಗಳೂರು, ಅ.25: ರಾಜ್ಯ ಯುವಜನ ಸೇವಾ ಮತ್ತು ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಅವರಿಗೆ ವಿದೇಶದಿಂದ ಕೊಲೆ ಬೆದರಿಕೆ ಕರೆ ಬಂದಿರುವ ಕುರಿತು ಮೂಡುಬಿದಿರೆ ಠಾಣೆಗೆ ದೂರು ನೀಡಲಾಗಿದೆ.
ಶನಿವಾರ ಮಧ್ಯಾಹ್ನ ಸುಮಾರು 12:45ರ ವೇಳೆಗೆ ಸಚಿವ ಜೈನ್ ಮುಲ್ಕಿಯಿಂದ ಮೂಡುಬಿದಿರೆಗೆ ಸರಕಾರಿ ವಾಹನದಲ್ಲಿ ತೆರಳುತ್ತಿದ್ದಾಗ ಭೂಗತ ಪಾತಕಿ ರವಿ ಪೂಜಾರಿ ಹೆಸರಿನಲ್ಲಿ ವಿದೇಶದಿಂದ ಕರೆಯೊಂದು ಬಂದಿದೆ.
ಸಚಿವ ಜೈನ್ ಕರೆ ಸ್ವೀಕರಿಸಿದ ತಕ್ಷಣ ‘ಬಜರಂಗ ದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆಯಲ್ಲಿ ನೀವು ನೇರ ಭಾಗಿಯಾಗಿದ್ದೀರಿ. ನಿಮ್ಮನ್ನು ಕೂಡ ಕೊಲ್ಲದೆ ಬಿಡುವುದಿಲ್ಲ’ ಎಂಬ ಧ್ವನಿ ಕೇಳಿ ಬಂದಿದೆ.
ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸದೆ ಧರ್ಮಸ್ಥಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಆದರೆ, ಅಷ್ಟರಲ್ಲೇ ಸುದ್ದಿ ಎಲ್ಲೆಡೆ ಹಬ್ಬಿದೆ. ವಿಷಯ ತಿಳಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎಸ್.ಮುರುಗನ್ ಸಚಿವರ ಮನೆಗೆ ಭೇಟಿ ನೀಡಿ ಸಮಾಲೋಚಿಸಿದ್ದಾರೆ. ಅಲ್ಲದೆ, ಪೊಲೀಸ್ ಬೆಂಗಾವಲಿನ ವ್ಯವಸ್ಥೆ ಕಲ್ಪಿಸಿದ್ದಾರೆ.
